ಆಲೂರು: ಆಲೂರು-ಬಿಕ್ಕೋಡು ರಸ್ತೆಯ ತಾಳೂರು ಕೂಡಿಗೆಯಲ್ಲಿ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.
ಪಾಳ್ಯ ಹೋಬಳಿ ಬಿಳಗವಳ್ಳಿ ಗ್ರಾಮದ ಪ್ರಶಾಂತ್ (22), ಅವಿನಾಶ್ (24) ಮೃತರು. ಹೌಸಿಂಗ್ ಬೋರ್ಡ್ ನಿವಾಸಿ ಪವನ್ ಎಂಬಾತನಿಗೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಹಾಸನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೇ ವೇಳೆ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಡಿವೈಎಸ್ಪಿ ಬುಳ್ಳಕ್ಕನವರ್, ವಿಶ್ವನಾಥ್, ಸಾರಿಗೆ ಇಲಾಖೆ ಅಧಿಕಾರಿ ಹನುಮಂತಪ್ಪ, ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು. ಮೃತರ ವಾರಸುದಾರರಿಗೆ ಸಾರಿಗೆ ಇಲಾಖೆ ವತಿಯಿಂದ ತಲಾ 15 ಸಾವಿರ ರೂ. ನೀಡಲಾಗುವುದು ಎಂದು ಎಟಿಎಸ್ ಹನುಮಂತಪ್ಪ ತಿಳಿಸಿದ್ದಾರೆ. ಮೃತ ಪ್ರಶಾಂತ್ ಪದವೀಧರನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಇವರಿಗೆ ತಾಯಿ, ಒಬ್ಬ ಸೋದರನಿದ್ದು ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದಾರೆ. ಮೃತ ಅವಿನಾಶ್ ಪೋಷಕರಿಗೆ ಒಬ್ಬನೇ ಮಗನಾಗಿದ್ದು ಪದವೀಧರನಾಗಿ ಪಟ್ಟಣದ ಸೆಸ್ಕ್ ಇಲಾಖೆಯಲ್ಲಿ ತಾತ್ಕಾಲಿಕ ಲೈನ್ಮೆನ್ ಕಾರ್ಯ ನಿರ್ವಹಿಸುತ್ತಿದ್ದನು. ತಂದೆ ಕುಮಾರ್ ಪಟ್ಟಣದ ಪಿಎಲ್ಡಿ. ಬ್ಯಾಂಕ್ನಲ್ಲಿ 4 ನೇ ದರ್ಜೆ ಕೆಲಸಗಾರರಾಗಿದ್ದಾರೆ.
ಪ್ರತಿಭಟನೆ: ಮೃತರ ಕುಟುಂಬಕ್ಕೆ ತಲಾ 15 ಸಾವಿರ ರೂ.ಪರಿಹಾರ ನೀಡುವುದಾಗಿ ಕೆಎಸ್ ಆರ್ಟಿಸಿ ಅಧಿಕಾರಿಗಳು ತಿಳಿಸಿದರೆ ಪೋಷಕರು, ಸಂಬಂಧಿಕರು ತಲಾ ಎರಡು ಲಕ್ಷ ರೂ. ಪರಿಹಾರವನ್ನು ಈ ಕೂಡಲೇ ನೀಡಬೇಕು ಎಂದು ಸಂಜೆ 4ಕ್ಕೆ ಆಲೂರು ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟಿಸಿದರು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಯತ್ನಿಸಲು ಮುಂದಾದರು.
ಹೆಲ್ಮೆಟ್ ಇಲ್ಲ: ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು. ಹೆಲ್ಮೆಟ್ ಕಡ್ಡಾಯ ಗ್ರಾಮೀಣ ಪ್ರದೇಶದಲ್ಲಿ ಪೂರ್ಣವಾಗಿ ಅನುಷ್ಠಾನಗೊಳ್ಳದ ಕಾರಣ ಬಹುತೇಕ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುವುದನ್ನು ಬಿಟ್ಟಿದ್ದಾರೆ. ಒಂದು ಬೈಕಿನಲ್ಲಿ ಮೂರರಿಂದ ಐದು ಜನ ಯಾವುದೆ ಭೀತಿ ಇಲ್ಲದೆ ಪ್ರಯಾಣಿಸುತ್ತಾರೆ. ಅನೇಕ ಬೈಕ್ ಸವಾರರು ಚಾಲನ ಪರವಾನಗಿ ಹೊಂದಿರುವುದಿಲ್ಲ. ಇತ್ತೀಚೆಗೆ ಕಾನೂನುಗಳ ಸಡಿಲಿಕೆಯಿಂದ ಪ್ರಾಣ ಹಾನಿಯಾಗುತ್ತಿರುವುದಲ್ಲದೆ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂತು.
ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹ: ಅಪಘಾತವಾದ ಸ್ಥಳ ತಿರುವಿನಿಂದ ಕೂಡಿದೆ. ಮೂರು ರಸ್ತೆಗಳ ಸಂಗಮವಾಗಿದೆ. ರಸ್ತೆ ಬದಿಯಲ್ಲಿ ಮರಗಳು ಬೆಳೆದಿರುವುದರಿಂದ ಎದುರಿನಲ್ಲಿ ಬರುತ್ತಿರುವ ವಾಹನಗಳು ಚಾಲಕರಿಗೆ ಕಾಣುವುದಿಲ್ಲ. ಈ ಕಾರಣದಿಂದ ಈ ಸ್ಥಳದಲ್ಲಿ ಈಗಾಗಲೆ ಹಲವು ಅಪಘಾತಗಳಾಗಿವೆ. ತಿರುವು ರಸ್ತೆ ಎರಡೂ ದಿಕ್ಕಿನಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಬಿಳಿ ಬಣ್ಣದ ಪಟ್ಟಿ ಹಾಕಿ ಅಪಘಾತಗಳಿಗೆ ಕಡಿವಾಣ ಹಾಕಬೇಕು. ರಸ್ತೆ ಬದಿಯಲ್ಲಿರುವ ಜೆಎಂಎಫ್ ನ್ಯಾಯಾಲಯದ ಬಳಿ ರಸ್ತೆಗೆ ಹಾಕಿರುವ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿರುವ ಕಾರಣ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಕೂಡಲೆ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುಗಮ ಸಂಚಾರಕ್ಕೆ ಕ್ರಮ: ಬಿಕ್ಕೋಡು ರಸ್ತೆಯ ತಾಳೂರು ಕೂಡಿಗೆ ತಿರುವು ರಸ್ತೆ ಅಪಘಾತ ಸ್ಥಳವಾಗಿದೆ. ತಿರುವಿನಲ್ಲಿ ವಾಹನಗಳ ಚಾಲಕರಿಗೆ ಎದುರಿನಿಂದ ಬರುವ ವಾಹನಗಳು ಕಾಣುವಂತೆ ಕೂಡಲೆ ರಸ್ತೆ ಬದಿಯಲ್ಲಿರುವ ಮರಗಳ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರೇಂಜ್ ಫಾರೆಸ್ಟ್ ಆಫೀಸರ್ ಹೇಮಂತಕುಮಾರ್ ತಿಳಿಸಿದ್ದಾರೆ.