ಆ್ಯಪ್ನಗರ

85 ಸಾವಿರ ರೈತರಿಗಿಲ್ಲ ಕಿಸಾನ್‌ ಸಮ್ಮಾನ್‌, ತೆರಿಗೆ ಕಟ್ಟುವ ರೈತರಿಗೆ ಕೇಂದ್ರದ ಶಾಕ್‌

​ಗದಗ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ರಾಜ್ಯದ ಫಲಾನುಭವಿಗಳ ಪೈಕಿ ಆದಾಯ ತೆರಿಗೆ ಪಾವತಿಸುವ 85,206 ರೈತರಿಗೆ ಕೇಂದ್ರ ಸರಕಾರ ಶಾಕ್‌ ನೀಡಿದ್ದು, ಯೋಜನೆಯ ಹಣ ಮರಳಿಸುವಂತೆ ಸೂಚಿಸಿದೆ.

Vijaya Karnataka 26 Nov 2020, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web Farmer

ಗದಗ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ರಾಜ್ಯದ ಫಲಾನುಭವಿಗಳ ಪೈಕಿ ಆದಾಯ ತೆರಿಗೆ ಪಾವತಿಸುವ 85,206 ರೈತರಿಗೆ ಕೇಂದ್ರ ಸರಕಾರ ಶಾಕ್‌ ನೀಡಿದ್ದು, ಯೋಜನೆಯ ಹಣ ಮರಳಿಸುವಂತೆ ಸೂಚಿಸಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೊಳಿಸಿದೆ. ರಾಜ್ಯದ ಸುಮಾರು 52 ಲಕ್ಷ ರೈತರು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆ ಪೈಕಿ 85,206 ರೈತರು ಆದಾಯ ತೆರಿಗೆ ಪಾವತಿದಾರರಾಗಿದ್ದು, ಅಂಥ ರೈತರಿಂದ ಈಗಾಗಲೇ ವರ್ಗಾವಣೆಯಾಗಿರುವ ಹಣ ಮರಳಿ ಪಡೆಯುವಂತೆ ಕೇಂದ್ರದ ಮೂಲಕ ರಾಜ್ಯ ಸರಕಾರಕ್ಕೆ ನಿರ್ದೇಶನ ಬಂದಿದೆ.

ಆದಾಯ ತೆರಿಗೆ ಇಲಾಖೆ ಮಾಹಿತಿ ಆಧರಿಸಿ ಜಿಲ್ಲಾ, ತಾಲೂಕು ಮತ್ತು ಹೋಬಳಿವಾರು ಹಣ ಮರಳಿಸಬೇಕಿರುವ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರಕಾರ ರವಾನಿಸಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಮತ್ತು ಕಂದಾಯ ಇಲಾಖೆ ಕಚೇರಿಗಳ ಮೂಲಕ ರೈತರನ್ನು ಸಂಪರ್ಕಿಸುವ ಕಾರ್ಯದಲ್ಲಿನಿರತರಾಗಿದ್ದಾರೆ.

ಯೋಜನೆಯಿಂದ ಹೊರಗೆ :
ಆದಾಯ ತೆರಿಗೆ ಪಾವತಿಸುವ ರಾಜ್ಯದ 85,608 ರೈತರನ್ನು ಕೇಂದ್ರ ಸರಕಾರ ಯೋಜನೆ ವ್ಯಾಪ್ತಿಯಿಂದ ಈಗಾಗಲೇ ಹೊರಗಿಟ್ಟಿದೆ. ಇನ್ನು ಮುಂದೆ ಅಂಥ ರೈತರಿಗೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡುವುದಿಲ್ಲ. ಆದರೆ ಈಗಾಗಲೇ ವರ್ಗಾವಣೆಯಾಗಿರುವ ಹಣವನ್ನು ಪಡೆಯುವಂತೆ ಸೂಚನೆ ಬಂದಿದ್ದು, ಅದರಂತೆ ಕ್ರಮ ವಹಿಸಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಏನಿದು ಯೋಜನೆ ?
ರೈತರ ಆದಾಯ ವೃದ್ಧಿಸಲು ಕೇಂದ್ರ ಸರಕಾರ 2019 ಡಿಸೆಂಬರ್‌ 2ರಂದು ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೊಳಿಸಿತು. 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ರೈತನ ಕುಟುಂಬಕ್ಕೆ ವಾರ್ಷಿಕ (ಮೂರು ಕಂತುಗಳಲ್ಲಿ) 6 ಸಾವಿರ ರೂ. ಪಾವತಿಸಲಾಗುತ್ತದೆ.

52 ಲಕ್ಷ ರೈತರಿಗೆ ನೆರವು :
ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದ 56,52,587 ರೈತರು ಸ್ವಯಂ ಘೋಷಣೆ ನೀಡಿ ನೋಂದಣಿ ಮಾಡಿಕೊಂಡಿದ್ದರು. ವಿವಿಧ ಹಂತದ ಪ್ರಾಥಮಿಕ ಪರಿಶೀಲನೆ ನಂತರ 54,16,268 ರೈತರ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಯಿತು. ಆ ಪೈಕಿ 52,68,327 ರೈತರಿಗೆ ಆರ್ಥಿಕ ನೆರವು ದೊರೆಯುತ್ತಿದೆ. ಸದ್ಯ ಕೇಂದ್ರ ಸರಕಾರ ಗುರುತಿಸಿರುವ ಫಲಾನುಭವಿಗಳನ್ನು ಬಿಟ್ಟು ಉಳಿದವರಿಗೆ ಯಾವುದೇ ತೊಂದರೆ ಆಗುವುದಿಲ್ಲಎನ್ನುತ್ತಾರೆ ಅಧಿಕಾರಿಗಳು.

ರಾಜ್ಯ ಸರಕಾರದ ನಿರ್ಧಾರ ಏನು? :
ಆದಾಯ ತೆರಿಗೆ ಪಾವತಿ ಮಾಡುವ ರಾಜ್ಯದ 85,608 ರೈತರಿಂದ ತನ್ನ ಪಾಲಿನ ಹಣ ಮರಳಿ ಪಡೆಯುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಇದೇ ಯೋಜನೆ ವ್ಯಾಪ್ತಿಯ ಫಲಾನುಭವಿಗಳಿಗೆ ರಾಜ್ಯ ಸರಕಾರವೂ ವಾರ್ಷಿಕ (ಎರಡು ಕಂತುಗಳಲ್ಲಿ) 4 ಸಾವಿರ ರೂ. ನೆರವು ನೀಡುತ್ತದೆ. ಕೇಂದ್ರದ ರೀತಿಯಲ್ಲಿರಾಜ್ಯ ಸರಕಾರವೂ ಹಣ ಮರಳಿ ಪಡೆಯುತ್ತದೆಯೊ ಇಲ್ಲವೊ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ