ಆ್ಯಪ್ನಗರ

ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಆಲೂರು: ಹಿರುವಾಟೆ ಗ್ರಾಮಕ್ಕೆ ನಿಯಮಿತವಾಗಿ ವಿದ್ಯುತ್‌ ಸರಬರಾಜು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Vijaya Karnataka 30 Mar 2019, 5:00 am
ಆಲೂರು: ಹಿರುವಾಟೆ ಗ್ರಾಮಕ್ಕೆ ನಿಯಮಿತವಾಗಿ ವಿದ್ಯುತ್‌ ಸರಬರಾಜು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Vijaya Karnataka Web aaluru electricity supply protest
ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ


ಆಲೂರು ಮತ್ತು ಬೇಲೂರು ತಾಲೂಕಿನ ಗಡಿ ಭಾಗವಾದ ಹಿರುವಾಟೆ ಗ್ರಾಮದಲ್ಲಿ ಕೆಲ ತಿಂಗಳಿನಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯವಾಗಿದ್ದು ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿ ದೀಪದ ಬೆಳಕಿನಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗ್ಗೆ ಸೆಸ್ಕ್‌ ಎಂಜಿನಿಯರ್‌ ಕಚೇರಿಗೆ ಆನೇಕ ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸೆಸ್ಕ್‌ ಎಂಜಿನಿಯರ್‌ಗಳು ಗ್ರಾಮದಲ್ಲಿ ಎದುರಾಗಿರುವ ವಿದ್ಯುತ್‌ ಸಮಸ್ಯೆ ಆಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕೆಸಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್‌ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿರುವ ಗ್ರಾಮಗಳು ಅರ್ಧ ಆಲೂರು ತಾಲೂಕಿಗೆ, ಉಳಿದ ಅರ್ಧ ಗ್ರಾಮಗಳು ಬೇಲೂರು ತಾಲೂಕಿಗೆ ಸೇರುತ್ತವೆ. ಎರಡೂ ತಾಲೂಕುಗಳ ಗಡಿ ಭಾಗವಾಗಿರುವುದರಿಂದ ಇಲ್ಲಿನ ಮೂಲ ಸಮಸ್ಯೆಗಳನ್ನು ನೀಗಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಭಾಗದಲ್ಲಿ ಸರಿಯಾಗಿ ವಿದ್ಯುತ್‌ ಸಂಪರ್ಕವಿಲ್ಲದೆ ತೀವ್ರ ಸಮಸ್ಯೆ ಎದುರಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದ್ದು ರಾತ್ರಿ ವೇಳೆಯಲ್ಲಿ ಓದಲು ತೊಂದರೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಳಡಿವೆ. ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಹೀಗೆ ಮುಂದುವರಿದರೆ ಜೀವನಾಧಾರವಾಗಿರುವ ಕೃಷಿ ಬೆಳೆಗಳನ್ನು ಕಳೆದುಕೊಂಡು ರೈತರು ಗುಳೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆಸ್ಕ್‌ ಅಧಿಕಾರಿಗಳು ನಿಯಮಾನುಸಾರ ಸಮರ್ಪಕವಾದ ವಿದ್ಯತ್‌ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗೋಪಾಲ ಕೃಷ್ಣಶೆಟ್ಟಿ ಮಾತನಾಡಿ, ಕೆಲವು ಸಂದರ್ಭದಲ್ಲಿ ನೀಡುವ ವಿದ್ಯುತ್‌ ಹೆಚ್ಚಿನ ವೊಲ್ಟೇಜ್‌ ಇದ್ದು ಮನೆಯಲ್ಲಿದ್ದ ವಿದ್ಯುತ್‌ ಬಳಕೆಯ ಉಪಕರಣಗಳು, ಪಂಪ್‌ಸೆಟ್‌ ಮೋಟಾರುಗಳು ಸುಟ್ಟುಹೋಗುತ್ತಿವೆ. ಈ ಭಾಗದಲ್ಲಿರುವ ಟ್ರಾನ್ಸ್‌ ಫಾರ್ಮರ್‌ಗಳು ಹಾಗೂ ವಿದ್ಯುತ್‌ ಕಂಬಗಳು ತುಂಬಾ ಹಳೆಯದಾಗಿವೆ. ಜೊತೆಗೆ ಕೆಲ ಕಂಬಗಳು ರಸ್ತೆಗೆ ಬಾಗಿಕೊಂಡಿವೆ. ಕೆಲವು ಕಂಬಗಳಿಗೆ ಮರದ ಹಂಬುಗಳು ಸುತ್ತಿಕೊಂಡಿದ್ದು ಕಂಬಗಳೇ ಕಾಣದಂತಾಗಿವೆ. ಇದರಿಂದ ಯಾವ ಕ್ಷ ಣದಲ್ಲಿ ಏನಾದರೂ ಅನಾಹುತ ಸಂಭವಿಸಬಹುದಾಗಿದೆ ಎಂದು ದೂರಿದರು.

ಕೆಸಗೋಡು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವನಾಂದ್‌, ಹಿರುವಾಟೆ ಕೂಡಿಗೆ ಗ್ರಾಮಸ್ಥರಾದ ನಿರಂಜನ ಗೌಡ, ಮಲ್ಲೇಶ್‌, ರಾಮಚಂದ್ರ, ಅಣ್ಣಪ್ಪ, ಓಂಕಾರಪ್ಪ, ವಿನೋದ್‌ಶಟ್ಟಿ, ಆಶೋಕ ಶಟ್ಟಿ, ಉದಯಕುಮಾರ್‌ ಹಾಜರಿದ್ದರು.
---------------
ಹಿರುವಾಟೆ ಗ್ರಾಮದ ವ್ಯಾಪ್ತಿಗೊಳಪಡುವ ಹಲವು ಗ್ರಾಮಗಳು ಆಲೂರು ಮತ್ತು ಬೇಲೂರು ತಾಲೂಕಿವ ವ್ಯಾಪ್ತಿಗೊಳಪಡುತ್ತವೆ. ಎರಡು ತಾಲೂಕುಗಳ ಅಧಿಕಾರಿಗಳು ಒಟ್ಟಿಗೆ ಸ್ಥಳ ಪರಿಶೀಲಿಸಿ ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಮಾಡುತ್ತೇವೆ.
- ರಂಗೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸೆಸ್ಕ್‌ ಆಲೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ