ಆ್ಯಪ್ನಗರ

ಕೆರೆಗೆ ಕೊಳಚೆ ನೀರು....!

ಪ್ರಭು ಗುಡಾರದ ನರಗುಂದ: ಹೆಸರಿಗೆ ನರಗುಂದ.. ಮೊಸರಿಗೆ ನೀರಿಲ್ಲ.....ಇದು ನರಗುಂದವನ್ನು ಆಳಿದ ಅರಸ ವೀರ ಬಾಬಾಸಾಹೇಬರ ಕಾಲದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದ ಸಂದರ್ಭದಲ್ಲಿ ಜನರ ಬಾಯಲ್ಲಿ ಹುಟ್ಟಿಕೊಂಡ ಜನಪದ.

Vijaya Karnataka 5 Jul 2019, 5:00 am
ಪ್ರಭು ಗುಡಾರದ ನರಗುಂದ: ಹೆಸರಿಗೆ ನರಗುಂದ.. ಮೊಸರಿಗೆ ನೀರಿಲ್ಲ.....ಇದು ನರಗುಂದವನ್ನು ಆಳಿದ ಅರಸ ವೀರ ಬಾಬಾಸಾಹೇಬರ ಕಾಲದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದ ಸಂದರ್ಭದಲ್ಲಿ ಜನರ ಬಾಯಲ್ಲಿ ಹುಟ್ಟಿಕೊಂಡ ಜನಪದ.
Vijaya Karnataka Web GDG-3NRD1


ಜನರ ನೀರಿನ ಸಮಸ್ಯೆ ಹೋಗಲಾಡಿಸಲು ಬಾಬಾಸಾಹೇಬರು ನಿರ್ಮಿಸಿದ್ದ ಪಡುವಗೊಂಡನ ಕೆರೆ ನರಗುಂದ ಜನರ ದಾಹ ತೀರಿಸಿತ್ತು. ಆದರೆ ದಶಕಗಳಿಂದ ಮೂಢ ನಂಬಿಕೆಗೆ ಮತ್ತು ನಿರ್ಲಕ್ಷ ಕ್ಕೆ ಒಳಗಾದ ಪಡುವಗೊಂಡ ಕೆರೆ ಚರಂಡಿ ನೀರಿನ ಕೊಳವಾಗಿ ಮಾರ್ಪಟ್ಟಿದೆ.

ಪಡುವಗಂಡ ಕೆರೆ ಇಡಿ ಊರಿನ ಜನ ದಾಹ ತೀರಿಸುತ್ತಿತ್ತು. ಈ ಕೆರೆಯಿಂದ ಸುತ್ತಮುತ್ತಲೂ ಅಂತರ್ಜಲ ಹೇರಳವಾಗಿತ್ತು. ಕೃಷಿಕರನ್ನು ಹೊಂದಿದ ನರಗುಂದದಲ್ಲಿ ಜಾನುವಾರುಗಳಿಗೆ ಪಡುವಗೊಂಡ ಕೆರೆ ಆಶ್ರಯವಾಗಿತ್ತು. ಆದರೆ ಜನ ಸಂಖ್ಯೆ ಬೆಳೆದಂತೆ ನೀರಿನ ಕೊರತೆ ಹೆಚ್ಚಾಯಿತು. ಆಗ ಮಲಪ್ರಭಾ ಕಾಲುವೆ ನೀರನ್ನು ಕೆರೆಗೆ ಹರಿಸಿ ಬರಿಸಲಾಗುತ್ತಿತ್ತು. ನಂತರದಲ್ಲಿ ಹರಿದು ಬರುತ್ತಿದ್ದ ಕಾಲುವೆ ನೀರಿಗೆ ಚರಂಡಿ ನೀರು ಸೇರಿ ಗಲೀಜು ನಿರ್ಮಾಣವಾಗಿದ್ದರಿಂದ ಮತ್ತು ಕೆರೆ ರಕ್ಷ ಣೆ ಮಾಡದಿದ್ದರಿಂದ ಜನರ ಬಳಕೆ ಕಡಿಮೆಯಾಗಿದ್ದು ಅಲ್ಲದೆ ಜಾನುವಾರುಗಳು ನೀರನ್ನು ಮುಟ್ಟದ ಪರಿಸ್ಥಿತಿ ನಿರ್ಮಾಣವಾಗಿಯಿತು ಎಂಬುದು ಜನರ ಆರೋಪ.

ಕೈಬಿಟ್ಟ ಪೈಪ್‌ಲೈನ್‌ ಜೋಡಣೆ: ದಂಡಾಪುರ ಸುತ್ತಮುತ್ತ ಕೃಷಿಕರು ಇರುವುದರಿಂದ ಜಾನುವಾರುಗಳಿಗೆ ಅನುಕೂಲವಾಗಿದ್ದ ಪಡುವಗೊಂಡ ಕೆರೆ ನೀರು ಕೊಳಚೆಯಾಗುತ್ತಿರುವುದನ್ನು ಕಂಡು ಸಾರ್ವಜನಿಕರು ಮಲಪ್ರಭಾ ಕಾಲುವೆಯಿಂದ ಕೆರೆವರೆಗೆ ಪೈಪ್‌ಲೈನ್‌ ಅಳವಡಿಸಿ ನೀರು ಭರಿಸುವಂತೆ ಒತ್ತಾಯಿಸಿದರಾದರೂ ಪುರಸಭೆ ಅಧಿಕಾರಿಗಳಾಗಲಿ, ಶಾಸಕರಾಗಲಿ ರೈತರ ಬೇಡಿಕೆ ಇಡೇರಲಿಲ್ಲ. ಬದಲಾಗಿ ಜನತಾ ಪ್ಲಾಟ್‌, ನೀರಾವರಿ ಕಾಲೊನಿಯಿಂದ ಹರಿದು ಬರುವ ಚರಂಡಿ ನೀರು ನೇರವಾಗಿ ಪಡುವಗೊಂಡ ಕೆರೆಗೆ ಸೇರಿ ಸಂಪೂರ್ಣ ಕೊಳಚೆಯಾಗಿ ಮಾರ್ಪಟ್ಟಿದೆ.

ಜಾನಪದ ನುಡಿ: ಜನರ ದಾಹ ತೀರಿಸಲು 1852ರಲ್ಲಿ ವೀರ ಬಾಬಾಬಾಸಾಹೇಬರು ದಂಡಾಪೂರದಲ್ಲಿ ಬೃಹತ್‌ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇನ್ನೇನು ಕೆರೆ ಕಡಿಸಿ ನೀರು ತುಂಬಿಸಿ ನೀರು ಕುಡಿಯಬೇಕು ಎಂದುಕೊಂಡಿದ್ದ ಬಾಬಾಸಾಹೇಬರ ಮೇಲೆ ಬ್ರಿಟಿಷರು ದಾಳಿ ಮಾಡಿ ಸೆರೆ ಹಿಡಿದು ಗಲ್ಲಿಗೇರಿಸಿದ್ದರು. ಆಗ ' ನರಗುಂದ ಎಂಬುದು ಅರಗಿಣಿ ಪಟ್ಟಣ, ಕೆರೆ ಕಡಿಸಿ ನೀರು ಕುಡಿಯಲಿಲ್ಲ ಬಾಬಣ್ಣ, ಮರಳಿ ನರಗುಂದಕ್ಕೆ ಹೋಗಲಿಲ್ಲ' ಎಂಬ ಜನಪದ ನುಡಿ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಮಲಪ್ರಭಾ ಕಾಲುವೆ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆ ತುಂಬಿಸಲು ಒತ್ತಾಯದ ನಡುವೆ ಕೆರೆಗೆ ಕಾಯಕಲ್ಪ ಮಾಡಲು ಮುಂದಾದ ಸಂದರ್ಭದಲ್ಲಿ ಆದ ದುರ್ಘಟನೆ, ಅಧಿಕಾರ ಕಳೆದುಕೊಂಡ ಪರಿಣಾಮ ಕೆರೆ ಅಭಿವೃದ್ಧಿ ಪಡಿಸಿ ಸುತ್ತಲೂ ಉದ್ಯಾನ ನಿರ್ಮಿಸುವ ಯೋಜನೆ ಕೈಬಿಟ್ಟು ಕೆರೆ ಸಹವಾಸ ಬೇಡ ಎಂದು ದೂರ ಸರಿದರು. ಕೊನೆ ಪಕ್ಷ ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರೂ ಅಧಿಕಾರಿಗಳು ಕೆರೆಯತ್ತ ಕಣ್ಣುಬಿಟ್ಟು ನೋಡಲಿಲ್ಲ. ಇದರಿಂದ ಬಾಬಾಸಾಹೇಬರ ನಿರ್ಮಿಸಿದ ಕರೆ ಪಾಳು ಬಿದ್ದ ಕೊಳಚೆ ಕೆರೆಯಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿ.

ಇದೀಗ ನರಗುಂದ ಜನರಿಗೆ ನೀರಿನ ಬವಣೆ ದೂರವಾಗಿದೆ, 24*7 ಯೋಜನೆಯಿಂದ ನಿತ್ಯವೂ ನೀರನ್ನು ಪಡೆಯುತ್ತಿರುವುದರಿಂದ ಐತಿಹಾಸಿಕ ಪಡುವಗೊಂಡ ಕೆರೆ ಜತೆಗೆ ಇತಿಹಾಸ ಪ್ರಸಿದ್ದ ಹಾಲಬಾವಿ ಕೆರೆ, ಸೋಮಾಪುರ ಕೆರೆ, ಸಾಲಿ ಬಸವೇಶ್ವರ ಕೆರೆಗಳು ಇತಿಹಾಸ ಪುಟ ಸೇರುವ ಮೂಲಕ ರೋಗಗ್ರಸ್ತ ಕೆರೆಗಳಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ