ಆ್ಯಪ್ನಗರ

ಬಿತ್ತನೆ ಬೀಜ ಖರೀದಿಗೆ ಮುಂದಾದ ರೈತರು

ಗಜೇಂದ್ರಗಡ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರ ಬಿತ್ತನೆ ಬೀಜ ಖರೀದಿಸಲು ಮುಂದಾಗಿರುವ ರೈತರು, ಮತ್ತೊಂದು ಮಳೆಗಾಗಿ ಹಾತೊರೆಯುತ್ತಿದ್ದಾರೆ.

Vijaya Karnataka 14 Jun 2019, 5:00 am
ಗಜೇಂದ್ರಗಡ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರ ಬಿತ್ತನೆ ಬೀಜ ಖರೀದಿಸಲು ಮುಂದಾಗಿರುವ ರೈತರು, ಮತ್ತೊಂದು ಮಳೆಗಾಗಿ ಹಾತೊರೆಯುತ್ತಿದ್ದಾರೆ.
Vijaya Karnataka Web GDG-13GJD2


ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಣ್ಣ ಮತ್ತು ಅತಿ ಸಣ್ಣ ರೈತರು ಸದಾ ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಲುಕಿ ಪರದಾಡಿದ್ದಾರೆ. ಈಚೆಗೆ ಸುರಿದ ಮಳೆಯಿಂದ ಅನ್ನದಾತರು ಇದೀಗ ನಿರುಮ್ಮಳರಾಗಿದ್ದಾರೆ. ಮಳೆರಾಯನ ಮುನಿಸಿನಿಂದ ರೈತರಲ್ಲಿ ಅಡಗಿರುವ ಆತಂಕ ಕೊಂಚ ದೂರಾಗಿದೆ. ಮುಂಗಾರು ಹಂಗಾಮಿನ ಮಳೆ ಇನ್ನಷ್ಟು ಉತ್ತಮವಾಗಿ ಸುರಿಯುವ ಆಶಾಭಾವನೆಯಿಂದ ಬಿತ್ತನೆ ಬೀಜ ಪಡೆಯುಲು ಮುಗಿಬಿದ್ದಿದ್ದಾರೆ.

ಬೀಜಗಳ ದಾಸ್ತಾನು: ರೈತರಿಗೆ ಬೀಜ ಪೂರೈಸಲು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಕೆಎಸ್‌ಎಸ್‌ಸಿಯಿಂದ ಹೆಸರು ಕಾಳು ಬೀಜ 106 ಕ್ವಿಂಟಲ್‌, ತೊಗರಿ 42.20, ಹೈ. ಜೋಳ 42.20, ಗೋವಿನ ಜೋಳ 241 ಕ್ವಿಂಟಲ್‌, ಸಜ್ಜೆ 25 ಕ್ವಿಂಟಲ್‌, ಸೂರ್ಯ ಕಾಂತಿ 6 ಕ್ವಿಂಟಲ್‌ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ಎನ್‌. ಗಂಗೂರ ತಿಳಿಸಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಎರಡು ದಿನದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಇನ್ನಷ್ಟು ಮಳೆಯಾಗುವ ಲಕ್ಷ ಣ ಕಂಡು ಬರುತ್ತಿರುವ ಹಿನ್ನೆಲೆಯಿಂದ ಹರ್ಷಿತರಾದ ರೈತರು ಹೆಸರು, ಹೆಸರುಕಾಳು, ಗೋವಿನಜೋಳ, ಸಜ್ಜೆ ಮತ್ತಿತರ ಬಿತ್ತನೆ ಬೀಜ ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ಉತ್ತಮ ಮಳೆಯಿಂದ ಕೃಷಿ ಚಟುವಟಿಕಗಳಿಗೆ ಚಾಲನೆ ದೊರೆತಿದೆ. ರೈತರು ರೈತ ಸಂಪರ್ಕ ಕೇಂದ್ರಕ್ಕೆ ರಿಯಾಯತಿ ದರ ಬಿತ್ತನೆ ಬೀಜ ಖರೀದಿಸಲು ಒಮ್ಮಲೆ ರೈತರು ಆಗಮಿಸಿದ್ದರಿಂದ ನೌಕರರು ತಬ್ಬಿಬ್ಬಾದರು. ಬಳಿಕ ಪೊಲೀಸರ ಬಂದೋಬಸ್ತ್‌ನಲ್ಲಿ ರೈತರು ಸರದಿಯಲ್ಲಿ ನಿಂತು ಬೀಜ ಪಡೆದರೂ ರೈತ ಮಹಿಳೆಯರು ತೀವ್ರ ತೊಂದರೆ ಅನುಭವಿಸಿದರು.

ರೈತರಿಗೆ ಅನಕೂಲವಾಗಲೆಂದು ಸಾಕಷ್ಟು ದಿನಗಳ ಮುಂಚೆಯೆ ಎಲ್ಲ ಬೀಜಗಳ ದಾಸ್ತಾನು ಮಾಡಲಾಗಿತ್ತು. ಆದರೆ ಮಳೆಯಾಗದೇ ಇದ್ದುದರಿಂದ ರೈತರು ಬೀಜ ಖರೀದಿಗೆ ಹಿಂದೆಟು ಹಾಕಿದ್ದರು. ಆದರೆ ಎರಡು ದಿನದಿಂದ ಮಳೆಯ ವಾತಾವರಣ ಕಂಡು ಬರುತ್ತಿದೆ. ಎಲ್ಲ ರೈತರು ಒಮ್ಮೆಲೆ ಬೀಜ ಖರೀದಿಗೆ ಬರುತ್ತಿರುವದರಿಂದ ನೂಕುನುಗ್ಗಲು ಉಂಟಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ತಿಳಿಸಿದರು.

ಪ್ರಸಕ್ತ ವರ್ಷ ಮುಂಗಾರಿನ ಪ್ರಮುಖ ಬೆಳೆ ಹೆಸರು ಕಾಳು 32500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿ, ಬೆಳೆಯು ಅಧಿಕ ಪ್ರಮಾಣದಲ್ಲಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರ ಕನಸು ನನಸಾಗುವುದೇ ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ