ಆ್ಯಪ್ನಗರ

ನದಿ ಹರಿವು ಹೆಚ್ಚಳ, ಮುಳುಗಡೆ ಭೀತಿ

ಮುಂಡರಗಿ: ತುಂಗಭದ್ರಾ ನದಿ ಹರಿವು ಹೆಚ್ಚಾಗುತ್ತಿರುವುದರಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿನ ಗ್ರಾಮಗಳಾದ ಗುಮ್ಮಗೋಳ, ವಿಠಲಾಪೂರ, ಬಿದರಹಳ್ಳಿ ಗ್ರಾಮಗಳಿಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಗುರುವಾರ ನೀಡಿ ಪರಿಶೀಲಿಸಿದರು.

Vijaya Karnataka 9 Aug 2019, 5:00 am
ಮುಂಡರಗಿ: ತುಂಗಭದ್ರಾ ನದಿ ಹರಿವು ಹೆಚ್ಚಾಗುತ್ತಿರುವುದರಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿನ ಗ್ರಾಮಗಳಾದ ಗುಮ್ಮಗೋಳ, ವಿಠಲಾಪೂರ, ಬಿದರಹಳ್ಳಿ ಗ್ರಾಮಗಳಿಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಗುರುವಾರ ನೀಡಿ ಪರಿಶೀಲಿಸಿದರು.
Vijaya Karnataka Web HVR-08 KPM 01 MDR


ವಿಠಲಾಪೂರ ಗ್ರಾಮಕ್ಕೆ ಶಾಸಕರು ತೆರಳಿದಾಗ ಗ್ರಾಮದ ದುರ್ಗವ್ವ ನೆಗಳೂರ, 'ನದಿಯಾಗ ನೀರು ಬಂತೆಂದರೆ ಊರೊಳಗೆ ಹಾವು ಚೋಳು ಬರತ್ತಾವ್ರಿ, ಊರಾಗ ರಸ್ತೆ ಇಲ್ಲ, ಅಧಿಕಾರಿಗಳನ್ನ ಕೇಳಿದ್ರ ಸರಿಯಾಗಿ ಉತ್ತರಿಸುತ್ತಿಲ್ಲ, ಪ್ರತಿ ವರ್ಷವೂ ಇದಾ ಕತೀರಿ..' ಎಂದು ಅಳಲು ತೋಡಿಕೊಂಡಳು.

ಗ್ರಾಮಸ್ಥರು ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ವಿಠಲಾಪೂರ ಗ್ರಾಮವನ್ನು ಮುಳುಗಡೆ ಗ್ರಾಮ ಎಂದು ಪರಿಗಣಿಸಿಲ್ಲ, ಹೀಗಾಗಿ ನೀರು ಬಂದಾಗ ತೊಂದರೆ ತಪ್ಪುತ್ತಿಲ್ಲ, ಮುಳುಗಡೆ ಗ್ರಾಮ ಮಾಡಿ ನಮಗೊಂದು ವ್ಯವಸ್ಥೆ ಮಾಡಿರಿ ಎಂದು ಪರಶುರಾಮ ಜೋಗೇರ ಇತರರು ಒತ್ತಾಯಿಸಿದರು.

ಶಾಸಕ ರಾಮಣ್ಣ ಲಮಾಣಿ, ಏತ ನೀರಾವರಿ ಸೆಕ್ಷ ನ್‌ ಆಫೀಸರ್‌ ಎ.ಬಸವರಾಜ, ಮುಖಂಡರಾದ ಕರಬಸಪ್ಪ ಹಂಚಿನಾಳ ಸ್ಥಳದಲ್ಲಿದ್ದ ಪಿಡಿಒ ವೀರಣ್ಣ ವಡ್ಡರ ಅವರಿಗೆ ಕ್ರಮಕ್ಕೆ ನಿರ್ದೇಶನ ನೀಡಿದರು.

ಗುಮ್ಮಗೋಳಕ್ಕೆ ಶಾಸಕ ರಾಮಣ್ಣ ಲಮಾಣಿ ಭೇಟಿ ನೀಡಿದಾಗ ಗ್ರಾಮಸ್ಥರಾದ ಗೋಣಿಸ್ವಾಮಿ, ಜೋಗಿನ, ಈರಣ್ಣ ಮುಂಡರಗಿಮಠ, ರೇವಣಸಿದ್ದಪ್ಪ, ಲಕ್ಷ ್ಮಣ ಬಟ್ಟೂರ, ಫಕ್ಕೀರೇಶ, ನಾಗಪ್ಪ ಮದ್ದಿನ ಇತರರು ಅಳಲು ತೋಡಿಕೊಂಡರು. ಗ್ರಾಮ ಮುಳುಗಡೆ ಪ್ರದೇಶ ಎಂದು ಗುರುತಿಸಲಾಗಿದೆ. ಇದೇ ನೆಪದಲ್ಲಿ ಸರಕಾರದಿಂದ ಯಾವೊಂದು ಮೂಲಸೌಲಭ್ಯ ನೀಡಿಲ್ಲ ಎಂದು ದೂರಿದರು. ಗುಮ್ಮಗೋಳ, ಹಮ್ಮಿಗಿ ಸೇತುವೆ ಕುಸಿದು ಸಂಪರ್ಕ ಇಲ್ಲ. ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದಾಗ ಶಾಸಕ ರಾಮಣ್ಣ ಲಮಾಣಿ ಸೇತುವೆ ಪುನರ್‌ ನಿರ್ಮಾಣ ಮಾಡಿಸಲು ಬಸವರಾಜ ಅವರಿಗೆ ಆದೇಶಿಸಿದರು. ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ನಂತರ ಶಾಸಕ ಲಮಾಣಿ ಬಿದರಹಳ್ಳಿ ಗ್ರಾಮಕ್ಕೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ಹಳೆ ಸಿಂಗಟಾಲೂರಿಗೂ ಭೇಟಿ:
ಹಳೆ ಸಿಂಗಟಾಲೂರಿಗೆ ಕಳೆದ ಬಾರಿ ಪ್ರವಾಹ ಬಂದಾಗ 16 ಫಲಾನುಭವಿಗಳಿಗೆ ಆಶ್ರಯ ಮನೆ ನೀಡುವಂತೆ ಆದೇಶಿಸಲಾಗಿತ್ತು. ಈವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಪಿಡಿಒ ಎಸ್‌.ಕೆ.ಕವಡೆಲೆ ಅವರಿಂದ ಮಾಹಿತಿ ಪಡೆದು ಇನ್ನೊಮ್ಮೆ ಸರ್ವೆ ಮಾಡಿ ಅರ್ಹರಿಗೆ ಬಸವ ವಸತಿ ಯೋಜನೆ ಕಲ್ಪಿಸುವಂತೆ ಶಾಸಕರು ತಿಳಿಸಿದರು. ಈರಣ್ಣ ಶೆಟ್ಟರ, ಕುಮಾರಸ್ವಾಮಿ ಇತರರು ಮಂಜೂರು ಮಾಡಿದ ಮನೆಗಳು ರದ್ದಾಗಿವೆ ಎಂದೂ ದೂರಿದರು. ರಾಜ್ಯ ಮಟ್ಟದಲ್ಲಿಯೇ ರದ್ದಾಗಿವೆ. ಮುಂದೆ ಸರ್ವೆ ಮಾಡಿಸಲಾಗುವದು ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯಕ ತಿಳಿಸಿದರು. ಪಿಡಿಒ ಅವರಿಗೆ ತಿಳಿಸಿ ಮನೆಗಳ ವ್ಯವಸ್ಥೆ ಮಾಡಲಾಗುವದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ