ಆ್ಯಪ್ನಗರ

ಮಹದಾಯಿ ಅನುಷ್ಠಾನಕ್ಕೆ ಒತ್ತಡ ತನ್ನಿ

ಗದಗ: ಮಹದಾಯಿ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ನೆರೆ ರಾಜ್ಯಗಳ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಕಳಸಾ-ಬಂಡೂರಿ ಯುವ ಹೋರಾಟ ಕೇಂದ್ರದ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಮನವಿ ಮಾಡಿದರು.

Vijaya Karnataka 26 Jul 2019, 5:00 am
ಗದಗ: ಮಹದಾಯಿ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ನೆರೆ ರಾಜ್ಯಗಳ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಕಳಸಾ-ಬಂಡೂರಿ ಯುವ ಹೋರಾಟ ಕೇಂದ್ರದ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಮನವಿ ಮಾಡಿದರು.
Vijaya Karnataka Web GDG-25SALIM6


ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ 120 ಕೋಟಿ ರೂ. ಬಿಡುಗಡೆ ಮಾಡಿ, ಯೋಜನೆ ಜಾರಿಗೆ ಶಕ್ತಿ ತುಂಬಿದ್ದರು. ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿಯಾಗುವುದು ಖಚಿತ. ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕಳಸಾ-ಬಂಡೂರಿ ಯೋಜನೆ ಪೂರ್ಣ ಗೊಳಿಸಬೇಕು. ಅಗತ್ಯವಿದ್ದರೆ, ಸರ್ವ ಪಕ್ಷ ಹಾಗೂ ಮಹದಾಯಿ ಹೋರಾಗಾರರೊಂದಿಗೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಈ ಯೋಜನೆ ಅನುಷ್ಠಾನಗೊಂಡರೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆ 9 ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ನ್ಯಾಯಾಧಿಕರಣದ ನೀಡಿರುವ ತೀರ್ಪನ್ನು ಸ್ವಾಗತಿಸಿ, ಕರ್ನಾಟಕ ಸರಕಾರ ಕೇಂದ್ರಕ್ಕೆ ಅಫಿಡವಿಟ್‌ ಸಲ್ಲಿಸಬೇಕಿತ್ತು. ಅದರ ಬದಲಾಗಿ ತೀರ್ಪನ್ನು ತಿರಸ್ಕರಿಸಿ, ನ್ಯಾಯಾಲಯದ ಮೊರೆ ಹೋಗಿದ್ದರಿಂದ ಯೋಜನೆ ಅನುಷ್ಠಾನ ಕುಂಠಿತಗೊಂಡಿದೆ. ರಾಜ್ಯ ಹಾಗೂ ನೆರೆ ರಾಜ್ಯ ಮತ್ತು ಕೇಂದ್ರದಲ್ಲಿ ವಿಭಿನ್ನ ಪಕ್ಷ ಗಳು ಆಡಳಿತದಲ್ಲಿರುವುದೂ ಇದಕ್ಕೆ ಕಾರಣವೆಂದೂ ದೂರಿದರು.

ಕೇಂದ್ರ ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ ಆದರೆ, ತಕ್ಷ ಣವೇ ಮಹದಾಯಿ ನ್ಯಾಯಾಧಿಕರಣದ ತೀರ್ಪಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

2003ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕಳಸಾ- ಬಂಡೂರಿಯಿಂದ 7.56 ಟಿಎಂಸಿ ನೀರು ಬಳಕೆಗೆ ಮಂಜೂರು ಮಾಡಿದ್ದರು. ಸದ್ಯ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು. ಕಳಸಾ- ಬಂಡೂರಿ ಕಾಮಗಾರಿ ಪೂರ್ಣಗೊಳಿಸಬೇಕು. ಮಹದಾಯಿಗಾಗಿ ಹೋರಾಟ ನಡೆಸಿದ್ದ ಬಿಜೆಪಿಯ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಹ್ಲಾದ್‌ ಜೋಶಿ, ಸುರೇಶ ಅಂಗಡಿ, ಗದ್ದಿಗೌಡ್ರ ಅವರು ಸದ್ಯ ಶಾಸಕ, ಸಂಸದರಾಗಿದ್ದಾರೆ. ಮಹದಾಯಿ ಅನುಷ್ಠಾನಕ್ಕಾಗಿ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಸವಣ್ಣೆಯ್ಯ ಹಿರೇಮಠ, ವಸಂತ ಪಡಗದ, ವೆಂಕಟೇಶ ಬೇಲೂರ, ಮಹೇಶ ದಾಸರ, ನಿಸಾರಅಹ್ಮದ್‌ ಖಾಜಿ, ಎಂ.ಬಿ. ದೇಸಾಯಿ, ಕಲ್ಮೇಶ ಸುಳ್ಳದ, ಶಿವು ಹಾದಿಮನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ