ಆ್ಯಪ್ನಗರ

ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಗದಗ :ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಜತೆಗೆ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಭರಾಟೆಗೆ ಇಂದು ಸಂಜೆ ಸಂಪೂರ್ಣ ಬ್ರೇಕ್‌ ಬೀಳಲಿದೆ.

Vijaya Karnataka 10 May 2018, 5:00 am
ಗದಗ :ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಜತೆಗೆ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಭರಾಟೆಗೆ ಇಂದು ಸಂಜೆ ಸಂಪೂರ್ಣ ಬ್ರೇಕ್‌ ಬೀಳಲಿದೆ.
Vijaya Karnataka Web open today for publicity campaign
ಬಹಿರಂಗ ಪ್ರಚಾರಕ್ಕೆ ಇಂದು ತೆರೆ


ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾನ ನಡೆಯುವ 48 ಗಂಟೆ ಮುನ್ನ ಪ್ರಚಾರ ಕಾರ್ಯ ಕೊನೆಗೊಳ್ಳಲಿದ್ದು, ಅದರಂತೆ ಮೇ 10 ರಂದು ಸಂಜೆ 5 ಗಂಟೆಗೆ ಎಲ್ಲ ಪಕ್ಷಗಳು ಪ್ರಚಾರ ಕೊನೆಗೊಳಿಸುವುದು ಅನಿವಾರ್ಯವಾಗಿದೆ.

ಚುನಾವಣೆ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಆಡಳಿತಾರೂಢ ಪಕ್ಷದ ಶಾಸಕರು, ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಪ್ರಚಾರ ಆರಂಭಿಸಿದ್ದರು. ನಂತರ ಬಿಜೆಪಿ ಹಾಗೂ ಇನ್ನುಳಿದ ಪಕ್ಷದ ಅಭ್ಯರ್ಥಿಗಳು ಟಿಕೆಟ್‌ ಖಚಿತವಾಗುತ್ತಿದ್ದಂತೆ ಪ್ರಚಾರ ಕೈಗೊಂಡಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಕರೆಯಿಸಿ ರೋಡ್‌ ಶೋ ನಡೆಸಿದ್ದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಇಂದು ಸಂಜೆ ಕೊನೆಯ ಪ್ರಚಾರ ಭಾಷಣ ಮಾಡಲಿದ್ದಾರೆ.

ಕಳೆದೊಂದು ತಿಂಗಳಿಂದ ಅಬ್ಬರದ ಸಂಗೀತ, ಮೈಕ್‌ ಸದ್ದು, ಆರೋಪ- ಪ್ರತ್ಯಾರೋಪ, ಮೆರವಣಿಗೆ, ರೋಡ್‌ ಶೋ, ಜೈಕಾರ, ಧಿಕ್ಕಾರ, ಹೆಲಿಕಾಪ್ಟರ್‌ ಸದ್ದು, ಸಂಚಾರ ದಟ್ಟಣೆ, ಸ್ಟಾರ್‌ ಪ್ರಚಾರಕರ ಸಂಚಲನ ಎಲ್ಲವೂ ಸಂಪೂರ್ಣವಾಗಿ ನಿಲ್ಲಲಿವೆ.

ಏ.27ರಂದು ನಾಮಪತ್ರ ಸಲ್ಲಿಕೆ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ರಂಗೇರಿದ ಪ್ರಚಾರ ಕಣ ಇಂದು ಸಂಪೂರ್ಣವಾಗಿ ಸ್ತಬ್ಧವಾಗಲಿದ್ದು, ಮತದಾನ ದಿನಾಂಕದ ವರೆಗೆ ಕಾರ್ಯಕರ್ತರು ತೆರೆ ಮರೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ಆಯೋಗದ ಕಣ್ಣು : ಬಹಿಂರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಚಲನವಲನದ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಡಲಿದೆ. ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈಗಾಗಲೇ ಪೊಲೀಸರು ಅರೆಸೇನಾ ಪಡೆಯೊಂದಿಗೆ ಪಥ ಸಂಚಲನವನ್ನೂ ನಡೆಸಿ ಗಮನ ಸೆಳೆದಿದ್ದಾರೆ.

ರಾಜಕೀಯ ಚಿತ್ರಣ: ಜಿಲ್ಲೆಯ ನಾಲ್ಕು ಕ್ಷೇತ್ರಗಳಾದ ಗದಗ, ಶಿರಹಟ್ಟಿ, ರೋಣ ಮತ್ತು ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಫೈಟ್‌ ನಡೆಯಲಿದ್ದು, ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ಆಯಾ ಸಮುದಾಯದ ಮುಖಂಡರು, ಬೂತ್‌, ವಾರ್ಡ್‌ ಸದಸ್ಯರು ಹಾಗೂ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕತ್ತಲ ರಾತ್ರಿ...

ಮೊಹರಂ ಸಂದರ್ಭದಲ್ಲಿ ಬಳಕೆಯಾಗುವ ಕತ್ತಲರಾತ್ರಿ ಎನ್ನುವ ಶಬ್ಧದ ಅರ್ಥವನ್ನು ಪ್ರತಿ ಚುನಾವಣೆ ಸಂದರ್ಭದಲ್ಲೂ ತಳುಕು ಹಾಕುವುದು ಸಾಮಾನ್ಯ. ಮತದಾನ ನಡೆಯುವ ಮುನ್ನಾ ದಿನ ಹಣ, ಸೀರೆ, ಹೆಂಡ ಹಂಚುವ ಪ್ರಕ್ರಿಯೆ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ಚುರುಕು ಪಡೆಯಲಿದೆ. ಮತದಾನ ಮುನ್ನಾ ದಿನ ಪೊಲೀಸರು ಮತ್ತು ಚುನಾವಣೆ ಅಧಿಕಾರಿಗಳ ಗಸ್ತು ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ, ಮತದಾನಕ್ಕೆ ಎರಡು ದಿನ ಮುನ್ನವೇ ಕೆಲ ಅಭ್ಯರ್ಥಿಗಳು ಇಂಥ ಅಕ್ರಮ ನಡೆಸುವುದು ಸಾಮಾನ್ಯ. ಆಯೋಗದ ಕಟ್ಟುನಿಟ್ಟಿನ ಸೂಚನೆ, ಭದ್ರತೆ ಇದ್ದರೂ ಕತ್ತಲರಾತ್ರಿ ಆಚರಣೆ ನಿಲ್ಲಿಸುವುದು ಕಷ್ಟಸಾಧ್ಯ.

ರಾಗಾ- ನಮೋ ಹವಾ

ಪ್ರಸಕ್ತ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲೆಗೆ ಭೇಟಿ ನೀಡಿರುವುದು ಚುನಾವಣೆ ಕಣ ಕುತೂಹಲ ಕೆರಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನಂತಕುಮಾರ, ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು ಪ್ರಚಾರ ನಡೆಸಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಲೀಂ ಅಹ್ಮದ ಸಹಿತ ಬೆರಳೆಣಿಕೆಯ ನಾಯಕರು ಪ್ರಚಾರ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ