ಆ್ಯಪ್ನಗರ

Karnataka Election 2023: ಹಾಸನದಲ್ಲಿ ಎಟಿ ರಾಮಸ್ವಾಮಿ ಹಾಗೂ ಶಿವಲಿಂಗೇಗೌಡರಿಗೆ 'ಕೈ' ಗಾಳ ?

Karnataka Election 2023: ಜೆಡಿಎಸ್ ಪಕ್ಷದಲ್ಲಿ ಅಸಮಾಧಾನಿತರಾಗಿರುವ ಎಟಿ ರಾಮಸ್ವಾಮಿ ಹಾಗೂ ಕೆಎಂ ಶಿವಲಿಂಗೇಗೌಡ ಇಬ್ಬರಿಗೂ ಕೈ ಪಾಳಯ ಗಾಳ ಹಾಕಿದೆ. ಆದರೆ ಇಬ್ಬರ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಎಲ್ಲವೂ ಗುಟ್ಟಾಗಿಯೇ ನಡೆಯುತ್ತಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 1 Mar 2023, 1:29 pm

ಹೈಲೈಟ್ಸ್‌:

  • ಜೆಡಿಎಸ್‌ನಿಂದ ಸಿಡಿದೆದ್ದು ಹೊರಬರಲು ಸಜ್ಜಾಗಿರುವ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಬ್ಬರನ್ನೂ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಮುಖಂಡರು ತಂತ್ರ ರೂಪಿಸಿದ್ದಾರೆ
  • ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಮ್ಮ ಅಭಿಮಾನಿಗಳೊಂದಿಗೆ ಚರ್ಚಿಸಿ ಕೆಲವೇ ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಎಲ್ಲ ಪಕ್ಷದಲ್ಲೂ ತನಗೆ ಆತ್ಮೀಯರಿದ್ದಾರೆ, ಆಹ್ವಾನ ನೀಡುತ್ತಿದ್ದಾರೆ ತಮ್ಮದು ಕುಟುಂಬದೊಳಗಿನ ನಿರ್ಧಾರವಲ್ಲ ಎಂದಿದ್ದಾರೆ.
  • ಕ್ಷೇತ್ರ ಹಾಗೂ ರಾಜ್ಯದಲ್ಲಿ ತನ್ನದೇ ಆದ ಇಮೇಜ್‌ ಹೊಂದಿರುವ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್‌ ಗಾಳಹಾಕಿದೆ. ಅಂದುಕೊಂಡಂತೆ ಆದರೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸುವ ಲೆಕ್ಕಾಚಾರವೂ ನಡೆದಿತ್ತು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web AT Ramaswamy, Shivalingegowda
  • ಪ್ರಕಾಶ್‌ ಜಿ.,
ಹಾಸನ: ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಪಕ್ಷಕ್ಕೆ ಪುನಶ್ಚೇತನ ನೀಡುವ, ಆ ಮೂಲಕ ಜಿಲ್ಲೆಯ ಮತದಾರರ ಗಮನಸೆಳೆಯುವ ಅಸ್ತ್ರವಾಗಿದೆ. ಇನ್ನೊಂದೆಡೆ ಜಿಲ್ಲೆಯ ಇಬ್ಬರು ಶಾಸಕರನ್ನು ಸೆಳೆಯುವ ರಣತಂತ್ರವೂ ನಡೆಯುತ್ತಿರುವುದು ಪಕ್ಷದ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.
ಜೆಡಿಎಸ್‌ನಿಂದ ಸಿಡಿದೆದ್ದು ಹೊರಬರಲು ಸಜ್ಜಾಗಿರುವ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಬ್ಬರನ್ನೂ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಮುಖಂಡರು ತಂತ್ರ ರೂಪಿಸಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಬಹುತೇಕ ಅಸ್ತಿತ್ವ ಕಳೆದುಕೊಂಡಂತಿರುವ ಪಕ್ಷಕ್ಕೆ ಹೊಸ ಚೈತನ್ಯ ತುಂಬಿ 2023ರ ಚುನಾವಣೆಯಲ್ಲಿಆ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬುದು ಕಾಂಗ್ರೆಸ್‌ ವರಿಷ್ಠರ ಲೆಕ್ಕಾಚಾರ.
HD Kumaraswamy - ಕುಟುಂಬಕ್ಕಿಂತ ನನಗೆ ನಮ್ಮ ಕಾರ್ಯಕರ್ತರು ಮುಖ್ಯ: ಭವಾನಿ ರೇವಣ್ಣಗೆ ಹೆಚ್ ಡಿಕೆ ಪರೋಕ್ಷ ಟಾಂಗ್

ವಾಸ್ತವ್ಯ-ತಂತ್ರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಸನದಲ್ಲಿ ಮಂಗಳವಾರ ವಾಸ್ತವ್ಯ ಹೂಡಿ ಶಾಸಕ ಎ.ಟಿ.ರಾಮಸ್ವಾಮಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂಬ ವದಂತಿಯೊಂದು ಹರಿದಾಡಿ ಸದ್ದು ಮಾಡಿತು. ಕೆ.ಎಂ.ಶಿವಲಿಂಗೇಗೌಡರು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರೊಂದಿಗೂ ಸೌಜನ್ಯಯುತ ಮಾತುಕತೆ ನಡೆಸಲಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್‌ನ ಮುಖಂಡರುಗಳಿಗೆ ಇದರ ಸುಳಿವೇ ಇಲ್ಲದಂತೆ ಗೌಪ್ಯವಾಗಿಯೇ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ದಿನಾಂಕ ನಿಗದಿಪಡಿಸಿ ಅದ್ಧೂರಿಯಾಗಿ ಪಕ್ಷ ಸೇರ್ಪಡೆ ಮಾಡುವುದು ಇದರ ಹಿಂದಿನ ಉದ್ದೇಶ ಎನ್ನುತ್ತಿದೆ ಮೂಲಗಳು.

ಎಟಿಆರ್‌ ನಡೆ ಗೌಪ್ಯ
ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಮ್ಮ ಅಭಿಮಾನಿಗಳೊಂದಿಗೆ ಚರ್ಚಿಸಿ ಕೆಲವೇ ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಎಲ್ಲ ಪಕ್ಷದಲ್ಲೂ ತನಗೆ ಆತ್ಮೀಯರಿದ್ದಾರೆ, ಆಹ್ವಾನ ನೀಡುತ್ತಿದ್ದಾರೆ ತಮ್ಮದು ಕುಟುಂಬದೊಳಗಿನ ನಿರ್ಧಾರವಲ್ಲ, ಬದಲಾಗಿ ಎಲ್ಲರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳುತ್ತೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ತನ್ನ ಸ್ಪರ್ಧೆಯಂತೂ ಖಚಿತ ಎಂದು ಹೇಳಿದ್ದಾರೆ. ಆದರೆ ಅವರು ತೆನೆಯನ್ನು ಕೆಳಕ್ಕಿಳಿಸಿ 'ಕೈ ಹಿಡಿಯುವರೋ' ಅಥವಾ 'ಕಮಲ ಮುಡಿಯುವರೋ' ಎಂಬುದನ್ನು ಕಾದು ನೋಡಬೇಕಿದೆ.

Hassan Constituency: ಜೆಡಿಎಸ್‌ ಉತ್ಸಾಹಕ್ಕೆ ಭಂಗ ತಂದ ಅಂತಃಕಲಹ: ಟಿಕೆಟ್‌ ಗೊಂದಲ, ಭವಾನಿ ರೇವಣ್ಣ v/s ಕುಮಾರಸ್ವಾಮಿ ಜಟಾಪಟಿ
ಬಿಜೆಪಿಯಿಂದಲೂ ಯತ್ನ
ಕ್ಷೇತ್ರ ಹಾಗೂ ರಾಜ್ಯದಲ್ಲಿ ತನ್ನದೇ ಆದ ಇಮೇಜ್‌ ಹೊಂದಿರುವ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್‌ ಗಾಳಹಾಕಿದೆ. ಅಂದುಕೊಂಡಂತೆ ಆದರೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸುವ ಲೆಕ್ಕಾಚಾರವೂ ನಡೆದಿತ್ತು. ಆದರೆ ಅವರು ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಒಲವು ಹೊಂದಿದ್ದರಿಂದ ಆ ಚರ್ಚೆ ಅಲ್ಲಿಗೆ ಸ್ಥಗಿತಗೊಂಡಿತು. ಇದೀಗ ಅರಕಲಗೂಡು ಕ್ಷೇತ್ರದಿಂದ ಟಿಕೆಟ್‌ ಕೊಟ್ಟು ಕಣಕ್ಕಿಳಿಸುವ ಚಿಂತನೆ ಕಮಲ ಪಾಳೆಯದಲ್ಲಿ ನಡೆದು ಆಹ್ವಾನ ನೀಡಲಾಗಿದೆಯಾದರೂ ಎ.ಟಿ.ಆರ್‌. ಇನ್ನು ಸ್ಪಷ್ಟ ಅಭಿಪ್ರಾಯ ತಿಳಿಸಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಆತ್ಮೀಯವಾಗಿ ಆಹ್ವಾನ ನೀಡಿದ್ದು, ನಿರ್ಧಾರ ಎ.ಟಿ.ಆರ್‌.ಗೆ ಬಿಟ್ಟದ್ದಾಗಿದೆ.

ಕಾಂಗ್ರೆಸ್‌ನತ್ತ ಕೆಎಂಶಿ ಚಿತ್ತ?

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಈಗಾಗಲೇ ಕಾಂಗ್ರೆಸ್‌ ಸೇರ್ಪಡೆಯ ಸುಳಿವು ನೀಡಿದ್ದು, ಇದಕ್ಕೆ ಪೂರ್ವಭಾವಿ ಸಿದ್ಧತೆ, ಅಖಾಡವೂ ಸಿದ್ಧಗೊಳ್ಳುತ್ತಿದೆ. ಇದರೊಂದಿಗೆ ಜಿಲ್ಲೆಗೆ ಬಂದಿರುವ ಕೈಪಡೆಯ ಅಧ್ಯಕ್ಷರನ್ನು ಸೌಜನ್ಯಯುತವಾಗಿ ಭೇಟಿ ಮಾಡುತ್ತಾರೆ ಎಂಬ ವದಂತಿಯೊಂದು ಚರ್ಚೆಗೊಳಗಾಗಿತ್ತು. ಈ ಇಬ್ಬರು ಶಾಸಕರು ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಅವರಿಗೆ ಬಿಜೆಪಿ ತತ್ವ ಸಿದ್ಧಾಂತಗಳು ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬುದು ಅವರ ಆಪ್ತ ವಲಯದ ವಾದ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ