ಆ್ಯಪ್ನಗರ

ಗ್ರಾಪಂ ಆಸ್ತಿ ಒತ್ತುವರಿ ತೆರವಿಗೆ ಮತ್ತೆ ಆದೇಶ

​ಗದಗ :ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ತಿಂಗಳ ಒಳಗೆ ಮಾಹಿತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಾಜ್ಯದ ಎಲ್ಲ ಜಿಪಂ, ತಾಪಂ ಅಧಿಕಾರಿಗಳಿಗೆ ಮತ್ತೊಮ್ಮೆ ಚಾಟಿ ಬೀಸಿದೆ.

Vijaya Karnataka 29 Jun 2019, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web grapam re orders for property clearance
ಗ್ರಾಪಂ ಆಸ್ತಿ ಒತ್ತುವರಿ ತೆರವಿಗೆ ಮತ್ತೆ ಆದೇಶ

ಗದಗ :ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ತಿಂಗಳ ಒಳಗೆ ಮಾಹಿತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಾಜ್ಯದ ಎಲ್ಲ ಜಿಪಂ, ತಾಪಂ ಅಧಿಕಾರಿಗಳಿಗೆ ಮತ್ತೊಮ್ಮೆ ಚಾಟಿ ಬೀಸಿದೆ.

ಗ್ರಾಪಂ ಅಧೀನದ ಆಸ್ತಿಗಳ ಒತ್ತುವರಿ ತೆರವು ಆಗದಿರುವ ಬಗ್ಗೆ ವಿಧಾನ ಮಂಡಲ ಅಧೀನದ ಶಾಸನ ರಚನಾ ಸಮಿತಿ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೂಡಲೇ ಒತ್ತುವರಿ ತೆರವುಗೊಳಿಸಿ ಮತ್ತು ತೆರವುಗೊಳಿಸಿರುವ ಆಸ್ತಿಗಳ ವಿವರಗಳನ್ನು ನೀಡುವಂತೆ ಜೂನ್‌ 18ರಂದು ನಡೆದ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ.

ಗ್ರಾಪಂ ಅಧೀನದ ಆಸ್ತಿಗಳ ಒತ್ತುವರಿ ತೆರವುಗೊಳಿಸುವಂತೆ 2011 ಮತ್ತು 2013ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ಪಷ್ಟ ನಿರ್ದೇಶನದೊಂದಿಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಒತ್ತುವರಿ ಸಂಬಂಧ ಈವರೆಗೂ ಯಾವುದೇ ಜಿಲ್ಲೆಯಿಂದ ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಜೂನ್‌ 21ರಂದು ತುರ್ತು ಪತ್ರ ಬರೆದಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಒತ್ತುವರಿ ತೆರವಿನ ಮಾಹಿತಿ ಕೋರಿ ಗಡುವು ನೀಡಿದೆ.

ತಕ್ಷಣ ಮಾಹಿತಿ ನೀಡಿ
ಗ್ರಾಮ ಪಂಚಾಯಿತಿ ಒತ್ತುವರಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಸರಕಾರದ ಅಧೀನ ಕಾರ್ಯದರ್ಶಿಗಳು, ಒತ್ತುವರಿ ಆಗಿರುವ ಆಸ್ತಿಯನ್ನು ಪಿಡಿಒಗಳು ಗುರುತಿಸಿ ಅಲ್ಲಿ ನೋಟಿಸ್‌ ಬೋರ್ಡ್‌ ಅಳವಡಿಸಬೇಕು. ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರದ ಅಧಿಸೂಚನೆಯನ್ವಯ ಕ್ರಮ ಕೈಗೊಳ್ಳಬೇಕು. ಗುರುತಿಸಲಾದ ಆಸ್ತಿ ಒತ್ತುವರಿ ಪ್ರಕರಣಗಳನ್ನು ಪಿಡಿಒ ಅವರು ಸಕ್ಷಮ ಪ್ರಾಧಿಕಾರವಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸುವುದು. ನಿಯಮಾನುಸಾರ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿಗೂ ನಮೂನೆ
ಒತ್ತುವರಿ ತೆರವುಗೊಳಿಸಿದ ಬಗ್ಗೆ ಒಟ್ಟು ಎರಡು ನಮೂನೆಗಳಲ್ಲಿ ಮಾಹಿತಿ ಒದಗಿಸುವಂತೆ ಕೋರಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಮುಬಾರಕ್‌ ಅಹ್ಮದ್‌, ಜಿಲ್ಲೆ, ಒತ್ತುವರಿಯಾದ ಆಸ್ತಿಗಳ ಸಂಖ್ಯೆ, ಒತ್ತುವರಿ ತೆರವುಗೊಳಿಸಲಾದ ಆಸ್ತಿಗಳ ಸಂಖ್ಯೆ, ತೆರವುಗೊಳಿಸಲು ಬಾಕಿ ಇರುವ ಆಸ್ತಿಗಳ ಸಂಖ್ಯೆ, ಒತ್ತುವರಿ ಮಾಡಿದ ವ್ಯಕ್ತಿಗಳಿಂದ ಪಡೆದ ದಂಡದ ಮೊತ್ತ, ಅಳತೆ ಮತ್ತಿತರ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಯಾವುದು ಆಸ್ತಿ?
ಗ್ರಾಮಠಾಣಾ, ಸಾರ್ವಜನಿಕ ರಸ್ತೆ, ಕಾಲುವೆ, ಕೆರೆಗಳು, ಆಟದ ಮೈದಾನ, ಉದ್ಯಾನ, ಸಾರ್ವಜನಿಕರ ಉಪಯೋಗಕ್ಕೆ ಇರಿಸಿದ ಜಾಗಗಳು, ಸ್ಮಶಾನ, ನಿವೇಶನ, ಚರಂಡಿ ಇತ್ಯಾದಿಗಳನ್ನು ಗ್ರಾಮ ಪಂಚಾಯಿತಿ ಆಸ್ತಿಗಳೆಂದು ಇಲಾಖೆ ಗುರುತಿಸಿದೆ.

ಹಿಂದಿನ ಸುತ್ತೋಲೆ ಉಲ್ಲೇಖ
ಗ್ರಾಪಂ ಆಸ್ತಿ ಒತ್ತುವರಿ ತೆರವುಗೊಳಿಸಿ ಮಾಹಿತಿ ಕೋರಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಈ ಸಂಬಂಧ 2013ರ ಆಗಸ್ಟ್‌ 18ರಂದು ಗ್ರಾಪಂ ಆಸ್ತಿ ರಕ್ಷಣೆಗೆ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲೇಖಿಸಿದೆ. ಸುತ್ತೋಲೆ ಅನ್ವಯ ಗ್ರಾಪಂ ಆಸ್ತಿ ರಕ್ಷಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿ ತನ್ನ ಆಸ್ತಿ ರಜಿಸ್ಟರ್‌ನ್ನು ನಿರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವುದು. ಜೊತೆಗೆ ಆಸ್ತಿಯ ವಿವರಗಳನ್ನು ಮತ್ತು ಸಾರ್ವಜನಿಕ ಆಸ್ತಿ ತೆರವುಗೊಳಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಗ್ರಾಪಂ ಕಚೇರಿಯ ಗೋಡೆಗಳ ಮೇಲೆ ಬರೆಸುವಂತೆ ಸೂಚನೆ ನೀಡಿತ್ತು. ಆದರೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಒತ್ತುವರಿ ತೆರವು ಕಾರ್ಯ ಸಮರ್ಪಕವಾಗದ ಕಾರಣ ಸರಕಾರ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತೊಮ್ಮೆ ಚಾಟಿ ಬೀಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ