ರೋಣ (ಗದಗ): ಇಟಗಿ ಭೀಮಮ್ಮನಿಗೆ ಕಾಯಿ ಕಟ್ಟಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟು ಬೇರಾವ ಪಕ್ಷವೂ ಅಧಿಕಾರಕ್ಕೆ ಬರಲ್ಲ. ಈಗ ಇದ್ದವರೇ ಶಾಸಕರಾಗ್ತಾರೆ. ಈಗಿನ ಮಂತ್ರಿಗಳೇ ಮುಂದುವರಿಯುತ್ತಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ವಿ.ಎಫ್.ಪಾಟೀಲ ಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷ ಣಾಧಿಕಾರಿ ಕಾರ್ಯಾಲಯ, ಗುರುಭವನ ಕಟ್ಟಡ ಉದ್ಘಾಟನೆ, ಡಿ.ದೇವರಾಜ ಅರಸ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡದ ಭೂಮಿ ಪೂಜೆ, ತೆಂಗು ಮತ್ತು ನಾರು ನಿಗಮದಿಂದ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
''ಈ ಹಿಂದೆ ಬಿಜೆಪಿಗೆ ಐದು ವರ್ಷ ಅಧಿಕಾರ ಕೊಟ್ಟು ನೋಡಿದ್ದೀರಿ. ಅವರು ಬ್ಲೂ ಫಿಲ್ಮ್ ನೋಡಿದ್ದು ಜೈಲಿಗೆ ಹೋಗಿದ್ದು ಬಿಟ್ರೆ ಮತ್ತೇನು ಮಾಡ್ಯಾರ ಅಂತ ನಿಮಗೇ ಗೊತ್ತು'' ಎಂದು ಬಿಜೆಪಿಯನ್ನು ತಿವಿದರು.
ಬಡವರ ಹೊಟ್ಟೆ ಮೇಲೆ ಹೊಡೆದ ಕೇಂದ್ರ:
''ಗೋಹತ್ಯೆ ನಿಷೇಧ ಜಾರಿಗೆ ತಂದ ಕೇಂದ್ರ ಸರಕಾರ ಬಡವರ ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡಿದೆ. ಗೋವು ಅಂದರೆ ನಮಗೂ ಏನು ಅಂತ ಗೊತ್ತು. ವಯಸ್ಸಾದ ಗೋವುಗಳನ್ನು ರೈತರು ಮಾರಾಟ ಮಾಡ್ತಿದ್ರು. ಅದರಿಂದ 20 ರಿಂದ 30 ಸಾವಿರ ಹಣ ರೈತರ ಕೈ ಸೇರುತ್ತಿತ್ತು. ಅದರ ಮಾಂಸ, ಚರ್ಮ ಮಾರಾಟ ಮಾಡಿ ಅದೆಷ್ಟೊ ಬಡವರು ಬದುಕುತ್ತಿದ್ದರು. ಈಗ ಅದಕ್ಕೂ ಕೇಂದ್ರ ಅಡ್ಡಿ ಮಾಡಿದೆ'' ಎಂದರು.
''ಯಾವ ಕಾರಣಕ್ಕೂ ರಾಜ್ಯದಲ್ಲಿ ಗೋ ಮಾಂಸ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ. ಆಹಾರ ಪದ್ಧತಿ ನಮ್ಮ ಹಕ್ಕು. ಅದನ್ನು ನಮ್ಮ ಇಷ್ಟ ಬಂದಂತೆ ಮಾಡಬಹುದು. ಬಿಜಿಪಿ ಹಿಂದೂಗಳ ಪರವಾದರೆ ನಾವು ಸರ್ವರ ಪರವಾದ ಆಡಳಿತ ನಡೆಸುತ್ತಿದ್ದೇವೆ'' ಎಂದರು
''ನಾವೂ ಹಿಂದೂಗಳೇ ನಮ್ಮದೂ ಹಿಂದೂ ಧರ್ಮ. ಮಠ, ಮಾನ್ಯಗಳೂ ಎಲ್ಲವೂ ಬಿಜೆಪಿಯವರದೇ ಅಲ್ಲ. ಉತ್ತರದ ಗಾಳಿ ಇಲ್ಲಿ ಬೀಸುವುದಿಲ್ಲ'' ಎಂದು ಹೇಳಿದರು.
ಶಾಸಕ ಜಿ.ಎಸ್.ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ನರಗುಂದ ಶಾಸಕ ಬಿ.ಆರ್.ಯಾವಗಲ್ಲ, ಮುಂಡರಗಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಅಧ್ಯಕ್ಷ ವಾಸಣ್ಣ ಕೂರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ ಮತ್ತಿತರರು ಇದ್ದರು.
ರೈತರೇ ವಯಸ್ಸಾದ ಗೋವುಗಳನ್ನು ಬಿಜೆಪಿ ಮುಖಂಡರ ಮನೆಯ ಬಾಗಿಲು ಬಳಿ ಕೊಂಡ್ಯೊಯ್ದು ಅವರು ಹಣ ಕೊಡತಾರ ಅಂತಾ ಕೇಳಿ ನೋಡಿ.
-ಡಿ.ಕೆ. ಶಿವಕುಮಾರ, ಸಚಿವ
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿ ಇಂಧನ ಸಚಿವ ಡಿ.ಕೆ.ಶಿವಕುಮಾರ ಶನಿವಾರ ರೋಣ ತಾಲೂಕಿನ ಇಟಗಿ ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿ ಹರಕೆಯ ಕಾಯಿ ಕಟ್ಟಿದರು.