ಕೇರಳಾಪುರದಲ್ಲಿ ಮಣ್ಣಿನ ಗಣಪನ ಮೌನ ಕ್ರಾಂತಿ
ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಪ್ಯಾರೀಸ್ ಪ್ಲ್ಯಾಸ್ಟರ್ ಗಣಪನ ಹಾವಳಿಯಿಂದಾಗಿ ನಗರ, ಪಟ್ಟಣಗಳಲ್ಲಿನ ಕೆರೆ -ಕಟ್ಟೆಗಳು ಗಬ್ಬೆದ್ದು ಹಾಳಾಗುವ ದೃಶ್ಯ ಸಾಮಾನ್ಯ. ಇದಕ್ಕಾಗಿ ಮಣ್ಣಿನ ಗಣಪನನ್ನು ಬಳಸಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನ ಜಾಗೃತಿ ಮೂಡುತ್ತಿರುವುದು ಅಷ್ಟಕ್ಕಷ್ಟೆ. ಆದರೆ ಇಲ್ಲಿನ ಕೇರಳಾಪುರದಲ್ಲಿ ಕಲಾವಿದರೊಬ್ಬರು ವರ್ಷಗಳಿಂದ ಮಣ್ಣಿನ ಗಣಪನ ಮೂರ್ತಿಗಳನ್ನು ಸೃಷ್ಟಿಸಿ ಮೌನ ಕ್ರಾಂತಿ ಮಾಡುತ್ತಿದ್ದಾರೆ.
ಕೊಣನೂರು: ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಪ್ಯಾರೀಸ್ ಪ್ಲ್ಯಾಸ್ಟರ್ ಗಣಪನ ಹಾವಳಿಯಿಂದಾಗಿ ನಗರ, ಪಟ್ಟಣಗಳಲ್ಲಿನ ಕೆರೆ -ಕಟ್ಟೆಗಳು ಗಬ್ಬೆದ್ದು ಹಾಳಾಗುವ ದೃಶ್ಯ ಸಾಮಾನ್ಯ. ಇದಕ್ಕಾಗಿ ಮಣ್ಣಿನ ಗಣಪನನ್ನು ಬಳಸಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನ ಜಾಗೃತಿ ಮೂಡುತ್ತಿರುವುದು ಅಷ್ಟಕ್ಕಷ್ಟೆ. ಆದರೆ ಇಲ್ಲಿನ ಕೇರಳಾಪುರದಲ್ಲಿ ಕಲಾವಿದರೊಬ್ಬರು ವರ್ಷಗಳಿಂದ ಮಣ್ಣಿನ ಗಣಪನ ಮೂರ್ತಿಗಳನ್ನು ಸೃಷ್ಟಿಸಿ ಮೌನ ಕ್ರಾಂತಿ ಮಾಡುತ್ತಿದ್ದಾರೆ.
ಈ ಕಲಾವಿದನ ಹೆಸರು ಕೆ ಎಂ ವಿಶ್ವನಾಥ್. ವಿನಾಯಕನ ಮೂರ್ತಿ ತಯಾರಿಸುವುದೇ ಇವರ ಕಸುಬು. ತಂದೆ ಮೊಗಣ್ಣ ಶೆಟ್ಟಿ ಅವರೂ ಇದೇ ವೃತ್ತಿಯಲ್ಲಿದ್ದರು. ಅಪ್ಪನಿಂದ ಸ್ಫೂರ್ತಿ ಪಡೆದ ವಿಶ್ವನಾಥ್ ತಾವೂ ಕೂಡ ಹೆಸರುವಾಸಿ ಶಿಲ್ಪಿಯಾಗಬೇಕೆಂದು ಹಗಲಿರುಳು ಮಣ್ಣಿನ ಗಣಪನ ತಯಾರಿಕೆಯಲ್ಲೇ ಮುಳುಗಿದ್ದಾರೆ.
ಒಂದರಿಂದ ಹನ್ನೊಂದು ಅಡಿ ಗಣಪನ ಮೂರ್ತಿಗಳು ಇಲ್ಲಿ ಜೇಡಿ ಮಣ್ಣಿನಿಂದ ತಯಾರಾಗುತ್ತವೆ. ಈ ವರ್ಷ ನಂದಿ, ಹಂಸ, ಮಯೂರ, ದರ್ಬಾರ್ ಗಣಪತಿಯಲ್ಲದೇ ವಿವಿಧ ಭಂಗಿಯ ಗಣಪತಿ ಮೂರ್ತಿ ತಯಾರಿಸಿ, 50 ರೂನಿಂದ 50 ಸಾವಿರದವರೆವಿಗೆ ಮಾರಾಟ ಮಾಡುತ್ತಿದ್ದಾರೆ.
ಇವರ ಕಲಾಕುಂಚದಲ್ಲಿ ಅರಳಿದ ಗಣಪತಿ ಮೂರ್ತಿಗಳು ಅರಕಲಗೂಡು, ಕೆಆರ್ ನಗರ, ಪಿರಿಯಪಟ್ಟಣ ಮುಂತಾದ ತಾಲೂಕಿನ ಹಳ್ಳಿಗಳಲ್ಲಿ ಮಾರಾಟವಾಗುತ್ತಿವೆ.
ನಾಲ್ಕು ತಿಂಗಳು ಮುಂಚಿತವಾಗಿ ತಯಾರಿ
ಗಣಪತಿ ಮೂರ್ತಿಗಳನ್ನು ತಯಾರಿಸಲು ಶುದ್ಧವಾದ ಜೇಡಿಮಣ್ಣು ಹಾಗೂ ಹಲವು ಸಾಮಗ್ರಿಗಳನ್ನು 3-4 ತಿಂಗಳ ಮುಂಚೆಯೇ ವಿಶ್ವನಾಥ್ ಅವರು ಸಂಗ್ರಹಿಸುತ್ತಾರೆ. ಆರ್ಡರ್ ನೀಡುವವರು ಇಚ್ಛಿಸುವ ಭಂಗಿಯ ಗಣಪನ ಮೂರ್ತಿಗಳನ್ನು ಇವರು ತಯಾರು ಮಾಡಿ ಕೊಡುತ್ತಾರೆ.
ನಾವು ಶಾಸ್ತ್ರೋಕ್ತವಾಗಿ ಗಣಪನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಈ ದಿನಗಳಲ್ಲಿ ಬಣ್ಣದ ಬೆಲೆ ದುಬಾರಿಯಾಗಿದೆ. ಮನೆ ಮಂದಿಯವರೆಲ್ಲ ಬಣ್ಣ ಹಚ್ಚುವ ಕೆಲಸಕ್ಕೆ ಸಹಾಯ ಮಾಡುತ್ತಾರೆ.
- ವಿಶ್ವನಾಥ್, ಶಿಲ್ಪಿ