ಆ್ಯಪ್ನಗರ

ನಾಟಕದಿಂದ ಶರಣ ಸಂದೇಶ ಸಾರಲಿ

ಗದಗ : ಪ್ರಭಾವಶಾಲಿ ಮಾಧ್ಯಮವಾಗಿರುವ ನಾಟಕದ ಮೂಲಕ ಶರಣರ ಸಂದೇಶವನ್ನು ಮನಗಳಿಗೆ ತಲುಪಿಸುವ ಅಗತ್ಯತೆ ಇಂದು ಅನಿವಾರ್ಯವಾಗಿದೆ ಎಂದು ಜಗದ್ಗುರು ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.

Vijaya Karnataka 20 Dec 2018, 5:00 am
ಗದಗ : ಪ್ರಭಾವಶಾಲಿ ಮಾಧ್ಯಮವಾಗಿರುವ ನಾಟಕದ ಮೂಲಕ ಶರಣರ ಸಂದೇಶವನ್ನು ಮನಗಳಿಗೆ ತಲುಪಿಸುವ ಅಗತ್ಯತೆ ಇಂದು ಅನಿವಾರ್ಯವಾಗಿದೆ ಎಂದು ಜಗದ್ಗುರು ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka Web GDG-19GDG4A
ಗದಗನ ಜ.ತೋಂಟದಾರ್ಯಮಠದಲ್ಲಿ ನಡೆದ ಶಿವಾನುಭವದಲ್ಲಿ ಧಾರವಾಡದ ಆಟ-ಮಾಟ ತಂಡದವರು ನುಲಿಯ ಚಂದಯ್ಯ ನಾಟಕವನ್ನು ಪ್ರದರ್ಶಿಸಿದರು.


ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆಯುವ 2411ನೇ ಶಿವಾನುಭವದಲ್ಲಿ ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಸ್ಮರಣೆಯಲ್ಲಿ ಜರುಗಿದ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.

ಕಾಯಕ, ದಾಸೋಹ ಹಾಗೂ ಇಷ್ಟಲಿಂಗದ ಮೂಲಕ ಬದುಕಿನ ಔನ್ನತ್ಯ ಸಾಧಿಸುವ ಬಗೆಯನ್ನು ಶರಣರು ಸರಳವಾಗಿ ವಿವರಿಸಿದ್ದಾರೆ. ಈ ಎಲ್ಲ ತತ್ವಗಳನ್ನು ಬಸವಾದಿ ಶರಣರು ಆಚರಣೆಗೆ ತಂದು ಸಮಾನ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಪ್ರಸ್ತುತ ಈ ನಾಟಕ ಕಾಯಕದ ಹಿರಿಮೆ ಗರಿಮೆಯನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಲಿಂಗದ ಮುಖ ಜಂಗಮ. ಜಂಗಮ ಮತ್ತು ಲಿಂಗ ಬೇರೆ ಬೇರೆ ಅಲ್ಲ. ಇಷ್ಟಲಿಂಗದ ಪೂಜೆ ಮನುಷ್ಯನನ್ನು ಸಧೃಡನನ್ನಾಗಿಸುತ್ತದೆ ಎಂದರು.

ನಾಟಕದ ರಚನೆಕಾರ ಪ್ರೊ.ಚಂದ್ರಶೇಖರ ವಸ್ತ್ರದ ಮಾತನಾಡಿ, ಬಸವಾದಿ ಶರಣರ ಅನೇಕ ಪ್ರಸಂಗಗಳನ್ನು ನಾಟಕ, ರೂಪಕಗಳ ಮೂಲಕ ಸರಳವಾಗಿ ಜನರಿಗೆ ತಿಳಿಸುವ ಆಶಯವನ್ನು ತೋಂಟದ ಸಿದ್ಧಲಿಂಗ ಶ್ರೀಗಳು ಹೊಂದಿದ್ದರು. ನುಲಿಯ ಚಂದಯ್ಯನ ಪ್ರಸಂಗ 20 ವರ್ಷಗಳ ಹಿಂದೆ ಶಿವಾನುಭವ ವೇದಿಕೆಯಲ್ಲಿ ಜರುಗಿತ್ತು. ತೋಂಟದ ಶ್ರೀಗಳು ಚನ್ನಬಸವಣ್ಣನ ಪಾತ್ರ ನಿರ್ವಹಿಸಿದ್ದರು. ನಂತರ ಅನೇಕ ಸ್ಥಳಗಳಲ್ಲಿ ಈ ಪ್ರಸಂಗ ಪ್ರದರ್ಶನಗೊಂಡಿತು. ಅವರ ಸ್ಮರಣೆಯಲ್ಲಿ ಈ ಪ್ರಸಂಗವನ್ನು ಧಾರವಾಡದ ಆಟಮಾಟ ತಂಡದವರು ರಂಗರೂಪಕ್ಕೆ ತಂದು ರಾಜ್ಯಾದ್ಯಂತ ಪ್ರದರ್ಶನ ಮಾಡಲಿದ್ದಾರೆ ಎಂದರು.

ಗಾಯತ್ರಿ ಮಹದೇವ ಅವರ ನಿರ್ದೇಶನ, ಅರುಣಕುಮಾರ ಸೊರಬ ಅವರ ಸಂಗೀತ ಹಾಗೂ ರಾಮಚಂದ್ರ ಶೇರಿಕಾರ್‌ ಅವರ ರಂಗಸಜ್ಜಿಕೆಯಲ್ಲಿ ಧಾರವಾಡ ಆಟಮಾಟ ತಂಡದವರು ನುಲಿಯ ಚಂದಯ್ಯ ನಾಟಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪ್ರದರ್ಶಿಸಿದರು.

ವಚನ ಸಂಗೀತವನ್ನು ಗುರುನಾಥ ಸುತಾರ ಪ್ರಸ್ತುತಪಡಿಸಿದರು. ಧರ್ಮಗ್ರಂಥ ಪಠಣ ತನ್ಮಯ ಶಿವಯ್ಯಮಠ, ವಚನ ಚಿಂತನ ಅನಘಾ ಪಿಳ್ಳಿ ನೆರವೇರಿಸಿದರು.

ಸಾವಂತ್ರೆವ್ವ ಪಿಳ್ಳಿ, ಮಹಾದೇವಿ ಪಟ್ಟಣಶೆಟ್ಟಿ, ವಿವೇಕಾನಂದಗೌಡ ಪಾಟೀಲ, ಜಿ.ಪಿ.ಕಟ್ಟಿಮನಿ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.ಎಸ್‌.ಯು.ಸಜ್ಜನಶೆಟ್ರ ನಿರೂಪಿಸಿದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ