ಆ್ಯಪ್ನಗರ

ಭೀಷ್ಮ ಕೆರೆ ಇನ್ನಷ್ಟು ಸುಂದರ

ಗದಗ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿರುವ ಗದಗ ಬೆಟಗೇರಿ ಅವಳಿ ನಗರದ ಐತಿಹಾಸಿಕ ಭೀಷ್ಮ ಕೆರೆ ಮತ್ತೊಂದು ಸುತ್ತಿನ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ.

Vijaya Karnataka 21 May 2019, 5:00 am
ಗದಗ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿರುವ ಗದಗ ಬೆಟಗೇರಿ ಅವಳಿ ನಗರದ ಐತಿಹಾಸಿಕ ಭೀಷ್ಮ ಕೆರೆ ಮತ್ತೊಂದು ಸುತ್ತಿನ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ.
Vijaya Karnataka Web GDG-20SALIM1A
ಗದಗ ಭೀಷ್ಮ ಕೆರೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.


ಒಟ್ಟು 9.56 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಅಭಿವೃದ್ಧಿಗೆ ಕಾಮಗಾರಿ ಆರಂಭವಾಗಿದ್ದು, ಕೆರೆ ಅಭಿವೃದ್ಧಿ ಮತ್ತು ವಿಸ್ತರಣೆ, ಗೇಬಿಯನ್‌ ವಾಲ್‌ ಸಹಿತ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ.

ಗದಗ ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿರುವ 103 ಎಕರೆ ಪ್ರದೇಶದ ವಿಶಾಲವಾದ ಕೆರೆ ಈ ಹಿಂದಿನ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ವಿಶ್ವಗುರು ಬಸವಣ್ಣನವರ ಅತಿ ಎತ್ತರದ ಮೂರ್ತಿ ನಿರ್ಮಾಣದ ನಂತರ ಕೆರೆಯ ಚಿತ್ರಣವೇ ಬದಲಾಗಿತ್ತು. ಬೋಟಿಂಗ್‌ ಆರಂಭವಾಗಿ ನೂರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಾಗಿತ್ತು. ಸಧ್ಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ಜನ ಅಭಿವೃದ್ಧಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೆರೆ ವಿಸ್ತರಣೆ :

ಕೇಂದ್ರ ಸರಕಾರದ ಅಮೃತ ಸಿಟಿ ಯೋಜನೆಯಡಿ ಶೇ. 50ರಷ್ಟು ಅನುದಾನ, ರಾಜ್ಯ ಸರಕಾರದ ಶೇ. 20ರಷ್ಟು ಅನುದಾನ, ನಗರಸಭೆಯ ಶೇ. 30ರಷ್ಟು ವಂತಿಗೆ ಸೇರಿ ಒಟ್ಟು 9.56 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಹಿಂದೆ 29.26 ಎಕರೆ ಪ್ರದೇಶದಲ್ಲಿ ಹೂಳು ತೆಗೆದು ಕೆರೆ ತುಂಬಿಸಲಾಗಿತ್ತು. ಈಗ ಬಸವೇಶ್ವರ ಮೂರ್ತಿಯ ಎರಡು ಬದಿಯ ಸುಮಾರು 60 ಎಕರೆ ಪ್ರದೇಶದ ಹೂಳು ತೆಗೆದು ನೀರು ನಿಲ್ಲಿಸುವ ಯೋಜನೆ ರೂಪಿಸಲಾಗಿದೆ. ಜತೆಗೆ ಬಸವೇಶ್ವರ ಮೂರ್ತಿ ಸುತ್ತಲೂ ಬೋಟಿಂಗ್‌, ವಾಕಿಂಗ್‌ ಪಾಥ್‌ ನಿರ್ಮಿಸುವ ಯೋಚನೆಯೂ ಇದೆ ಎನ್ನುತ್ತಾರೆ ಅಧಿಕಾರಿಗಳು.

ಖಾಸಗಿ ಸಂಸ್ಥೆಗೆ ಗುತ್ತಿಗೆ :

ಭೀಷ್ಮಕೆರೆ ಎರಡನೇ ಹಂತದ ಅಭಿವೃದ್ಧಿಗೆ ಗೋವಾ ಮೂಲದ ಎಫೆಕ್ಟಿವ್‌ ಆರ್ಕಿಟೆಕ್ಟರ್‌ ಸರ್ವಿಸಸ್‌ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಕಂಪನಿಗೆ ಸೂಚನೆ ನೀಡಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.

ಗ್ಯಾಬಿಯನ್‌ ವಾಲ್‌ :

ಭೀಷ್ಮ ಕೆರೆ ಸುತ್ತ 15 ಅಡಿ ಅಗಲದಷ್ಟು ವಾಕಿಂಗ್‌ ಪಾತ್‌ ನಿರ್ಮಿಸಲು ವಿಶೇಷವಾಗಿ ಗ್ಯಾಬಿಯನ್‌ ವಾಲ್‌ ನಿರ್ಮಿಸಲಾಗಿದೆ. ಆಯಾ ಭಾಗಕ್ಕೆ ತಕ್ಕಂತೆ 1ರಿಂದ 4 ಚದರ್‌ ಅಡಿ ಅಳತೆಯಲ್ಲಿ ಜೆಐ ತಂತಿಯಿಂದ ಚೌಕಾಕಾರದಲ್ಲಿ ಜಾಲಿ ನಿರ್ಮಿಸಿ ಅದರಲ್ಲಿ ಬೃಹತ್‌ ಗಾತ್ರದ ಕಲ್ಲುಗಳನ್ನು ತುಂಬಿಸಲಾಗುತ್ತದೆ. ಇದು ನೋಡಲು ಆಕರ್ಷಕವಾಗಿದ್ದು, ಕೆರೆಯೂ ಗಟ್ಟಿಯಾಗಿ ಉಳಿಯಲಿದೆ.ಗೇಬಿಯನ್‌ ಗೋಡೆ ಮೇಲೆ ಇಂಟರ್‌ಲಾಕ್‌ ಬಳಸಿ 15 ಅಡಿ ವಿಸ್ತೀರ್ಣದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ಕೆರೆ ಸುತ್ತಲೂ ಪ್ರವಾಸಿಗರು ಸಂಚರಿಸಲು ಬ್ಯಾಟರಿ ಚಾಲಿತ ವಾಹನ ಬಳಕೆಗೂ ಸಹಕಾರಿ ಆಗಲಿದೆ. ಇಂಥ ಗೋಡೆ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ನಗರಸಭೆ ಅಭಿಯಂತರ ಎಚ್‌.ಎ. ಬಂಡಿವಡ್ಡರ.

ಪ್ರವಾಸಿ ತಾಣ :

ಕೆರೆಯ ಶೇ. 70ರಷ್ಟು ಭಾಗದಲ್ಲಿ ನೀರು ಶೇಖರಣೆ ಮತ್ತು ಇನ್ನುಳಿದ ಶೇ. 30ರಷ್ಟು ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕೈಗೊಳ್ಳಲಾಗುವುದು. ಭೀಷ್ಮಕೆರೆಯ ಪ್ರವೇಶ ದ್ವಾರದ ಬಳಿ 500 ವಾಹನಗಳು ನಿಲ್ಲಲು ಪಾರ್ಕಿಂಗ್‌ ವ್ಯವಸ್ಥೆ, ಓಪನ್‌ ಜಿಮ್‌, ಫುಡ್‌ ಪಾರ್ಕ್‌, ವಸ್ತು ಪ್ರದರ್ಶನ ಮಳಿಗೆ, ಓಪನ್‌ ಥೇಟರ್‌, ಕಾರಂಜಿ, ಚಿಣ್ಣರ ಉದ್ಯಾನ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ