ಅರಕಲಗೂಡು: ದುಪ್ಪಟ್ಟು ಹಣ ವಸೂಲಿ
ಪಟ್ಟಣ ಹಾಗೂ ತಾಲೂಕಿನ ರಾಮನಾಥಪುರ ಬಸ್ ಘಟಕಗಳಿಂದ ಸೋಮವಾರ ಯಾವುದೇ ಬಸ್ ಸಂಚಾರ ಆರಂಭವಾಗಲಿಲ್ಲ.
ಅರಕಲಗೂಡು: ಪಟ್ಟಣ ಹಾಗೂ ತಾಲೂಕಿನ ರಾಮನಾಥಪುರ ಬಸ್ ಘಟಕಗಳಿಂದ ಸೋಮವಾರ ಯಾವುದೇ ಬಸ್ ಸಂಚಾರ ಆರಂಭವಾಗಲಿಲ್ಲ.
ಸಾರಿಗೆ ನೌಕರರ ಮುಷ್ಕರ ಹಾಗೂ ಬಂದ್ ಹಿನ್ನೆಲೆ ಎರಡು ಘಟಕಗಳಲ್ಲಿನ ನೌಕರರು ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡು ಬಂದಿತು. ಎರಡು ಘಟಕಗಳಿಂದ ಒಟ್ಟು 200 ಸಾರಿಗೆ ಬಸ್ಗಳಿದ್ದು, ಇಂದಿನ ಮುಷ್ಕರ ಹಿನ್ನೆಲೆ ಒಂದು ವಾಹನವೂ ಡಿಪೋದಿಂದ ಹೊರ ಬರಲಿಲ್ಲ. ಭಾನುವಾರ ರಾತ್ರಿ ಕರ್ತವ್ಯದಿಂದ ಇಳಿದಿರುವ 12 ಮಂದಿಯನ್ನು ಹೊರತುಪಡಿಸಿದರೇ ಉಳಿದಂತೆ ಎಲ್ಲಾ ನೌಕರರು ಗೈರಾಗಿದ್ದರು.
ಎರಡು ಘಟಕಗಳ ಬಳಿ ಬಿಗಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಿರುವ ಹಿನ್ನೆಲೆ ನೌಕರರು ಪ್ರತಿಭಟನೆ, ಮುಷ್ಕರವನ್ನು ನಡೆಸದೇ ಇರುವುದು ಕಂಡು ಬಂದಿತು. ಸಾರಿಗೆ ಬಸ್ ಸಂಚಾರ ಬಂದ್ ಆಗಿರುವ ಹಿನ್ನೆಲೆ ದೂರದ ಊರುಗಳಿಂದ ಬರುವ ಮತ್ತು ಹೊರ ಹೋಗುವ ಪ್ರಯಾಣಿಕರ ಸಂಖ್ಯೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಂಡು ಬರಲಿಲ್ಲ. ಎಂದಿನಂತೆ ಖಾಸಗಿ ವಾಹನಗಳ ಸಂಚಾರವಿತ್ತು.
ಪಟ್ಟಣದಲ್ಲಿ ಬಹುತೇಕ ಸರಕಾರಿ ಶಾಲಾ ಕಾಲೇಜುಗಳು ತೆರದಿದ್ದು, ಗ್ರಾಮಾಂತರ ಭಾಗದಿಂದ ಬರುವ ವಿದ್ಯಾರ್ಥಿಗಳು ಗೈರಾಗಿದ್ದರು. ಅಲ್ಲದೆ ಪಟ್ಟಣದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಮುಖಗೊಂಡಿತ್ತು. ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿದ್ದವು. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೂ ಕೂಡ ಪಟ್ಟಣದಿಂದ ದೂರದ ಊರುಗಳಿಗೆ ತೆರಳುವ ಮತ್ತು ಆಗಮಿಸುವ ಪ್ರಯಾಣಿಕರು ಯಾವುದೇ ಸಮಸ್ಯೆ ಎದುರಾಗದಂತೆ ಖಾಸಗಿ ವಾಹನಗಳನ್ನು ಅವಲಂಭಿಸಿರುವುದು ಸರ್ವೆ ಸಾಮಾನ್ಯವಾಗಿತ್ತು. ಪ್ರತಿದಿನ ಮಾಮೂಲಿ ಹಣ ಪಡೆಯುತ್ತಿದ್ದ ಖಾಸಗಿ ವಾಹನಗಳ ಮಾಲೀಕರು ಇಂದಿನ ಬಸ್ ಸಂಚಾರ ಸ್ಥಗಿತಗೊಂಡಿರುವುದನ್ನು ಮನಗಂಡು ಒಂದಕ್ಕೆ ಎರಡು ಪಟ್ಟು ಹಣ ಪಡೆಯುತ್ತಿರುವುದು ಕಂಡು ಬಂದಿತು.