ಆ್ಯಪ್ನಗರ

ಮೆಕ್ಕೆಜೋಳಕ್ಕೆ ಕಂಬಳಿ ಹುಳು ಕಾಟ !

​ರೋಣ : ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಬಿಂಬಿತಗೊಂಡಿರುವ ಮೆಕ್ಕೆಜೋಳಕ್ಕೆ ಕೆಂಪು ತಲೆ ಕಂಬಳಿ ಹುಳು ಬಾಧೆ ವ್ಯಾಪಕವಾಗಿದ್ದು,ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka 29 Jul 2019, 5:00 am
ಯಲ್ಲಪ್ಪ ತಳವಾರ
Vijaya Karnataka Web blanket worms for maize
ಮೆಕ್ಕೆಜೋಳಕ್ಕೆ ಕಂಬಳಿ ಹುಳು ಕಾಟ !

ರೋಣ : ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಬಿಂಬಿತಗೊಂಡಿರುವ ಮೆಕ್ಕೆಜೋಳಕ್ಕೆ ಕೆಂಪು ತಲೆ ಕಂಬಳಿ ಹುಳು ಬಾಧೆ ವ್ಯಾಪಕವಾಗಿದ್ದು,ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿರಂತರ ಬರದಿಂದ ಜಂಘಾಬಲ ಕಳೆದುಕೊಂಡಿರುವ ರೈತ ಸಮೂಹ ಪ್ರಸಕ್ತ ವರ್ಷ ಸುರಿಯುತ್ತಿರುವ ತುಸು ಮಳೆಯಿಂದ ಹಿಂದಿನ ಬರದ ಬವಣೆಯಿಂದ ಪಾರಾಗಲು ಮಳೆಯಾಶ್ರೀತ ಹಾಗೂ ಅಳಿದುಳಿದ ಕೊಳವೆ ಬಾವಿಯ ಅಂತರ್ಜಲ ಹಾಗೂ ಆಗೋಮ್ಮೆ,ಈಗೋಮ್ಮೆ ನಾಲ್ಕು ಹನಿ ಉದುರುವ ಮಳೆಯನ್ನು ನೆಚ್ಚಿಕೊಂಡು ಮೆಕ್ಕೆಜೋಳ ಬಿತ್ತನೆಗೆ ಮುಂದಾದರು. ಕೃಷಿಕರು ಅಂದುಕೊಂಡಂತೆ ಬೆಳೆಯೂ ಸಹ ಉತ್ತಮ ರೀತಿಯಲ್ಲಿ ಬೆಳೆದು ನಿಂತಿತ್ತು. ಇದರಿಂದ ಬೆಳೆಗಾರ ಲಾಭದ ಕನಸು ಕಂಡಿದ್ದ.ಆದರೆ,25 ರಿಂದ 30 ದಿನದ ಎಳೆ ಬೆಳೆಗೆ ಕೆಂಪು ತಲೆ ಹುಳು ಬಾಧೆ ವ್ಯಾಪಕವಾಗಿದೆ. ಬಾಧೆ ನಿಯಂತ್ರಣಕ್ಕೆ ಬೆಳೆಗಾರರು ಬಳಸಿದ ಎಲ್ಲ ಪ್ರಯೋಗಗಳು ನಿರುಪಯುಕ್ತಗೊಂಡ ಪರಿಣಾಮ ಮೆಕ್ಕೆಜೋಳ ಬೆಳೆದ ತಪ್ಪಿಗಾಗಿ ರೈತರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

30,200 ಹೆಕ್ಟೇರ್‌ ಮಸಾರಿ(ಜೌಗು ಮಿಶ್ರಿತ ಕೆಂಪು) ಪ್ರದೇಶ.56,035 ಹೆಕ್ಟೇರ್‌ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಆದರೆ,ಮುಂಗಾರು ಹಂಗಾಮಿನ ಮಧ್ಯ ಭಾಗದಲ್ಲಿ ವರುಣ ತೋರಿದ ತುಸು ಕೃಪೆಯಿಂದ ಬಿತ್ತನೆ ಕಾರ್ಯ ಮಾಡಿದ್ದಾರೆ. ಆಗ ವರುಣ ತೋರಿದ ಉತ್ಸಾಹ ನಂತರದಲ್ಲಿ ದಿನಗಳಲ್ಲಿ ಕಣ್ಮರೆಯಾದ ಪರಿಣಾಮ ಸಮರ್ಪಕ ಮಳೆ ಸುರಿಯಬಹುದೆಂಬ ಅನ್ನದಾತನ ನಿರೀಕ್ಷೆಗಳೆಲ್ಲ ಹುಸಿಗೊಳ್ಳುತ್ತಿವೆ. ಆದರೆ ಬಿತ್ತನೆ ಸಮಯದಲ್ಲಿ 110.23 ಮಿಮೀ ಮಳೆ ಪ್ರಮಾಣದಿಂದ ಬಿತ್ತನೆ ಮಾಡಿದ ಬೀಜಗಳು ಮೊಳೆಕೆಯೊಡೆಯಲು ಮಾತ್ರ ಸಾಧ್ಯವಾಯಿತು. ಬಿತ್ತಿದ ಬೀಜಗಳು ಸಸಿಗಳಾಗಿ ನಿಂತಿವೆ. ಸದ್ಯ ಸಸಿಗಳಿಗೆ ಜೀವಜಲದ ಚಿಂತೆ ಎದುರಾಗಿರುವುದು ಒಂದೆಡೆಯಾದರೆ,ಕಂಬಳಿ ಹುಳು ಬಾಧೆ ಮೊತ್ತೊಂದೆಡೆ.

ಸಾಮೂಹಿಕ ದಾಳಿ :
ತಿಂಗಳ ಒಳಗಿನ ಎಳೆಯ ಬೆಳೆ ಆಯ್ಕೆ ಮಾಡಿಕೊಳ್ಳುವ ಕೆಂಪು ತಲೆ ಕಂಬಳಿ ಹುಳು ಮೆಕ್ಕೆಜೋಳದ ಗಿಡವೊಂದನ್ನು ಆಯ್ಕೆ ಮಾಡಿಕೊಂಡು 6 ರಿಂದ 8 ಹುಳುಗಳ ತಂಡ ಸಾಮೂಹಿಕವಾಗಿ ದಾಳಿ ಇಡುತ್ತಿವೆ.ಗಿಡವನ್ನು ಪೂರ್ಣ ಪ್ರಮಾಣದಲ್ಲಿ ತಿಂದು ಹಾಕಿದ ಬಳಿಕ ಪಕ್ಕದಲ್ಲಿನ ಗಿಡವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಒಂದೊಂದರಂತೆ ಜಮೀನಿಗೆ ದಾಳಿ ಇಡುತ್ತಿರುವ ಹುಳದ ಬಾಧೆಯಿಂದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ನಿಯಂತ್ರಣಕ್ಕೆ ಬರುತ್ತಿಲ್ಲ :
15 ದಿನಗಳಿಂದ ಮೆಕ್ಕೆಜೋಳ ಬೆಳೆಗೆ ಲಗ್ಗೆ ಇಟ್ಟಿರುವ ಕೆಂಪು ತಲೆ ಕಂಬಳಿ ಹುಳು ಕೀಟ ಬಾಧೆ ನಿಯಂತ್ರಣಕ್ಕೆ ಬೆಳೆಗಾರರು ನಡೆಸಿದ ಪ್ರಯತ್ನಗಳು ವಿಫಲಗೊಂಡಿವೆ.ಕೀಟಬಾಧೆ ಕಾಣಿಸಿಕೊಂಡ ತಕ್ಷ ಣವೇ ಲೀಟರ್‌ಗೆ 250 ರೂ.ಮೌಲ್ಯದ ಚಂಡಿಕಾ ರಸಾಯನಿಕವನ್ನು ಎರಡು ಬಾರಿ ಸಿಂಪರಿಸಲಾಗಿದೆ. ಹೀಗಿದ್ದರೂ ಕೀಟಬಾಧೆ ಮಾತ್ರ ಹತೋಟಿಗೆ ಬರುತ್ತಿಲ್ಲ. ಕಳೆದ ಹಲವು ವರ್ಷಗಳಿಂದಲೂ ಮೆಕ್ಕೆಜೋಳ ಬೆಳೆಗಾರರ ನೆಮ್ಮದಿ ಕೆಡಿಸಿರುವ ಕೆಂಪು ತಲೆ ಕಂಬಳಿ ಹುಳು ಕೀಟ ವಿಪರೀತವಾಗುತ್ತಿದೆ.

ಹತೋಟಿ ಕ್ರಮಗಳು:
ರೈತರು ಅನಾವಶ್ಯಕ ರಾಸಾಯನಿಕಗಳನ್ನು ಸಿಂಪರಿಸದೆ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ ಫೇನವಾಲ್‌ ಡಸ್ಟ್‌ ಪೌಡರನ್ನು ಸಿಂಪರಿಸಬೇಕು.ಎಕರೆಗೆ ಕನಿಷ್ಠ 10 ಕೆ.ಜಿಯಷ್ಟು ಬೆಳಗಿನ ಜಾವ ಇಲ್ಲವೆ ಸಂಜೆ ವೇಳೆ ಸಿಂಪರಿಸಬೇಕು.ಆಗ ಮಾತ್ರ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತದೆ ಎಂದು ಕೃಷಿ ಸಹಾಯಕ ಶಿವಪುತ್ರಪ್ಪ ದೊಡ್ಡಮನಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ