ಆ್ಯಪ್ನಗರ

ಮೂಕ ಪ್ರಾಣಿಗಳಿಗೆ ಇಲ್ಲಿದೆ ನೆಲೆ

ಗದಗ : ಯಾರಿಗೂ ಬೇಡವಾದ ಮೂಕ ಪ್ರಾಣಿಗಳಿಗೆ ನೆಲೆ ಕಲ್ಪಿಸುವ ಮೂಲಕ ಒಂದು ದಶಕದಿಂದ ನಗರದ ಕಳಸಾಪುರ ರಸ್ತೆಯಲ್ಲಿನ ಮಹಾವೀರ ಗೋ ಸೇವಾ ಸಮಿತಿ ಇತರರಿಗೆ ಮಾದರಿಯಾಗುವ ಮೂಲಕ ಮೂಕ ಪ್ರಾಣಿಗಳಿಗೆ ಒಂದು ಸೂರು ನೀಡಿದೆ.

Vijaya Karnataka 23 Mar 2019, 5:00 am
ಗದಗ : ಯಾರಿಗೂ ಬೇಡವಾದ ಮೂಕ ಪ್ರಾಣಿಗಳಿಗೆ ನೆಲೆ ಕಲ್ಪಿಸುವ ಮೂಲಕ ಒಂದು ದಶಕದಿಂದ ನಗರದ ಕಳಸಾಪುರ ರಸ್ತೆಯಲ್ಲಿನ ಮಹಾವೀರ ಗೋ ಸೇವಾ ಸಮಿತಿ ಇತರರಿಗೆ ಮಾದರಿಯಾಗುವ ಮೂಲಕ ಮೂಕ ಪ್ರಾಣಿಗಳಿಗೆ ಒಂದು ಸೂರು ನೀಡಿದೆ.
Vijaya Karnataka Web GDG-22RUDRAGOUD6D
ಗದಗ ಕಳಸಾಪುರ ರಸ್ತೆಯಲ್ಲಿರುವ ಮಹಾವೀರ ಗೋ ಶಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜಾನುವಾರಗಳು.


ಅವಳಿ ನಗರದಲ್ಲಿ ವಯಸ್ಸಾದ, ಸಾಕಲಾಗದ ಅನಾಥ, ವಿವಿಧ ಕಾರಣಗಳಿಂದ ಉಪಯೋಗಕ್ಕೆ ಬಾರದ ರಾಸುಗಳು ಆಹಾರ, ನೀರು ಇಲ್ಲದೇ ಸಾಯಬಾರದೆಂಬ ಉದ್ದೇಶದಿಂದ ಸೇವಾ ಸಮಿತಿ ಪಾಂಜಾರ ಪೋಳದಲ್ಲಿ ಮಹಾವೀರ ಗೋಶಾಲೆ ಆರಂಭಿಸಿದೆ. ಅಪಘಾತಕ್ಕೀಡಾದ, ರೋಗಗಳಿಂದ ಬಳಲುತ್ತಿರುವ ಹಸುಗಳು, ನಿರ್ಲಕ್ಷಿತ ಕರುಗಳು, ಮುದಿ ಎತ್ತುಗಳು, ಕಣ್ಣು ಇಲ್ಲದ ಕುದುರೆ, ನಾಯಿ, ಎತ್ತು ಸೇರಿದಂತೆ ಇಲ್ಲಿನ ಕಳಸಾಪುರ ರಸ್ತೆಯಲ್ಲಿನ ಗೋಶಾಲೆಯಲ್ಲಿ 224 ಪ್ರಾಣಿಗಳ ಪಾಲನೆ ಮಾಡಲಾಗುತ್ತಿದೆ.

ಶತಮಾನದ ಇತಿಹಾಸ:

ಅಹಿಂಸೆ ಪ್ರತಿಪಾದಿಸುವ ಜೈನ ಸಮುದಾಯದವರು 1903 ರಲ್ಲಿ ಪಾಂಜಾರ ಪೋಳದಲ್ಲಿ ಗೋ ಸೇವೆಗೆ ಚಾಲನೆ ನೀಡಲಾಗಿತ್ತು. 1987 ರಲ್ಲಿ ಅನಿವಾರ್ಯ ಕಾರಣದಿಂದ ಸೇವೆ ನಿಲ್ಲಿಸಲಾಯಿತು. ಪುನಃ 2008 ರಲ್ಲಿ 5 ಹಸುಗಳಿಂದ ಆರಂಭವಾದ ಮಹಾವೀರ ಗೋ ಸೇವಾ ಸಮಿತಿ ಇಂದು 224 ಪ್ರಾಣಿಗಳಿಗೆ ಆಶ್ರಯ ನೀಡುವ ಮೂಲಕ ಮೂಕ ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಜತೆಗೆ ಮೇವಿನ ಕೊರತೆಯಿಂದ ಕಸಾಯಿಖಾನೆಗೆ ಮಾರಾಟ ಮಾಡಿದ್ದ ಹಸುಗಳನ್ನು ಸೇವಾ ಸಮಿತಿ ಮರಳಿ ಖರೀದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಹಸುಗಳು ಮಾತ್ರವಲ್ಲದೇ ನಾಯಿ, ಎತ್ತು, ಕರು ಹೀಗೆ ಹಲವು ಮೂಕ ಪ್ರಾಣಿಗಳನ್ನು ಸೇವಾ ಸಮಿತಿ ಸದಸ್ಯರು ಸಾಕುತ್ತಿದ್ದಾರೆ.

ದಾನಿಗಳು ಆಧಾರ:

ನಗರದ ಗೋ ಶಾಲೆಗೆ ಸರಕಾರದಿಂದ ನೆರವನ್ನು ಸಮಿತಿ ಪಡೆದಿಲ್ಲ. ದಾನಿಗಳು ನೀಡಿದ ಹಣದಿಂದ ರಾಸುಗಳನ್ನು ಪಾಲನೆ ಮಾಡಲಾಗುತ್ತಿದೆ. ಕೆಲ ದಾನಿಗಳು ಹಸುಗಳಿಗೆ ಒಂದು ವರ್ಷಕ್ಕೆ ಆಗುವಷ್ಟು ಮೇವು ನೀಡುತ್ತಾರೆ. ಇನ್ನೂ ಕೆಲವರು ತಮ್ಮ ಜನ್ಮ ದಿನವನ್ನು ಗೋ ಶಾಲೆಯಲ್ಲೆ ಆಚರಿಸಿಕೊಳ್ಳುತ್ತಾರೆ. ಕೆಲವುರು ಇತರೆ ಕಾರ್ಯಕ್ರವನ್ನು ಸಹ ಇಲ್ಲೇ ಆಚರಣೆ ಮಾಡಿಕೊಳ್ಳುತ್ತಾರೆ. 7 ಸಿಬ್ಬಂದಿ ಸಮಿತಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. 5 ಕುಟುಂಬಗಳು ಗೋಶಾಲೆಯಲ್ಲೆ ವಾಸ್ತವ್ಯ ಹೂಡಿವೆ. ಅನಾಥ ಹಸುಗಳನ್ನು ಒಪ್ಪಿಸಲು, ಸಮಿತಿಗೆ ಅಗತ್ಯ ಮೇವು ಸೇರಿದಂತೆ ಅಗತ್ಯ ನೆರವು ನೀಡಲು ಬಯಸುವವರು ಸಮಿತಿ ಸದಸ್ಯರು ನರೇಶ ಜೈನ್‌ ಮೊ.9845436157 ಅವರನ್ನು ಸಂಪರ್ಕಿಸಬಹುದು.

ನೀರಿನ ಸಮಸ್ಯೆ ಇಲ್ಲ:

ಜಿಲ್ಲೆಯಲ್ಲಿ ಭೀಕರ ಬರಗಾಲ ಇದ್ದರೂ ಸಹ ಇಲ್ಲಿನ ಗೋ ಶಾಲೆಯಲ್ಲಿ ಮೂರು ಕೊಳೆವೆ ಬಾವಿ ಕೊರೆಸಲಾಗಿದೆ. ಅದರಿಂದ ಇಲ್ಲಿನ ಎಲ್ಲ ಜಾನುವಾರುಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಜತೆಗೆ ಒಂದು ವರ್ಷಕ್ಕೆ ಆಗುವಷ್ಟು ಸುಮಾರು 200 ಟ್ರ್ಯಾಕ್ಟರ್‌ ಮೇವು, 30 ಟ್ರ್ಯಾಕ್ಟರ್‌ ಸಿಂಗಾದ ಹೊಟ್ಟು, 30 ಟ್ರ್ಯಾಕ್ಟರ್‌ ಕೊಡಲೆ ಹಿಟ್ಟು ಸಂಗ್ರಹ ಮಾಡಲಾಗಿದೆ. ಸುಮಾರು 10 ಎಕರೆ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜಾನುವಾರಗಳಿಗೆ ಚಿಕಿತ್ಸೆಯನ್ನು ಪಶು ಆಸ್ಪತ್ರೆಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ