ಆ್ಯಪ್ನಗರ

ಹೊಸರಾಂಪುರಕ್ಕೆ ಹೊಸತನ ನೀಡಿ

​ಗದಗ : ವರ್ಷದ ಹಿಂದಷ್ಟೆ ತಾಲೂಕು ಕೇಂದ್ರ ಎಂದು ಘೋಷಣೆಯಾದ ಗಜೇಂದ್ರಗಡ ಪಟ್ಟಣದಿಂದ ಕೇವಲ 8 ಕಿಮೀ ದೂರದಲ್ಲಿರುವ ಹೊಸರಾಂಪುರ ಗ್ರಾಮ ದಶಕಗಳಿಂದ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಸಿಎಂ ಗ್ರಾಮ ವಾಸ್ತವ್ಯದ ನಿರೀಕ್ಷೆಯಲ್ಲಿದೆ.

Vijaya Karnataka 20 Jun 2019, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web GDG-19SALIM1
ಹೊಸರಾಂಪುರ ಗ್ರಾಮ.

ಗದಗ : ವರ್ಷದ ಹಿಂದಷ್ಟೆ ತಾಲೂಕು ಕೇಂದ್ರ ಎಂದು ಘೋಷಣೆಯಾದ ಗಜೇಂದ್ರಗಡ ಪಟ್ಟಣದಿಂದ ಕೇವಲ 8 ಕಿಮೀ ದೂರದಲ್ಲಿರುವ ಹೊಸರಾಂಪುರ ಗ್ರಾಮ ದಶಕಗಳಿಂದ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಸಿಎಂ ಗ್ರಾಮ ವಾಸ್ತವ್ಯದ ನಿರೀಕ್ಷೆಯಲ್ಲಿದೆ.

ರಾಂಪುರ ಗ್ರಾಮ ಪಂಚಾಯಿತಿಯ 2ನೇ ವಾರ್ಡಿಗೆ ಒಳಪಡುನ ಹೊಸರಾಂಪುರ ಗ್ರಾಮ ಕಂದಾಯ ಗ್ರಾಮ ಮಾಡುವಂತೆ ದಶಕಗಳಿಂದ ಹೋರಾಟ ನಡೆಸಿದ್ದರೂ ಈವರೆಗೂ ಬೇಡಿಕೆ ಈಡೇರಿಲ್ಲ. ರಾಂಪುರ ಗ್ರಾಮದಿಂದ ಕೇವಲ 2 ಕಿಮೀ ದೂರದಲ್ಲಿದ್ದರೂ ಈ ಗ್ರಾಮಕ್ಕೆ ಈವರೆಗೂ ಬಸ್‌ ಸೌಲಭ್ಯ ಇಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಗಜೇಂದ್ರಗಡ ಪಟ್ಟಣದಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಬರುವ ಹೊಸರಾಂಪುರ ಗ್ರಾಮಕ್ಕೆ ರಸ್ತೆಯಿದ್ದರೂ ಬಸ್‌ ಇಲ್ಲ. ಗಜೇಂದ್ರಗಡ, ಗದಗ, ಕೊಪ್ಪಳ ಹೀಗೆ ಯಾವುದೇ ಊರಿಗೆ ತೆರಳಬೇಕಾದರೂ 2 ಕಿಮೀ ನಡೆದುಕೊಂಡು ಬಂದು ಬಸ್‌ ಹಿಡಿಯಬೇಕಾದ ಸ್ಥಿತಿ ಹೊಸರಾಂಪುರ ಗ್ರಾಮದ ಜನರ ಸ್ಥಿತಿಯಾಗಿದೆ.

ಹೊಸರಾಂಪುರದಲ್ಲಿ ಒಂದು ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ. ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾದ ಮಕ್ಕಳು ನಿತ್ಯವೂ 4 ಕಿಮೀ ನಡೆಯಲೆಬೇಕು. ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಒಂದು ಬೋರವೆಲ್‌ ಇದೆ. ಅದು ಕೈಕೊಟ್ಟಾಗ ಖಾಸಗಿ ಬೋರವೆಲ್‌ಗಳನ್ನು ಆಶ್ರಯಿಸಬೇಕು. ಪಡಿತರ ಬೇಕಾದರೂ 2 ಕಿಮೀ ದೂರದಲ್ಲಿರುವ ರಾಂಪುರಕ್ಕೆ ಹೋಗಬೇಕಾದ ಅನಿವಾರ್ಯತೆ ಈ ಗ್ರಾಮಸ್ಥರಿಗಿದೆ.

ಹಾಲುಮತ ಸಮಾಜದ ಅನಕ್ಷ ರಸ್ಥರೆ ಹೆಚ್ಚಾಗಿ ವಾಸಿಸುವ ಪುಟ್ಟ ಗ್ರಾಮದ ಜನರಿಗೆ ಕುರಿ ಸಾಕಾಣಿಕೆಯೇ ಮೂಲ ಉದ್ಯೋಗ. ಕುರಿ ಮೇಯಿಸಿಕೊಂಡು ಕಾಡು ಮೇಡು ಅಲೆಯುವ ಈ ಗ್ರಾಮದ ಜನರು ಈವರೆಗೂ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ತಮ್ಮ ಕಾಯಕದ ಕಾರಣಕ್ಕಾಗಿ ಬಾಹ್ಯ ಪ್ರಪಂಚದ ಜತೆ ಅತ್ಯಂತ ಕನಿಷ್ಠ ಸಂಪರ್ಕ ಹೊಂದಿರುವುದರಿಂದ ಹೊಸರಾಂಪುರ ಗ್ರಾಮ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ.

ನಡುಗಡ್ಡೆ ಭೀತಿ :
ರಾಂಪುರ ಮತ್ತು ಹೊಸರಾಂಪುರ ಮಧ್ಯೆ ಹಳ್ಳವಿದ್ದು, ಭಾರೀ ಮಳೆ ಬಂದ ಸಂದರ್ಭದಲ್ಲಿ ಹಳ್ಳ ಉಕ್ಕಿ ಹರಿದರೆ ಹೊಸರಾಂಪುರ ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಹಳ್ಳದ ನೀರು ಇಳಿಯುವ ವರೆಗೂ ಹೊಸರಾಂಪುರ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗುತ್ತದೆ. ಈ ಹಳ್ಳದ ಉಸುಕು ಕಟ್ಟಡ ನಿರ್ಮಾಣಕ್ಕೆ ಸೂಕ್ತವಾಗಿರುವುದರಿಂದ ಹಳ್ಳದ ಉಸುಕು ತೆಗೆದುಕೊಂಡು ಹೋಗಲು ಸಾಕಷ್ಟು ಜನ ಗಣ್ಯರು ಬರುತ್ತಾರೆ, ಅಧಿಕಾರಿಗಳೂ ಆಗಾಗ ಭೇಟಿ ನೀಡುತ್ತಾರೆ. ಆದರೆ ಈ ಗ್ರಾಮದ ಅಭಿವೃದ್ಧಿ ಕಡೆ ತಿರುಗಿಯೂ ನೋಡುವುದಿಲ್ಲ. ಮುಖ್ಯಮಂತ್ರಿಗಳು ಇಂಥ ಗ್ರಾಮದಲ್ಲಿ ವಾಸ್ತವ್ಯ ಮಾಡಿದರೆ, ಗ್ರಾಮಸ್ಥ ರ ಬದುಕು ಹಸನಾಗುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ