ಹೊಳೆನರಸೀಪುರ: ಜೆಡಿಎಸ್ ಅಭ್ಯರ್ಥಿ ಶಾಸಕ ಎಚ್.ಡಿ.ರೇವಣ್ಣ ಶುಕ್ರವಾರ 3 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ನಮೂನೆ 9ಎ ವಿವರ ಒದಗಿಸಿಲ್ಲದ ಕಾರಣ ಶನಿವಾರವೂ ಮತ್ತೊಂದು ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.
ಚುನಾವಣಾ ಆಯೋಗದಿಂದ ನೀಡಲಾಗಿದ್ದ ಇಂಗ್ಲಿಷ್ ಭಾಷೆಯಲ್ಲಿ ದ್ದ ಅರ್ಜಿ ನಮೂನೆಯಲ್ಲಿ ಫಾರಂ ನಂ 9ಎ ಕಾಲಂ ಬಿಟ್ಟು ಹೋಗಿತ್ತು. ಆದರೆ ಕನ್ನಡದಲ್ಲಿ ಇದ್ದ ಅರ್ಜಿ ಫಾರಂನಲ್ಲಿ ಅಭ್ಯರ್ಥಿಯ ಇತರೆ ಮೂಲಗಳ ಆದಾಯ ವಿವರ ಇದೆ. ರೇವಣ್ಣ ಇಂಗ್ಲಿಷ್ನಲ್ಲಿ ಇದ್ದ ಫಾರಂ ಪಡೆದಿದ್ದರು. ಇದರಿಂದ ಆಯೋಗದಿಂದ ನೀಡಲಾಗಿದ್ದ ಇಂಗ್ಲಿಷ್ ನಮೂನೆಯಲ್ಲಿ 9ಎ ಕಾಲಂ ಇರಲಿಲ್ಲ. ಆದ್ದರಿಂದ ಶುಕ್ರವಾರ ಸಲ್ಲಿಸಿದ್ದ ಉಮೇದುವಾರಿಕೆ ಅರ್ಜಿಯಲ್ಲಿ ವಿವರ ನೀಡಲಾಗಿರಲಿಲ್ಲ. ಈ ಕಾರಣಕ್ಕಾಗಿ ಶನಿವಾರ ಮತ್ತೊಮ್ಮೆ ಬಿಟ್ಟು ಹೋಗಿದ್ದ ಅಡಕದೊಂದಿಗೆ ಮತ್ತೊಂದು ನಾಮಪತ್ರ ಸಲ್ಲಿಸಿದರು ಎಂದು ಅವರ ಪರ ವಕೀಲ ಎ.ಶ್ರೀಧರ್ ತಿಳಿಸಿದ್ದಾರೆ.
ಅಭ್ಯರ್ಥಿಯಾಗ ಬಯಸಿ ಅರ್ಜಿ ಸಲ್ಲಿಸುವರು ತಮ್ಮ ಒಟ್ಟು ಆದಾಯದ ಪ್ರಮಾಣಿಕೆಯನ್ನು ನಮೂನೆ 9ಎ ನಲ್ಲಿ ಸಲ್ಲಿಸಬೇಕೆಂದು ಶನಿವಾರ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದ ಮೇರೆಗೆ ಮತ್ತೊಂದು ಅರ್ಜಿ ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆಗೂ ಮುನ್ನ ಮತ್ತೊಮ್ಮೆ ಹರದನಹಳ್ಳಿ ಶಿವನದೇವಾಲಯ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಹಾಗೂ ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಪತ್ನಿಯೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ಶನಿವಾರ ತಮ್ಮ ಉಮೇದುವಾರಿಕೆ ಅರ್ಜಿಯನ್ನು ಚುನಾವಣಾಧಿಕಾರಿ ತಬಸ್ಸುಮ್ ಜಹೆರಾ ಅವರವಲ್ಲಿ ಸಲ್ಲಿಸಿದರು.
'ಚುನಾವಣಾ ಆಯೋಗ ನೀಡಲಾಗುವ ಇಂಗ್ಲೀಷ್ ಅರ್ಜಿ ನಮೂನೆಯಲ್ಲಿ 9/ಎ ಕಾಲಂ ಬಿಟ್ಟು ಹೋಗಿತ್ತು. ಇದರಿಂದ ನಮಗೆ ಮೇಲಧಿಕಾರಿಗಳಿಂದ ವಿವರ ಪಡೆಯುವಂತೆ ತಿಳಿಸಿದ್ದರಿಂದ ಮಾಹಿತಿ ನೀಡಲಾಗಿತ್ತು.'
- ಸಿ.ಕೆ.ರಾಜು.ತಹಸೀಲ್ದಾರ್