ಆ್ಯಪ್ನಗರ

ರಸ್ತೆ ವಿಸ್ತರಣೆಯಲ್ಲಿ ತಾರತಮ್ಯ ಆರೋಪ

ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ತಾರತಮ್ಯ ಆಗಿದೆ ಎಂದು ಆರೋಪಿಸಿ ರೈತಸಂಘ, ಭೂಮಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಮರಸೇನೆ ವತಿಯಿಂದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 20 Aug 2019, 5:00 am
ಚನ್ನರಾಯಪಟ್ಟಣ : ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ತಾರತಮ್ಯ ಆಗಿದೆ ಎಂದು ಆರೋಪಿಸಿ ರೈತಸಂಘ, ಭೂಮಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಮರಸೇನೆ ವತಿಯಿಂದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web HSN-HSN19CRP4


ರೈತ ಸಂಘದ ಕಚೇರಿ ಆವರಣದಿಂದ ರೈತ ಮುಖಂಡರಾದ ಅರಳಾಪುರ ಮಂಜೇಗೌಡ, ಮಹಿಳಾ ಘಟಕದ ನಾಗರತ್ನ, ರಾಜ್‌ಕುಮಾರ್‌ ಮತ್ತು ಸುನಿಲ್‌ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್‌ಕುಮಾರ್‌ ಹಾಗೂ ಮಂಜೇಗೌಡ, 38 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾರ‍್ಯವನ್ನು ವರ್ಷದ ಹಿಂದೆಯೇ ಆರಂಭಿಸಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರು ವಿಫಲರಾಗಿದ್ದಾರೆ. ಅಲ್ಲದೆ, ರಸ್ತೆ ವಿಸ್ತರಣೆ ಮಾಡುವ ವೇಳೆ ರಸ್ತೆಯ ಒಂದು ಬದಿಯಲ್ಲಿ 50 ಅಡಿಗೆ ಮತ್ತೊಂದು ಬದಿಯಲ್ಲಿ 53 ಅಡಿಗೆ ಚರಂಡಿ ಮತ್ತು ಪಾದಚಾರಿ ರಸ್ತೆ ಮಾಡಲಾಗಿದೆ. ಈ ಅಳತೆಯ ಒಳಗೆ ಬರುವ ಕಟ್ಟಡಗಳನ್ನು ಒಂದು ಬದಿಯಲ್ಲಿ ಮಾತ್ರ ತೆರವುಗೊಳಿಸಿ ಮತ್ತೊಂದು ಬದಿಯಲ್ಲಿ ಹಾಗೆಯೇ ಬಿಡಲಾಗಿದೆ. ಇದಕ್ಕೆ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕೆಂದು ಒತ್ತಾಯಿಸಿದರು.

ಈಗ ಮಾಡಿರುವ ಕೆಲಸದಲ್ಲಿ ರಸ್ತೆ ಮಧ್ಯದಲ್ಲಿಯೇ ಚರಂಡಿ ಹಾದುಹೋಗಿದೆ. ಇದರಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ. ಈ ಹಿಂದೆಯೇ ಅಧಿಕಾರಿಗಳು ಗುರುತು ಮಾಡಿರುವ ಸ್ಥಳದ ತನಕ ಮತ್ತೊಂದು ಬದಿಯಲ್ಲಿ ಕಟ್ಟಡವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ನ್ಯಾಯ ದೊರಕುವ ತನಕ ಪ್ರತಿಭಟನೆ ಮುಂದುವರಿಸಲಾಗುವುದೆಂದರು.

ಕಲಾವಿದ ನಂಜುಂಡಮೈಮ್‌ ಮಾತನಾಡಿ, ಈಗ ತಾರತಮ್ಯ ಮಾಡಿರುವ ಜಾಗದಲ್ಲಿ ಪ್ರಭಾವಿ ರಾಜಕಾರಣಿಯ ಸಂಬಂಧಿಕರ ಕಟ್ಟಡ ಇರುವುದರಿಂದ ಈ ರೀತಿ ಮಾಡಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನನುಕೂಲವಾಗುವುದರಿಂದ ಅಧಿಕಾರಿಗಳು ಎಲ್ಲರಿಗೂ ನ್ಯಾಯದೊರಕಿಸಿಕೊಡಬೇಕು ಎಂದರು.

ಪ್ರಕರಣ ಕುರಿತಂತೆ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಎಂ.ಕುಮಾರ್‌, ಕಾಮಗಾರಿಯ ಸಂಪೂರ್ಣ ಹೊಣೆಗಾರಿಕೆ ಹೆದ್ದಾರಿ ಇಲಾಖೆಯದ್ದಾಗಿದ್ದು, ಕಳೆದ ಮೂರು ತಿಂಗಳಿಂದ ಯಾವ ಅಧಿಕಾರಿಯೂ ಈ ಬಗ್ಗೆ ನಮ್ಮನ್ನು ಭೇಟಿಮಾಡಿಲ್ಲ. ನಮ್ಮ ಕಾರಾರ‍ಯಲಯದಿಂದ ಆಗಬೇಕಾದ ಅಗತ್ಯ ನೆರವನ್ನು ಸದಾ ಒದಗಿಸಲು ಸಿದ್ಧರಿದ್ದೇವೆ. ಮತ್ತೊಂದು ಮೂಲಗಳ ಪ್ರಕಾರ ಆ ಭಾಗದಲ್ಲಿರುವ ಕಟ್ಟಡಗಳ ಮಾಲೀಕರು ಉಚ್ಚನ್ಯಾಯಾಲಯದ ಮೊರೆಹೋಗಿದ್ದು, ತಡೆಯಾಜ್ಞೆ ದೊರೆತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ