ಆ್ಯಪ್ನಗರ

ಕೃಷಿ ಸುಧಾರಣೆ ಮಾಹಿತಿ ಆಗರ

ಗದಗ:ತಾಲೂಕಿನ ಹುಲಕೋಟಿ ಕೈಲಾಸಾಶ್ರಮದ 25ನೇ ವಾರ್ಷಿಕೋತ್ಸವದ ಅಂಗವಾಗಿ ಕೃಷಿ ಇಲಾಖೆ ಹಾಗೂ ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರಗಳು ಶನಿವಾರ

ವಿಕ ಸುದ್ದಿಲೋಕ 29 Jan 2017, 5:00 am

ಗದಗ:ತಾಲೂಕಿನ ಹುಲಕೋಟಿ ಕೈಲಾಸಾಶ್ರಮದ 25ನೇ ವಾರ್ಷಿಕೋತ್ಸವದ ಅಂಗವಾಗಿ ಕೃಷಿ ಇಲಾಖೆ ಹಾಗೂ ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರಗಳು ಶನಿವಾರ ಹಮ್ಮಿಕೊಂಡಿದ್ದ 'ಕೃಷಿ ತಂತ್ರಜ್ಞಾನ ಪ್ರದರ್ಶನ'ವು ರೈತರಿಗೆ ಕೃಷಿ ಕ್ಷೇತ್ರದ ಸುಧಾರಣೆ ಕ್ರಮಗಳ ಮಾಹಿತಿ ಒದಗಿಸಿತು.

ಆತ್ಮ ಯೋಜನೆಯಡಿ ಗ್ರಾಮದ ಕೈಲಾಸಾಶ್ರಮದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ಮಣ್ಣಿನ ಪರೀಕ್ಷೆ ವಿಧಾನಗಳು, ನೀರಿನ ಸಂರಕ್ಷ ಣೆ, ಮಳೆ ನೀರು ಕೊಯ್ಲು, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳ ಮರುಪೂರಣ, ಪರ್ಯಾಯ ಭೂಬಳಕೆ ಪದ್ಧತಿಗಳು, ಒಣ ಬೇಸಾಯದಲ್ಲಿ ತೋಟಗಾರಿಕೆ ಹಾಗೂ ಸಾವಯವ ಗೊಬ್ಬರ ಬಗ್ಗೆ ರೈತರು ಮಾಹಿತಿ ಪಡೆದರು.

ವಿವಿಧ ಕಷಾಯ: ಬೆಳೆಗಳಿಗೆ ಕೀಟ ಬಾಧೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕಾಗುವ ಬೀಜಾಮೃತ, ಜೀವಾಮೃತ, ಪಂಚಗವ್ಯ ಹಾಗೂ ತರಕಾರಿ ಬೆಳೆಗಳಿಗೆ ರೋಗ, ಕೀಟ ನಾಶಕಕ್ಕೆ ಸಿಂಪಡಿಸುವ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಕಷಾಯ, ಬೇವಿನ ಬೀಜದ ಕಷಾಯ, ಬೇವು ಸೇರಿದಂತೆ ಇತರೆ ಎಲೆಗಳ ಕಷಾಯ, ಸುಡೋಮೊನಾಸ್‌ ತಯಾರಿಸುವ ವಿಧಾನ ಹಾಗೂ ಬಳಕೆ ಮಾಡುವ ಕುರಿತು ಕೃಷಿ ವಿಜ್ಞಾನಿಗಳು ರೈತರಿಗೆ ವಿವರಣೆ ನೀಡಿದರು.

ಸುಲಭವಾಗಿ ಕಳೆ ತೆಗೆಯುವ, ತೇವಾಂಶ ಕಾಪಾಡುವ ಎಡೆಹೊಡೆಯುವ ಕುಂಟೆ, ಕಾಳು ಸ್ವಚ್ಛಗೊಳ್ಳಿಸುವ, ಗಾತ್ರಕ್ಕೆ ತಕ್ಕಂತೆ ವಿಂಗಡಿಸುವ ಯಂತ್ರಗಳು ಪ್ರದರ್ಶನದಲ್ಲಿದ್ದವು. ಸಾವಯವ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಿರಿಧಾನ್ಯಗಳ ಮಹತ್ವ, ಆಹಾರದಲ್ಲಿ ಅವುಗಳ ಉಪಯೋಗ, ಹೈನುಗಾರಿಕೆ ತಂತ್ರಜ್ಞಾನಗಳು, ಶ್ರಮ ಕಡಿಮೆ ಮಾಡುವ ವಿವಿಧ ಸಾಧನಗಳ ಬಗ್ಗೆ ಕೃಷಿ ತಜ್ಞರು ಪ್ರಾತ್ಯಕ್ಷಿಕೆ ನೀಡಿದರು.

ಕೃಷಿ ತಂತ್ರಜ್ಞಾನ ಪ್ರದರ್ಶನದಲ್ಲಿ ಆರು ಮಳಿಗೆಗೆಗಳನ್ನು ಹಾಕಲಾಗಿತ್ತು. ಕೃಷಿ ಪರಿಕರಗಳೊಂದಿಗೆ ಜೋಳದ ಮೌಲ್ಯವರ್ಧಿತ ಪದಾರ್ಥಗಳಾದ ಬಿಸ್ಕೇಟ್‌, ಚಕ್ಕುಲಿ, ಶಾವಿಗೆ, ಕೋಡುಬಳೆ, ಕೇಕ್‌, ಸಿಹಿ ಸಂಕರಪಾಳೆ, ಕಾರದ ಶಂಕರಪಾಳೆ, ನಿಪ್ಪಟ್ಟು ಹಾಗೂ ಹಪ್ಪಳಗಳು ರೈತರ ಗಮನ ಸೆಳೆದವು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಡಿ.ಆರ್‌. ಪಾಟೀಲ, ಸಿ.ಜಿ. ಕೊರವನವರ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ