ಆ್ಯಪ್ನಗರ

ಗ್ರಾಪಂ ಕಚೇರಿ ಎದುರು ಅಂತ್ಯಕ್ರಿಯೆಗೆ ಯತ್ನ

ಗದಗ : ಶವಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಕಚೇರಿ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Vijaya Karnataka 13 Jul 2019, 5:00 am
ಗದಗ : ಶವಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಕಚೇರಿ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web GDG-12SALIM1
ಹಾತಲಗೇರಿ ಗ್ರಾಪಂ ಕಚೇರಿ ಎದುರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿತ್ತು.


ಗದಗ ನಗರದಿಂದ ಕೇವಲ 5 ಕಿಮೀ ದೂರದಲ್ಲಿರುವ ಹಾತಲಗೇರಿಯಲ್ಲಿ ಚಂದ್ರಪ್ಪ ಡಾವಣಗೇರೆ (65) ಎಂಬವರು ಗುರುವಾರ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸ್ಮಶಾನ ಭೂಮಿ ಇಲ್ಲದ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸುವುದಾದರೂ ಎಲ್ಲಿ ಎಂದು ಕುಟುಂಬದ ಸದಸ್ಯರು ಚರ್ಚೆ ನಡೆಸುತ್ತಿದ್ದಾಗ ಸ್ಮಶಾನ ಭೂಮಿ ಗುರುತಿಸದ ಗ್ರಾಪಂ ವಿರುದ್ಧ ಆಕ್ರೋಶಗೊಂಡ ಕೆಲವರು ಗ್ರಾಪಂ ಕಚೇರಿ ಎದುರು ಅಂತ್ಯಸಂಸ್ಕಾರ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.

ಶುಕ್ರವಾರ ಬೆಳಗ್ಗೆಯೇ ಗ್ರಾಮದ ಕೆಲ ಯುವಕರು ಗ್ರಾಪಂ ಕಚೇರಿ ಎದುರು ಕಟ್ಟಿಗೆ ಇಟ್ಟು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಆರಂಭಿಸಿದ್ದಾರೆ. ಆಗ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರು ತಕ್ಷಣ ಪೊಲೀಸರು, ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತಹಸೀಲ್ದಾರ್‌ ಶ್ರೀನಿವಾಸ ಕುಲಕರ್ಣಿ ಮತ್ತು ಪೊಲೀಸರು ಗ್ರಾಮಸ್ಥರ ಮನವೊಲಿಸಿ ಗ್ರಾಮದ ಹೊರವಲಯದ ಹಳ್ಳದ ಸಮೀಪ ತಾತ್ಕಾಲಿಕವಾಗಿ ಅಂತ್ಯಕ್ರಿಯೆ ನಡೆಸಲು ಜಾಗ ಪರಿಶೀಲನೆಗೆ ತೆರಳಿದರು.

ಸ್ಮಶಾನ ಇಲ್ಲದ ಕಾರಣ ಹಾತಲಗೇರಿ ಗ್ರಾಮದಿಂದ ಕಣಗಿನಹಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ಹಳ್ಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಮಳೆ ಬಂದು ನೀರು ನಿಂತಾಗ ಏನು ಮಾಡಬೇಕು? ಹಳ್ಳದಲ್ಲಿ ಸ್ಮಶಾನ ನಡೆಸಿದರೆ ಆ ನೀರನ್ನು ಬಳಕೆ ಮಾಡಿಕೊಳ್ಳುವುದಾದರೂ ಹೇಗೆ? ಸ್ಮಶಾನಕ್ಕೆ ಜಾಗ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಗ್ರಾಪಂ ಕಚೇರಿ ಎದುರು ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಪಟ್ಟು ಹಿಡಿದರು.

3 ತಿಂಗಳಲ್ಲಿ ಜಾಗ
ಈ ವೇಳೆ ಮಾತನಾಡಿದ ತಹಸೀಲ್ದಾರ್‌ ಶ್ರೀನಿವಾಸ ಕುಲಕರ್ಣಿ, ಗ್ರಾಮದ ಸರ್ವೆ ನಂ. 63ರಲ್ಲಿ ಒಟ್ಟು 1.28 ಎಕರೆ ಜಾಗವನ್ನು ಸ್ಮಶಾನಕ್ಕೆ ಗುರುತಿಸಲಾಗಿದೆ. ಜಮೀನು ಖರೀದಿ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. 3ತಿಂಗಳಲ್ಲಿ ಸ್ಮಶಾನ ಭೂಮಿ ಒದಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪಟ್ಟು ಸಡಿಲಿಸಿದರು.

ತರಾತುರಿಯಲ್ಲಿ ಹೋದ ತಹಸೀಲ್ದಾರ್‌ :
3 ತಿಂಗಳ ಹಿಂದಷ್ಟೆ ಹಾತಲಗೇರಿ ಗ್ರಾಮಸ್ಥ ಕಣಗಿನಹಾಳ ರಸ್ತೆಯಲ್ಲಿಯೇ ಅಂತ್ಯಸಂಸ್ಕಾರ ನಡೆಸಿದ್ದರು. ಆಗ ತಕ್ಷಣವೇ ಸ್ಮಶಾನ ಭೂಮಿ ಗುರುತಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ತಹಸೀಲ್ದಾರ್‌ ಅವರನ್ನು ಪ್ರಶ್ನಿಸುತ್ತಿದ್ದಂತೆ, ಯಾವುದೇ ಪ್ರತಿಕ್ರಿಯೆ ತರಾತುರಿಯಲ್ಲಿ ಹೋದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ