ಆ್ಯಪ್ನಗರ

ದ್ವಿಪಥ ರಸ್ತೆಯಲ್ಲಿ ಲೈಟ್‌ ಆಫ್‌..!

ರೋಣ : ಸರಕಾರದ ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗಿದ್ದ ಪಟ್ಟಣದ ದ್ವಿಪಥ ರಸ್ತೆಗೆ ಪುರಸಭೆಯಿಂದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಆ ವಿದ್ಯುತ್‌ ದೀಪಗಳು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಬೆಳಕು ನೀಡದೇ

Vijaya Karnataka 29 May 2019, 5:00 am
ರೋಣ : ಸರಕಾರದ ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗಿದ್ದ ಪಟ್ಟಣದ ದ್ವಿಪಥ ರಸ್ತೆಗೆ ಪುರಸಭೆಯಿಂದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಆ ವಿದ್ಯುತ್‌ ದೀಪಗಳು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಬೆಳಕು ನೀಡದೇ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿದ್ಯುತ್‌ ಕಂಬಗಳ ದೀಪಗಳು ಒಡೆದು ಹೋಗಿದ್ದು, ಸಲಕರಣೆಗಳು ನೆಲ ಕಚ್ಚುತ್ತಿವೆ.
Vijaya Karnataka Web GDG-28 RON 1
ಗರೋತ್ತಾನ ಯೋಜನೆಯಡಿ ನಿರ್ಮಿಸಿದ ದ್ವಿಪಥ ರಸ್ತೆಯ ಮಧ್ಯದ ಲೈಟ್‌ಗಳು ಆಫ್‌ ಆಗಿರುವುದು.


ಇಲ್ಲಿಯ ರೋಣ-ಬದಾಮಿ, ರೋಣ-ಹುಬ್ಬಳ್ಳಿ ಹಾಗೂ ರೋಣ-ಗದಗ ಮತ್ತು ರೋಣ ಗಜೇಂದ್ರಗಡ ಸಂಪರ್ಕದ ದ್ವಿಪಥ ರಸ್ತೆಗಳಿಗೆ ಅಳವಡಿಸಲಾಗಿದ್ದ ದೀಪಗಳು ಶಾಸ್ವತವಾಗಿ ಕಣ್ಣು ಮುಚ್ಚಿಕೊಳ್ಳುತ್ತಿವೆ. ಕಂಬಗಳಿಗೆ ಅಳವಡಿಸಲಾಗಿದ್ದ ಎರಡು ಬದಿಯ 40 ವ್ಯಾಟ್‌ನ ಎಲ್‌ಇಡಿ ವಿದ್ಯುತ್‌ ಬಲ್ಬಗಳು ಉರಿಯದೇ ನಿತ್ರಾಣವಾಗಿವೆ.

ಅಪಾಯಕ್ಕೆ ಆಹ್ವಾನ:

ಪಟ್ಟಣದ ನಾಲ್ಕೂ ಮುಖ್ಯ ರಸ್ತೆಗಳಿಗೆ ವಿದ್ಯುತ್‌ ದೀಪ ಅಳವಡಿಸಿ ವಿದ್ಯುತ್‌ ಸಂಪರ್ಕವನ್ನೂ ಆರಭದಲ್ಲಿ ಕಲ್ಪಿಸಲಾಗಿದೆ. ಆದರೆ ಸುಮಾರು ತಿಂಗಳಿಂದ ದೀಪ ಉರಿಯದೇ ಹಾಗೂ ನಿರ್ವಹಣೆ ಕೊರತೆಯಿಂದ ವಿದ್ಯುತ್‌ ವೈರ್‌ಗಳು ಕೆಲ ಕಡೆ ಜೋತು ಬಿದ್ದಿವೆ. ಬೀಡಾಡಿ ದನಕರುಗಳು ರಸ್ತೆಯಲ್ಲಿರುವ ಕಂಬಗಳ ಪಕ್ಕದಲ್ಲಿಯೇ ನಡೆದಾಡುತ್ತಿದ್ದು ಜತೆಗೆ ಸಾರ್ವಜನಿಕರು ಸಹ ವಾಹನಗಳು ಬಂದಾಗ ದ್ವಿಪಥ ರಸ್ತೆಯ ಮಧ್ಯದಲ್ಲಿರುವ ಪುಟ್‌ಪಾತ್‌ ಮೇಲೆ ತೆರಳುತ್ತಾರೆ. ಹರಿದ ವೈರ್‌ಗಳಿಂದ ವಿದ್ಯುತ್‌ ತಗುಲಿ ಅನಾಹುತ ಸಂಭವಿಸುವ ಮೊದಲೇ ಪುರಸಭೆ ಅಧಿಕಾರಿಗಳು ತುಂಡಾದ ವೈರ್‌ ಜೋಡಣೆ ಮಾಡಿ ಪುನಃ ವಿದ್ಯುತ್‌ ದೀಪ ಬೆಳಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಹಿಡಿಶಾಪ:

ಇಲ್ಲಿನ ನಾಲ್ಕೂ ರಸ್ತೆಗಳ ಮೂಲಕ ಸಂಜೆ ಮತ್ತು ನಸುಕಿನ ಜಾವ ವಾಯು ವಿಹಾರಕ್ಕೆ ಆಗಮಿಸುವವರಿಗೆ ದ್ವಿಪಥ ರಸ್ತೆಗಳಲ್ಲಿನ ದೀಪಗಳು ಬೆಳಕು ನೀಡುತ್ತಿದ್ದವು, ಇದರಿಂದ ಮಹಿಳೆಯರು, ವೃದ್ಧರು ಯಾವುದೇ ಆತಂಕವಿಲ್ಲದೇ ವಾಯುವಿಹಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಲೈಟ್‌ಗಳು ಆಫ್‌ ಆಗಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಲಕ್ಷಾಂತರ ರೂ. ಖರ್ಚು ವ್ಯರ್ಥ:

ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಪುರಸಭೆಯ ವಿವಿಧ ಅನುದಾನದಡಿಯಲ್ಲಿ ನಾಲ್ಕು ದ್ವಿಪಥ ರಸ್ತೆಯಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯುತ್‌ ದೀಪ ಅಳವಡಿಸಲು ಸುಮಾರು 50 ಲಕ್ಷ ರೂ. ಖರ್ಚು ಮಾಡಲಾಗಿದೆ. ಆರಂಭದಲ್ಲಿ ಇದ್ದ ಉತ್ಸಾಹ ನಂತರದ ದಿನಗಳಲ್ಲಿ ಕಂಡು ಬರುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುತ್ತಾರೆ ಜನತೆ.

ಈ ರಸ್ತೆಗಳಲ್ಲಿ ರಾತ್ರಿ ಸಾರ್ವಜನಿಕರಿಗೆ ಓಡಾಡುವುದೇ ಸವಾಲಾಗಿದೆ. ಸಾರ್ವಜನಿಕರು, ಪ್ರಯಾಣಿಕರು ರಾತ್ರಿ ವೇಳೆ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಪುರಸಭೆ ಎಚ್ಚೆತ್ತುಕೊಳ್ಳುವುದೇ ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ