ಕೊಣ್ಣೂರ:ಕೊಣ್ಣೂರು ಗ್ರಾಮವು ಜಾನಪದ ಸಾಂಸ್ಕೃತಿಕ ಕಲೆಗಳ ತವರೂರು ಆಗಿದ್ದು, ಇಲ್ಲಿನ ಕಲಾವಿದರು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು.
ಜಿಲ್ಲಾ ಆಡಳಿತ, ಜಿಪಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಗದಗ ತಾಪಂ, ಗ್ರಾಪಂ, ಜೈಕಿಸಾನ ಸಾಂಸ್ಕೃತಿಕ ಜಾನಪದ ಕಲಾ ತಂಡ ಹಾಗೂ ಜಿಲ್ಲಾ ಯುವಕ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಎಂ.ಪಿ.ಎಸ್. ಬಯಲು ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ಕೊಣ್ಣೂರು ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಲಾಗುವುದು. ಈ ಮೂಲಕ ಗ್ರಾಮೀಣ ಭಾಗದಲ್ಲಿ ಶೈಕ್ಷ ಣಿಕ ಕ್ರಾಂತಿ ಮಾಡಲಾಗುವುದು ಎಂದರು.
ತಾ.ಪಂ. ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿ, ಇಂದು ಯುವಜನತೆ ಇಂಟರ್ನೆಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮದ್ಯಪಾನ, ಧೂಮಪಾನ ಸೇರಿದಂತೆ ಹಲವು ದುಶ್ಟಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವ ಜನತೆ ಭವಿಷ್ಯತ್ತಿನ ನಾಯಕರಾಗಿದ್ದು ಸಾಮಾಜಿಕವಾಗಿ, ಆರ್ಥಿಕವಾಗಿ,ಶೈಕ್ಷ ಣಿಕವಾಗಿ ಸ್ವಾಭಿಮಾನ-ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ತಾ.ಪಂ ಸದಸ್ಯ ತಮ್ಮನಗೌಡ ಶಿರಿಯಪ್ಪಗೌಡ್ರ ಮಾತನಾಡಿ, ಸ್ಥಳೀಯ ಜೈಕಿಸಾನ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡವು ಕೋಲಾಟ, ಜಾನಪದ ಗೀತೆ, ಯಲ್ಲಮ್ಮನ ನೃತ್ಯ, ಡೊಳ್ಳು ಕುಣಿತ, ಲಾವಣಿ ಪದ, ಗೀಗೀ ಪದ ಹಾಗೂ ಜಾನಪದ ನೃತ್ಯ ಸೇರಿದಂತೆ ವಿವಿಧ ಜಾನಪದ ಪ್ರಕಾರಗಳ ಮೂಲಕ ಜನರಲ್ಲಿ ಸ್ವಚ್ಛ ಆರೋಗ್ಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಜಿ.ಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಮಾಮಹುಸೇನ್ ಮಸೂತಿಮನಿ ಹಾಗೂ ಜೈಕಿಸಾನ ಕಲಾತಂಡದ ಪ್ರಕಾಶ ಚಂದನ್ನವರ ಅವರನ್ನು ಸನ್ಮಾನಿಸಲಾಯಿತು. ರೇಣುಕಾ ಅವರಾದಿ, ಬಿ.ಬಿ.ವಿಶ್ವನಾಥ, ಎನ್.ಆರ್.ನಿಡಗುಂದಿ ಉಪಸ್ಥಿತರಿದ್ದರು. ಸಾಂಬಯ್ಯ ಹಿರೇಮಠ,ಈಶ್ವರ ಅರಳಿ, ಡಿ.ವೈ.ಕಾಡಪ್ಪನವರ,ರಾಜು ಕಲಾಲ, ಶಿವಾನಂದ ಶೇಬಣ್ಣವರ, ಶಾಂತಮ್ಮ ಕೆಂಚನಗೌಡ್ರ ಸೇರಿದಂತೆ ಜಾನಪದ ಕಲಾವಿದರು ಹಾಗೂ ಗ್ರಾಮಸ್ಥರು ಉಪಸ್ಥರಿದ್ದರು. ಪ್ರಕಾಶ ಚಂದನ್ನವರ ಸ್ವಾಗತಿಸಿದರು, ಆರ್.ಬಿ.ಚಿನಿವಾಲರ ನಿರೂಪಿಸಿ, ವಂದಿಸಿದರು.