ಆ್ಯಪ್ನಗರ

ಅಮರಗಿರಿ ರಂಗನಾಥಸ್ವಾಮಿ ಬೆಟ್ಟ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿಯ ನರೇಹಳ್ಳಿ ಗ್ರಾಮದ ಬಳಿ ಇತಿಹಾಸ ಪ್ರಸಿದ್ಧ ಅಮರಗಿರಿ ರಂಗನಾಥಸ್ವಾಮಿಯ ಬೆಟ್ಟವಿದೆ.

ವಿಕ ಸುದ್ದಿಲೋಕ 25 Mar 2017, 9:00 am

ಎಲ್ಲಿದೆ? ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿಯ ನರೇಹಳ್ಳಿ ಗ್ರಾಮದ ಬಳಿ ಇತಿಹಾಸ ಪ್ರಸಿದ್ಧ ಅಮರಗಿರಿ ರಂಗನಾಥಸ್ವಾಮಿಯ ಬೆಟ್ಟವಿದೆ.

ಎಷ್ಟು ದೂರ? ಚನ್ನರಾಯಪಟ್ಟಣದಿಂದ ನುಗ್ಗೇಹಳ್ಳಿಗೆ 18 ಕಿ.ಮೀ. ಅಲ್ಲಿಂದ ತಿಪಟೂರು ರಸ್ತೆಯಲ್ಲಿ 8 ಕಿ.ಮೀ. ಸಾಗಿದರೆ ನರೇನಹಳ್ಳಿ ಗೇಟ್‌ ಸಿಗುತ್ತದೆ. ಗೇಟ್‌ನಿಂದ ಎಡಕ್ಕೆ 4 ಕಿ.ಮೀ. ಕ್ರಮಿಸಿದರೆ ಬೆಟ್ಟದ ತಪ್ಪಲಿಗೆ ಹೋಗಬಹುದು. ಬೆಟ್ಟ ಹತ್ತಲು ದೊಡ್ಡದಾದ ಸುಮಾರು 50 ಮೆಟ್ಟಿಲುಗಳಿವೆ. ಇದೀಗ ಪ್ರವಾಸೋದ್ಯಮ ಇಲಾಖೆಯಿಂದ ದೇವಾಲಯದ ಹಿಂಬದಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದು, ವಾಹನಗಳು ನೇರವಾಗಿ ದೇವಾಲಯದ ಬಳಿಗೆ ತೆರಳಬಹುದು. ಬೆಳಗ್ಗೆ ಮತ್ತು ಸಂಜೆ ಚನ್ನರಾಯಪಟ್ಟಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಇದ್ದು, ನರೇಹಳ್ಳಿ ಗೇಟ್‌ನಲ್ಲಿ ಇಳಿದು ನಡೆದು ಸಾಗಬೇಕು ಅಥವಾ ನುಗ್ಗೇಹಳ್ಳಿಯಿಂದ ಆಟೋಗಳು ಸಿಗುತ್ತವೆ. ಖಾಸಗಿ ವಾಹನಗಳಲ್ಲಿ ತೆರಳುವುದು ಉತ್ತಮ.

ಇತಿಹಾಸ, ಆಕರ್ಷಣೆ: ಇದು ಹಸಿರು ವನಸಿರಿಯಿರುವ ಬೆಟ್ಟ. ಧಾರ್ಮಿಕ ತಾಣವೂ ಆಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ನೆಲಮಟ್ಟದಿಂದ ಸುಮಾರು 100 ಅಡಿ ಎತ್ತರದಲ್ಲಿ ಅಮರಗಿರಿ ರಂಗನಾಥಸ್ವಾಮಿ ದೇಗುಲವಿದೆ. ರಾಮಾನುಜಾಚಾರ‍್ಯರಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇವಾಲಯ ಇತ್ತೀಚೆಗಷ್ಟೇ 2 ಕೋಟಿ ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಗೊಂಡಿದೆ. ಫಣಿ ಆಲದ ಮರವೆಂದೇ ಹೆಸರಾಗಿರುವ ಬೃಹತ್‌ ಆಲದ ಮರ ದೇವಾಲಯದ ಹಿಂದೆ ನೆರಳಿನಂತಿದೆ. ರಮಣೀಯ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಬೆಟ್ಟಹತ್ತಿ ನೋಡಿದರೆ ಸುತ್ತಲೂ ಅರಣ್ಯ ಸಂಪತ್ತಿನ ಹಸಿರು ಕಣ್ಣಿಗೆ ತಂಪು ನೀಡುತ್ತದೆ. ಅರಣ್ಯ ಇಲಾಖೆ ನಿರ್ಮಿತ ರಾಶಿ ವನವೂ ಇಲ್ಲಿದೆ. ಒಂದು ದಿನದ ಪಿಕ್‌ನಿಕ್‌ಗೆ ಉತ್ತಮ ತಾಣವಿದು.

ದೊಣ್ಣೆಯಪ್ಪನ ವಿಶೇಷ: ರಂಗನಾಥಸ್ವಾಮಿಯ ಜೊತೆಗೆ ಆಲದ ಮರದ ಬುಡದಲ್ಲಿರುವ ದೊಣ್ಣೆಯಪ್ಪನನ್ನು ಮಾಂಸಾಹಾರಿಗಳು ಪೂಜಿಸುವುದು ಇಲ್ಲಿನ ವಿಶೇಷ. ಹೊರಗಿನ ದೊಣ್ಣೆಯಪ್ಪನ ಹೆಸರಿನಲ್ಲಿ ಮಾಂಸಾಹಾರದ ನೈವೇದ್ಯವಾದರೆ, ಒಳಗಿರುವ ರಂಗನಾಥಸ್ವಾಮಿಗೆ ಅಪ್ಪಟ ಸಸ್ಯಾಹಾರದ ನೈವೇದ್ಯ ನೆರವೇರುತ್ತದೆ. ಇಡೀ ದೇವಾಲಯದ ಆವರಣವೆಲ್ಲಾ ಕಲ್ಲುಗುಡ್ಡಗಳಿಂದ ಆವೃತ್ತವಾಗಿದ್ದರೂ ಯಾರೊಬ್ಬರೂ ಇಲ್ಲಿಂದ ಒಂದು ಕಲ್ಲನ್ನೂ ತೆಗೆದುಕೊಂಡುಹೋಗುವಂತಿಲ್ಲ. ಪ್ರತಿ ವರ್ಷ ರಾಮನವಮಿಯ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ 12 ದಿನ ನಡೆಯುವ ದೀಪೋತ್ಸವವನ್ನು ಕಣ್ತುಂಬಿಕೊಳ್ಳಬಹುದು.

ಊಟ, ವಸತಿ: ಚನ್ನರಾಯಪಟ್ಟಣದಲ್ಲಿ ಊಟ, ವಸತಿಗೆ ಯೋಗ್ಯ ಹೊಟೇಲ್‌ಗಳಿದ್ದು, ನುಗ್ಗೇಹಳ್ಳಿಯಲ್ಲೂ ಊಟ, ತಿಂಡಿ ದೊರೆಯುತ್ತದೆ.

------------

Vijaya Karnataka Web
ಅಮರಗಿರಿ ರಂಗನಾಥಸ್ವಾಮಿ ಬೆಟ್ಟ


ಸುತ್ತಮುತ್ತಲ ಆಕರ್ಷಣೆ

ನುಗ್ಗೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಯೋಗಾನರಸಿಂಹ ಹಾಗೂ ಈಶ್ವರ ದೇವಾಲಯಗಳಿವೆ. ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪನವರ ಹುಟ್ಟೂರು ಸಂತೆಶಿವರ ಕೂಡ 4 ಕಿ.ಮೀ. ಸಮೀಪದಲ್ಲಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಬಾಗೂರು ನವಿಲೆ ಸುರಂಗ ಮಾರ್ಗ ನುಗ್ಗೇಹಳ್ಳಿಯಿಂದ 10 ಕಿ.ಮೀ. ದೂರದಲ್ಲಿದೆ.

ಮಾಹಿತಿ: ಎ.ಎಲ್‌.ನಾಗೇಶ್‌ ಚನ್ನರಾಯಪಟ್ಟಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ