ಆ್ಯಪ್ನಗರ

ಐತಿಹಾಸಿಕ ಭೀಷ್ಮ ಕೆರೆ ಒತ್ತುವರಿ

ಗದಗ : ಐತಿಹಾಸಿಕ ಭೀಷ್ಮ ಕೆರೆ ಒತ್ತುವರಿಯಾಗಿರುವುದು ಸ್ಪಷ್ಟವಾಗಿದ್ದು, ಈ ಸಂಬಂಧ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಎರಡು ದಿನದಲ್ಲಿ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

Vijaya Karnataka 10 Jun 2019, 5:00 am
ಗದಗ : ಐತಿಹಾಸಿಕ ಭೀಷ್ಮ ಕೆರೆ ಒತ್ತುವರಿಯಾಗಿರುವುದು ಸ್ಪಷ್ಟವಾಗಿದ್ದು, ಈ ಸಂಬಂಧ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಎರಡು ದಿನದಲ್ಲಿ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
Vijaya Karnataka Web GDG-9SALIM10A
ಗದಗ ನಗರದ ಭೀಷ್ಮ ಕೆರೆ ಆವರಣಕ್ಕೆ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಭಾನುವಾರ ನಗರದ ಭೀಷ್ಮ ಕೆರೆ ಆವರಣದಲ್ಲಿ ಅಮೃತ ಸಿಟಿ ಯೋಜನೆ ಅಡಿ 9.5 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ 2ನೇ ಹಂತದ ಭೀಷ್ಮ ಕೆರೆ ಅಭಿವೃದ್ಧಿ ಕಾಮಾಗಾರಿ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಒತ್ತುವರಿ ಆಗಿರುವ ಸಂಬಂಧ ಸಾಮಾಜಿಕ ಕಾರ್ಯಕರ್ತರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನನ್ವಯ ಕಾಮಗಾರಿ ಸ್ಥಗಿತಗೊಳಿಸಿ ಸರ್ವೆ ನಡೆಸುವಂತೆ ನ್ಯಾಯಾಧೀಶರು ತಿಳಿಸಿದ್ದರೂ, ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿಲ್ಲ. ತಕ್ಷಣ ಜನರ ದುಡ್ಡು ಪೋಲು ಮಾಡುವುದನ್ನು ಬಿಟ್ಟು ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಕೆರೆ ಅಭಿವೃದ್ಧಿ ಪ್ರಾಧಿಕಾರ 2014ರಿಂದ ಈಚೆಗೆ ಕೆರೆ ಸುತ್ತಲಿನ 30 ಮೀಟರ್‌ ಜಾಗವನ್ನು ಬಗರ್‌ ಏರಿಯಾ ಎಂದು ಪರಿಗಣಿಸಿ, ಆ ಜಾಗದಲ್ಲಿ ಪಾರ್ಕಿಂಗ್‌, ಉದ್ಯಾನ ಮತ್ತಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದೆ. ಆದರೆ ಅಧಿಕಾರಿಗಳು ಮಾತ್ರ ನೀರು ನಿಲ್ಲುತ್ತಿದ್ದ ಕೆರೆಯ ಎರಡು ಎಕರೆ ಜಾಗದಲ್ಲಿ ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡಲಾಗಿದೆ. 254 ಎಕರೆ ಇದ್ದ ಕೆರೆ ಈಗ 103 ಎಕರೆ ಮಾತ್ರ ಉಳಿದಿದೆ. ಇದೇ ರೀತಿ ಅಭಿವೃದ್ಧಿ ಮಾಡಿದರೆ 10 ವರ್ಷಗಳಲ್ಲಿ ಕೆರೆ ಸಂಪೂರ್ಣವಾಗಿ ಕಣ್ಮರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಮಟ್ಟದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಕೆಲಸ ಸ್ಥಗಿತಗೊಳಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದಾಗಲೂ ಗುತ್ತಿಗೆದಾರ 30 ಲಕ್ಷ ರೂ. ಕಾಮಗಾರಿ ಮಾಡಲಾಗಿದೆ ಎನ್ನುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಆ ಟೆಂಡರ್‌ ರದ್ದಾಗಬೇಕು. ಗುತ್ತಿಗೆದಾರಿರಗೆ ಹಣ ಪಾವತಿ ಮಾಡಬಾರದು ಎಂದು ಆಗ್ರಹಿಸಿದರು.

ಸುಳ್ಳು ಹೇಳಿದ ಅಧಿಕಾರಿಗಳು :

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಭೀಷ್ಮ ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿವರಣೆ ನೀಡಿದ ನಗರಸಭೆ ಅಭಿಯಂತರರು, ಸಧ್ಯಕ್ಕೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ. ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡುತ್ತಿದ್ದ ವೇಳೆಯೇ, ಕಾಮಗಾರಿ ಸ್ಥಳಕ್ಕೆ ಕಲ್ಲು ಹೊತ್ತ ಟ್ರ್ಯಾಕ್ಟರ್‌ ಆಗಮಿಸಿತು. ಆಗ ಕಸಿವಿಸಿಗೊಂಡ ನಗರಸಭೆ ಅಧಿಕಾರಿಗಳು, ಕಾಮಗಾರಿ ಸ್ಥಗಿತಗೊಂಡಿದ್ದು, ಕಲ್ಲು ತೆಗೆದುಕೊಂಡು ಹೋಗಿ ಎಂದು ಟ್ರ್ಯಾಕ್ಟರ್‌ ಮರಳಿ ಕಳುಹಿಸಿದರು.

ನಗರಸಭೆ ಮೇಲೆ ಅನುಮಾನ :

ಭೀಷ್ಮ ಕೆರೆ ಆವರಣದಲ್ಲಿರುವ ಎರಡ್ಮೂರು ಖಾಸಗಿ ಹೋಟೆಲ್‌ಗಳು ನಗರಸಭೆಯಿಂದ ಪರವಾನಗಿ ಪಡೆಯದೆ ಕಾರ್ಯ ನಿರ್ವಹಿಸುತ್ತಿವೆ. ರಸ್ತೆ ಬದಿ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಜನರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಿಗಳು, ಇಷ್ಟು ದೊಡ್ಡಮಟ್ಟದ ಹೋಟೆಲ್‌ ನಡೆಸುತ್ತಿದ್ದರೂ ಏಕೆ ಪರವಾನಗಿ ಪಡೆದಿಲ್ಲ ಎಂದು ಪ್ರಶ್ನಿಸದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ