ಆ್ಯಪ್ನಗರ

ಮಾದರಿ ಗ್ರಾಮಕ್ಕೆ ಸಿಎಂ ಸಿದ್ಧ

ಶಿರಹಟ್ಟಿ : 13 ವರ್ಷಗಳ ಹಿಂದೆ ಸಿಎಂ ಕುಮಾರಸ್ವಾಮಿ ಅವರು ತಾಲೂಕಿನ ಸುಗ್ನಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ಜನರಿಂದ ಮನವಿ ಸ್ವೀಕರಿಸಿದ್ದರು. ಅದರಲ್ಲಿ ಕೆಲವು ಈಡೇರಿದ್ದು, ಬಾಕಿ ಉಳಿದ ಬೇಡಿಕೆ ಈಡೇರಿಸಿ ಗ್ರಾಮವನ್ನು ಮಾದರಿಯ ಗ್ರಾಮವನ್ನಾಗಿಸುವುದಕ್ಕೆ ಕುಮಾರಸ್ವಾಮಿ ಸಿದ್ದರಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ‍್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ ಹೇಳಿದರು.

Vijaya Karnataka 10 Jun 2019, 5:00 am
ಶಿರಹಟ್ಟಿ : 13 ವರ್ಷಗಳ ಹಿಂದೆ ಸಿಎಂ ಕುಮಾರಸ್ವಾಮಿ ಅವರು ತಾಲೂಕಿನ ಸುಗ್ನಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ಜನರಿಂದ ಮನವಿ ಸ್ವೀಕರಿಸಿದ್ದರು. ಅದರಲ್ಲಿ ಕೆಲವು ಈಡೇರಿದ್ದು, ಬಾಕಿ ಉಳಿದ ಬೇಡಿಕೆ ಈಡೇರಿಸಿ ಗ್ರಾಮವನ್ನು ಮಾದರಿಯ ಗ್ರಾಮವನ್ನಾಗಿಸುವುದಕ್ಕೆ ಕುಮಾರಸ್ವಾಮಿ ಸಿದ್ದರಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ‍್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ ಹೇಳಿದರು.
Vijaya Karnataka Web GDG-9SHT1
ಈ ಹಿಂದೆ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದ ಸುಗ್ನಳ್ಳಿಗೆ ಭಾನುವಾರ ಸಿಎಂ ರಾಜಕೀಯ ಕಾರ‍್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.


ಅವರು ಭಾನುವಾರ ಸಿಎಂ ಸೂಚನೆ ಮೇರೆಗೆ ಸುಗ್ನಳ್ಳಿ ಗ್ರಾಮಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಮಾತನಾಡಿದರು.

ಸುಗ್ನಳ್ಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಬಗ್ಗೆ ವರದಿ ಸಲ್ಲಿಸಲು ಸಿಎಂ ನನಗೆ ಸೂಚನೆ ನೀಡಿದ್ದರ ಮೇರೆಗೆ ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಆಲಿಸಲಾಗುತ್ತಿದೆ. ಗ್ರಾಮಸ್ಥರಿಗೆ ಭರವಸೆ ನೀಡಿದಂತೆ ಕಳೆದ ಬಜೆಟ್‌ನಲ್ಲಿ ಗ್ರಾಮದ ಆಲದಮ್ಮನ ಕೆರೆಗೆ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ 10ಕೋಟಿ ಅನುದಾನ ಮೀಸಲಿರಿಸಿದ್ದು ಇದು ಈಗ ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಗ್ರಾಮದ ರೈತರಿಗೆ ವರವಾಗಲಿರುವಂತಹ ಮುಕುಟಕೆರೆಗೂ ಸಹ ನದಿ ನೀರು ತುಂಬಿಸುವುದಕ್ಕಾಗಿ 11ಕೋಟಿಯ ಪ್ರಸ್ತಾವನೆಯು ಸಧ್ಯ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವುದು ಬಾಕಿ ಇದೆ. ಇನ್ನೂ ಬಹುತೇಕ ಅಹವಾಲುಗಳಲ್ಲಿ ಆಶ್ರಯ ಮನೆ ನೀಡುವುದಾಗಿದ್ದು, ಇದಕ್ಕೂ ಸಹ 8-10 ಎಕರೆ ಜಮೀನು ಖರೀದಿಗೆ ಸರಕಾರ ಸಿದ್ದವಿದ್ದು, ರೈತರು ಜಮೀನು ನೀಡಲು ಮುಂದೆ ಬಂದರೆ 15 ದಿನಗಳಲ್ಲಿ ಜಮೀನು ಖರೀದಿಸಿ ಫಲಾನುಭವಿಗಳಿಗೆ ಮನೆ ನೀಡಲು ಸರಕಾರ ಸಿದ್ದವಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸುವುದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ವೃದ್ಧಾಪ್ಯ ವೇತನ ಹೆಚ್ಚಳ ಮಾಡಿದ್ದೇ ಇಲ್ಲಿ :

ಈ ಹಿಂದಿನ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ವೃದ್ದಾಪ್ಯವೇತನ ಹೆಚ್ಚಿಸಬೇಕೆಂದು ವಯೋವೃದ್ದರು ಬೇಡಿಕೆ ಇಟ್ಟ ಸಮಯದಲ್ಲಿ ಕುಮಾರಸ್ವಾಮಿ ಅವರು ಮಾಸಾಶನ ಹೆಚ್ಚಿಗೆ ಮಾಡಿದ್ದರು. ಇಂದು ಎಲ್ಲರಿಗೂ ಇದರ ಲಾಭ ದೊರೆಯುತ್ತಿದೆ.

ಬಿಜೆಪಿಯವರಿಗೆ ಅಭಿನಂದನೆ :

ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡುತ್ತಿರುವುದು ಯಾವುದೇ ಗಿಮಿಕ್‌ಗೆ ಅಲ್ಲ, 13 ವರ್ಷಗಳ ನಂತರ ಗ್ರಾಮವಾಸ್ತವ್ಯ ಮಾಡಿದ ಗ್ರಾಮಕ್ಕೆ ತೆರಳಿ ವಸ್ತು-ಸ್ಥಿತಿ ಪರಿಶೀಲಿಸಿ ಅಗತ್ಯವಿರುವ ಅಭಿವೃದ್ಧಿ ಕಾರ‍್ಯ ಮಾಡುವುದಕ್ಕೆ ಸಿಎಂ ಮುಂದಾಗುತ್ತಿದ್ದಾರೆ. ಸಿಎಂ ಗ್ರಾಮವಾಸ್ತವ್ಯ ಮಾಡುತ್ತಿರುವುದಕ್ಕೆ ಬಿಜೆಪಿ ಯವರು ಎಚ್ಚೆತ್ತು ಬರ ಅಧ್ಯಯನ ನಡೆಸುತ್ತಿದ್ದಾರೆ. ಇದಕ್ಕೆ ಬಿಎಸ್‌ವೈಗೆ ಅಭಿನಂದನೆ ಸಲ್ಲಿಸುವೆ. ಇಷ್ಟು ದಿವಸ ಹಗಲು ಕನಸು ಕಂಡರೂ ಇನ್ನು ಮುಂದೆಯಾದರೂ ಜನತೆಯ ಸಮಸ್ಯೆ ಆಲಿಸಲಿ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಆಲದಮ್ಮನ ಕೆರೆ ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿರಿಸಿದ್ದಾರೆ. ಮುಕುಟಕೆರೆಗೂ ಸಹ ಕಾಯಕಲ್ಪ ನೀಡುವುದಕ್ಕಾಗಿ 10 ಕೋಟಿ ಬಿಡುಗಡೆಗೊಳಿಸಿ ಪ್ರತಿ ಕಿಮೀಗೆ 4 ಚೆಕ್‌ಡ್ಯಾಂಗಳನ್ನು ನಿರ್ಮಿಸಬೇಕು. ಗ್ರಾಮದಲ್ಲಿ ಕುರಿ ಉಣ್ಣೆ ನೇಯುವವರ ಸಂಖ್ಯೆ ಹೆಚ್ಚಿಗೆ ಇದ್ದು ಇದಕ್ಕೂ ಸಹ ಕಾಯಕಲ್ಪ ನೀಡಬೇಕು. ಜತೆಗೆ ಗ್ರಾಮಸ್ಥರ ಒಕ್ಕೊರಲಿನ ಬೇಡಿಕೆಯಾದಂತಹ ಆಶ್ರಯ ಮನೆ ಹಂಚಿಕೆಗೆ 6-8 ಎಕರೆ ಜಮೀನು ಖರೀದಿಸಿ, ಅದರಲ್ಲಿ ಮನೆಗಳನ್ನು ಹಂಚಿಕೆ ಮಾಡಿ ಅದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಬಡಾವಣೆ ಎಂದು ನಾಮಕರಣಗೊಳಿಸಿದರೆ ಶಾಶ್ವತವಾಗಿ ಅವರ ಹೆಸರು ಉಳಿಯಲಿದೆ. 1 ಎಕರೆಯಲ್ಲಿ ವಿಶಾಲವಾದ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಜತೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ವಿಶೇಷ ಅನುದಾನ ಒದಗಿಸಬೇಕೆಂದರು.

ಮಾಜಿ ಜಿಪಂ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಗ್ರಾಮಕ್ಕೆ ವಿಶೇಷ ಅನುದಾನ ಒದಗಿಸಿ ಎಂದರು. ಸಿಎಂ ಆಪ್ತ ಸಹಾಯಕ ಗಂಗಾಧರ ಹೊಂಬಾಳಿಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಗ್ರಾಪಂ ಅಧ್ಯಕ್ಷೆ ಗಿರಿಜಾ ಕುರಿ, ಎಸ್‌.ವಿ.ಬಡ್ನಿ, ಅಂದಾನಯ್ಯ ಕುರ್ತಕೋಟಿಮಠ, ಚನ್ನಬಸಯ್ಯ ಮಾಗಳಮಠ, ಸಿದ್ದಲಿಂಗಯ್ಯ ಹೊಂಬಾಳಿಮಠ, ಎಚ್‌.ಎಸ್‌.ಜಕ್ಕಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರಾಯಿ ಬಂದ್‌ :
ಗ್ರಾಮದಲ್ಲಿ ಸಾರಾಯಿ ನಿಷೇಧಿಸಬೇಕೆಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯ ಪಡಿಸುತ್ತಿರುವಂತಹ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಇವತ್ತಿನಿಂದಲೇ ಗ್ರಾಮದಲ್ಲಿ ಸಾರಾಯಿ ಬಂದ್‌ ಮಾಡಲು ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದರು.

ಡಿಬಿಒಟಿ ಅಧಿಕಾರಿಯೊಂದಿಗೆ ಸಭೆ :
ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ನಾಳೆಯೇ ಡಿಬಿಒಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುಗ್ನಳ್ಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ