ಹಾಸನ: ಬರಗಾಲ ಪರಿಹಾರಕ್ಕಾಗಿ ಹಾಗೂ ರೈತರ ಎಲ್ಲ ರೀತಿಯ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಾನಾ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಗುಳೆ: ರಾಜ್ಯದಲ್ಲಿ ಸತತ 5 ವರ್ಷಗಳಿಂದಲೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಈ ವರ್ಷ ಉಂಟಾದ ಬರಗಾಲವನ್ನು ಕಳೆದ 30 ವರ್ಷಗಳಲ್ಲಿ ಕಾಣದ ಬರಗಾಲವೆಂದು ಬಣ್ಣಿಸಲಾಗಿದೆ. ಈ ಬಾರಿ ಮಲೆನಾಡಿನಲ್ಲಿ ಉಂಟಾದ ಮಳೆಯ ಕೊರತೆಯಿಂದಾಗಿ ಅಣೆಕಟ್ಟುಗಳು ಭರ್ತಿಯಾಗದೆ, ಕೆರೆಗಳು ತುಂಬದೆ, ನೀರಾವರಿ ಪ್ರದೇಶದ ಜನರು ಸಂಕಷ್ಟ ಪಡುವಂತಾಗಿದೆ. ಕೊಳವೆ ಭಾವಿಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಅದೇ ರೀತಿ, ಈ ನದಿ ನೀರನ್ನು ಅವಲಂಬಿಸಿದ್ದ ಪಟ್ಟಣ, ನಗರ ಪ್ರದೇಶದ ಜನ-ಜಾನುವಾರುಗಳು ಗಂಭೀರವಾದ ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಬಹುತೇಕ ಕೂಲಿಕಾರರು ಗುಳೆ ಹೊರಟಿದ್ದಾರೆ. ಜಿಲ್ಲೆಯಾದ್ಯಂತ ಬಿತ್ತಿದ ಬೀಜ ಹಲವೆಡೆ ಮೊಳೆಯಲಿಲ್ಲ. ಇನ್ನೂ ಹಲವೆಡೆ ಮೊಳೆತು ಬೆಳೆದರೆ ನಂತರ ಮಳೆಯ ಕೊರತೆಯಿಂದ ಸುಟ್ಟು ಹೋಗಿದೆ. ನೀರಾವರಿ ಪ್ರದೇಶದಲ್ಲಿ ನೀರಿನ ಅಭಾವದಿಂದಾಗಿ ಅದು ಇಳುವರಿ ಕೊರತೆ ಅನುಭವಿಸಿದೆ. ರೈತರು ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಬೆಳೆಹಾನಿ ಅನುಭವಿಸಿ, ತ್ರೀವವಾದ ಸಾಲಬಾಧೆಗೆ ತುತ್ತಾಗಿದ್ದಾರೆ. ರೈತ ಕುಟುಂಬಗಳ ಆತ್ಮಹತ್ಯೆಗಳು ಮುಂದುವರಿದಿವೆ. ಕೃಷಿ ಕೂಲಿಕಾರರು, ಕಸುಬುದಾರರೂ ಉದ್ಯೋಗ ನಷ್ಟಕ್ಕೊಳಗಾಗಿದ್ದಾರೆ ಎಂದು ದೂರಿದರು.
ಬೆಳೆ ವಿಮೆ ಕೊಡಿ: ರೈತರ/ಕೂಲಿಕಾರರ ಮತ್ತು ಕಸುಬುದಾರರ ಎಲ್ಲಾ ರೀತಿಯ ಸಹಕಾರ ಸಂಘ/ಬ್ಯಾಂಕುಗಳ ಮತ್ತು ಖಾಸಗಿಯಾದ ಎಲ್ಲಾ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು. ಎಲ್ಲಾ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲವನ್ನು, ಅದೇ ರೀತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ಮೂಲಕ ನೀಡಲಾದ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ತಕ್ಷಣವೇ ಅಗತ್ಯ ಬೆಳೆ ವಿಮೆ ನೀಡಲು ಕ್ರಮವಹಿಸಬೇಕು. ಬೆಳೆ ಪರಿಹಾರವಾಗಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರವನ್ನು ವಿತರಿಸಬೇಕು. ಕೃಷಿಕೂಲಿಕಾರರಿಗೆ ಉದ್ಯೋಗ ಪರಿಹಾರವಾಗಿ ತಲಾ ಕುಟುಂಬಕ್ಕೆ ಕನಿಷ್ಟ 25,000 ರೂ. ನೀಡಬೇಕು. ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ವಿಸ್ತರಿಸಬೇಕು. ಪಟ್ಟಣ/ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೂಲಿಯನ್ನು 600 ರೂ.ಗೆ ಹೆಚ್ಚಿಸಬೇಕು. ಎಲ್ಲಾ ಬಡವರಿಗೆ ಉಚಿತವಾಗಿ ಅಗತ್ಯವಾದ ಎಲ್ಲಾ ಪಡಿತರವಿರುವ ರೇಷನ್ ಸರಬರಾಜು ಮಾಡಬೇಕು. ನಗದು ವರ್ಗಾವಣೆ ಅಥವಾ ಕೂಪನ್ ಪದ್ಧತಿ ಕೈಬಿಡಬೇಕು. ಆಧಾರ್ ಕಾರ್ಡ್ ಕಡ್ಡಾಯವಾಗಿ ಪಡೆಯುವ ಪದ್ಧತಿ ಕೈಬಿಡಬೇಕು. ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ರಾತ್ರಿ ಊಟಕ್ಕೆ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೂ ವರ್ಷಕ್ಕೊಮ್ಮೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು. ಸಾರ್ವಜನಿಕ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ವರ್ಷದ ಎಲ್ಲಾ ಶಾಲಾ, ಕಾಲೇಜು ಹಾಗೂ ಉನ್ನತ ಹಂತದ ಶಿಕ್ಷಣ ಶುಲ್ಕವನ್ನು ಮನ್ನಾ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ಕುಮಾರ್, ಜಿಲ್ಲಾ ಕಾರ್ಯದರ್ಶಿ ವಸಂತ್ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಲ್.ರಾಘವೇಂದ್ರ, ಡಿಎಚ್ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಸಿಐಟಿಯು ಮುಖಂಡ ಅರವಿಂದ್ ಹಾಗೂ ಇತರರು ಹಾಜರಿದ್ದರು.