ಕಾರು ಪಲ್ಟಿ: ಭದ್ರಾವತಿಯ ಮಹಿಳೆ ಸಾವು
ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದಾರೆ.
ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಂಗೋಟೆ ಗ್ರಾಮದ ಸುಜಾತ (35) ಮೃತರು. ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದ ನಿವಾಸಿಯಾದ ಹನುಮಂತಪ್ಪ ಅವರು ತಮ್ಮ ಇಂಡಿಕಾ ಕಾರಿನಲ್ಲಿ ಪತ್ನಿ ಸುಜಾತ, ಮಕ್ಕಳಾದ ಲಾವಣ್ಯ, ಸೌಜನ್ಯ, ಕುಶಾಲ್ ಅವರೊಂದಿಗೆ ಮೈಸೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಅರಸೀಕೆರೆ -ಚನ್ನರಾಯಪಟ್ಟಣ ರಸ್ತೆ, ದಂಡಿಗನಹಳ್ಳಿ ಹೋಬಳಿಯ ಊಪಿನಹಳ್ಳಿ ಗೇಟ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಸುಜಾತ ಅವರು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷ ದರ್ಶಿ ಲಾವಣ್ಯ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.