ಆ್ಯಪ್ನಗರ

ಅಗ್ರಿಗೋಲ್ಡ್‌ ವಿರುದ್ಧ ಕಾನೂನು, ಸಂಘಟನಾತ್ಮಕ ಹೋರಾಟ

ಅಗ್ರಿಗೋಲ್ಡ್‌ ಕಂಪನಿಯಿಂದ ಆಗಿರುವ ಅನ್ಯಾಯಕ್ಕೆ ಕಾನೂನು ಹೋರಾಟದ ಜತೆಗೆ ಸಂಘಟನಾತ್ಮಕ ಹೋರಾಟವನ್ನು ಮಾಡುವ ಅವಶ್ಯಕತೆ ಇದೆ ಎಂದು ಅಗ್ರಿ ಗೋಲ್ಡ್‌ ಗ್ರಾಹಕರು ಮತ್ತು ಏಜೆಂಟ್ಸ್‌ ವೆಲ್ಫೇರ್‌ ಅಸೋಸಿಯೇಶನ್‌ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಡೋಂಗ್ರೆ ಹೇಳಿದರು.

Vijaya Karnataka 19 Jun 2019, 5:00 am
ಹಾಸನ : ಅಗ್ರಿಗೋಲ್ಡ್‌ ಕಂಪನಿಯಿಂದ ಆಗಿರುವ ಅನ್ಯಾಯಕ್ಕೆ ಕಾನೂನು ಹೋರಾಟದ ಜತೆಗೆ ಸಂಘಟನಾತ್ಮಕ ಹೋರಾಟವನ್ನು ಮಾಡುವ ಅವಶ್ಯಕತೆ ಇದೆ ಎಂದು ಅಗ್ರಿ ಗೋಲ್ಡ್‌ ಗ್ರಾಹಕರು ಮತ್ತು ಏಜೆಂಟ್ಸ್‌ ವೆಲ್ಫೇರ್‌ ಅಸೋಸಿಯೇಶನ್‌ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಡೋಂಗ್ರೆ ಹೇಳಿದರು.
Vijaya Karnataka Web HSN-HSN18M2


ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ ಅಗ್ರಿ ಗೋಲ್ಡ್‌ ಗ್ರಾಹಕರು ಮತ್ತು ಏಜೆಂಟ್ಸ್‌ ವೆಲ್ಫೇರ್‌ ಅಸೋಸಿಯೇಶನ್‌ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ''ಅಗ್ರಿಗೋಲ್ಡ್‌ ಸಂಸ್ಥೆಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಹಾಗೂ 8 ರಾಜ್ಯಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಮುಂದಾಗುವುದಾಗಿ ಜನಸಾಮಾನ್ಯರನ್ನು ನಂಬಿಸಿ ಮೋಸ ಮಾಡಿದೆ,''ಎಂದು ಆರೋಪಿಸಿದರು.

''ಎಂಟು ರಾಜ್ಯಗಳಿಂದ ಸೇರಿ ಸುಮಾರು 32 ಲಕ್ಷ ಖಾತೆಗಳನ್ನು ಹೊಂದಿದ್ದು, 6,385 ಕೋಟಿ ರೂ. ಪಾವತಿಸಬೇಕಿದೆ. ಗ್ರಾಹಕರಿಗೆ ನೀಡಿದ ಸುಮಾರು 700 ಕೋಟಿ ರೂ. ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿದ್ದು, 2015ರಲ್ಲಿ ದಿಢೀರೆಂದು ವಹಿವಾಟು ಸ್ಥಗಿತಗೊಳಿಸಿದೆ. ಆಂಧ್ರ ಪ್ರದೇಶ ಮೂಲದ ಅಗ್ರಿಗೋಲ್ಡ್‌ ಸಂಸ್ಥೆಯು ವಿಜಯವಾಡವನ್ನು ತನ್ನ ಕೇಂದ್ರ ಕಚೇರಿಯಾಗಿ ಮಾಡಿಕೊಂಡಿದ್ದು, ಗ್ರಾಹಕರಿಂದ ಠೇವಣಿಗಳನ್ನು ಸಂಗ್ರಹಿಸಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದೆ. ಅತಿ ಹೆಚ್ಚು ಆಸ್ತಿಗಳನ್ನು ಆಂಧ್ರಪ್ರದೇಶದಲ್ಲಿ ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 8.5 ಲಕ್ಷ ದಷ್ಟು ಗ್ರಾಹಕರಿಂದ ಅಂದಾಜು 1700 ಕೋಟಿ ರೂ. ಠೇವಣಿಯಾಗಿ ಸಂಗ್ರಹಿಸಿ ವಂಚಿಸಿದೆ,''ಎಂದು ದೂರಿದರು.

''ಕಂಪನಿಯ ವಂಚನೆ ಬಗ್ಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ಉಚ್ಚ ನ್ಯಾಯಾಲಯದಲ್ಲಿ ತೆಲಂಗಾಣ ರಾಜ್ಯಕ್ಕೆ ಸೇರಿದ ಅಗ್ರಿಗೋಲ್ಡ್‌ ಗ್ರಾಹಕರ ಮತ್ತು ಏಜೆಂಟರ ವೇದಿಕೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯವು ತೆಲಂಗಾಣ ರಾಜ್ಯದಲ್ಲಿರುವ ಕಂಪನಿಯ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಜಪ್ತಿಯಾದ ಆಸ್ತಿಗಳ ಬಗ್ಗೆ ನ್ಯಾಯಾಲಯವು ಯಾವುದೇ ಆದೇಶ ಮಾಡಿಲ್ಲ,''ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಜೂನ್‌ 23 ರಂದು ರಾಜ್ಯಮಟ್ಟದ ಸಭೆ ಜರುಗಲಿದೆ. ಜುಲೈ 8ರಂದು ಕಾನೂನು ಚಲೋ ನಡೆಯಲಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಅಗ್ರಿ ಗೋಲ್ಡ್‌ ಗ್ರಾಹಕರು ಮತ್ತು ಏಜೆಂಟ್ಸ್‌ ವೆಲ್ಫೇರ್‌ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ ಯೋಗೀಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಸುದರ್ಶನ್‌, ಜಿಲ್ಲಾ ಉಪಾಧ್ಯಕ್ಷ ಬಿ.ಎನ್‌.ಶಿವಪ್ಪ, ಜಿಲ್ಲಾ ಖಜಾಂಚಿ ಗಣೇಶ್‌ ಹಾಗೂ ರೈತ ಮುಖಂಡ ಕೊಟ್ರೇಶ್‌ ಶ್ರೀನಿವಾಸ್‌, ಡಿಎಸ್‌ಎಸ್‌ ಮುಖಂಡ ರಾಜಶೇಖರ್‌, ಕಸಾಪ ತಾಲೂಕು ಅಧ್ಯಕ್ಷ ಜಿ.ಒ. ಮಹಾಂತಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ