ಆ್ಯಪ್ನಗರ

6 ತಿಂಗಳು ಕಡ್ಡಾಯವಾಗಿ ಎದೆಹಾಲುಣಿಸಿ

ಶಾಂತಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಸ್ತ್ರೀ ರೋಗ ತಜ್ಞೆ ಡಾಕೆವಿ...

Vijaya Karnataka 3 Aug 2019, 5:00 am
ಹಾಸನ : ಹೆರಿಗೆಯ ನಂತರ ಕಡ್ಡಾಯವಾಗಿ ಮೊದಲ ಆರು ತಿಂಗಳು ಕೇವಲ ತಾಯಿಯ ಎದೆಹಾಲುಣಿಸುವುದು, ಒಂದು ವರ್ಷದವರೆಗೆ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸುವುದು ಅತ್ಯಂತ ಮಹತ್ವದ ಅಭ್ಯಾಸ ಎಂದು ಶಾಂತಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಸ್ತ್ರೀ ರೋಗ ತಜ್ಞೆ ಡಾ.ಕೆ.ವಿ.ಕಿರಣ ಕರೆ ನೀಡಿದರು.
Vijaya Karnataka Web HSN-HSN2M 10


ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಕೌಮಾರ ಭೃತ್ಯ , ಪ್ರಸೂತಿ ಸ್ತ್ರೀ ರೋಗ ವಿಭಾಗಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನೇಕ ಮೂಢನಂಬಿಕೆಗಳಿಗೆ ಒಳಗಾಗಿರುವ ತಾಯಂದಿರು ಬಹಳ ಬೇಗನೇ ಮಗುವನ್ನು ಸ್ತನ್ಯಪಾನದಿಂದ ವಂಚಿತರಾಗುವಂತೆ ಮಾಡುವರು. ಇದು ಅವೈಜ್ಞಾನಿಕ ಹಾಗೂ ಅಮಾನವೀಯ ಆಚರಣೆ. ಏಕೆಂದರೆ ತಾಯಿಯ ಹಾಲು ಮಗುವಿನ ಪೋಷಣೆಯ ಜತೆಗೆ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚುವಂತೆ ಮಾಡುತ್ತದೆ. ತಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಇದನ್ನು ಹೆರಿಗೆಯಾದ ತಾಯಂದಿರು ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರೂ ಅರಿತು, ಸುಭದ್ರ ಭವಿಷ್ಯದ ಭಾರತ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.

ರಷ್ಯಾ ದೇಶದ ಮಾಸ್ಕೋದ ಮಕ್ಕಳ ತಜ್ಞ ವೈದ್ಯೆ ಡಾ.ಸ್ಟ್ರೋಗ್ಯಾನೋವಾ ಓಕ್ಸಾನಾ ಮಾತನಾಡಿ, ಸ್ತನ್ಯಪಾನದ ಅಭಾವದಿಂದ ಎಳೆಯ ಕಂದಮ್ಮಗಳ ರೋಗನಿರೋಧಕ ಶಕ್ತಿ ಕ್ಷೀಣಿಸಿ, ಪುನಃ ಪುನಃ ಸೋಂಕು ರೋಗಗಳಿಗೆ ತುತ್ತಾಗುವರು. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಈ ಕುರಿತು ಅರಿವು ಮೂಡಿಸಲು ಸಪ್ತಾಹ ಏರ್ಪಾಡು ಮಾಡಿರುವುದು ಸ್ವಾಗತಾರ್ಹ ಎಂದರು.

ಸಮಾರಂಭದ ಅಧ್ಯಕ್ಷ ತೆವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ರಾವ್‌ ಮಾತನಾಡಿ, ಆಯುರ್ವೇದವು ತಾಯಿಯ ಎದೆಹಾಲನ್ನು ಅಮೃತವೆಂದು ಪರಿಗಣಿಸಿದೆ. ಹಾಲುಣಿಸುವ ತಾಯಿಯ ಶಾರೀರಿಕ ಭಂಗಿ, ಮನಸ್ಥಿತಿ ಮತ್ತು ಗಮನದ ಮಹತ್ವವನ್ನೂ ಸಹಸ್ರಾರು ವರ್ಷಗಳ ಹಿಂದೆಯೇ ಸಾರಿ ಹೇಳಿದೆ. ಸಂಶೋಧನೆಗಳು ತಿಳಿಸುವಂತೆ ಕನಿಷ್ಠ ಒಂದು ವರ್ಷ ಎದೆಹಾಲುಣಿಸಿದ ತಾಯಿಯ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಬಹುಪಯೋಗಿಯಾದ ಹಾಗೂ ಪ್ರಕೃತಿದತ್ತವಾದ ಸ್ತನ್ಯಪಾನದ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು.

ಮಕ್ಕಳ ತಜ್ಞೆ ಡಾ.ಯು.ಶೈಲಜಾ ಕ್ಷೀಣಿಸಿದ ಎದೆಹಾಲು ವೃದ್ಧಿಗೆ ಆಯುರ್ವೇದದ ಪರಿಹಾರೋಪಾಯಗಳು ಎಂಬ ವಿಷಯ ಕುರಿತು, ಕಾಲೇಜಿನ ಪ್ರಸೂತಿ ಸ್ತ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಗಾಯತ್ರಿ ಭಟ್‌.ಎನ್‌.ವಿ. ಎದೆಹಾಲುಣಿಸುವಾಗ ಉಂಟಾಗುವ ತೊಂದರೆಗಳು, ಉಪಾಯಗಳು, ಮಕ್ಕಳ ವಿಭಾಗದ ಸಹಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಲ್ಲಣ್ಣನವರ್‌ ಎದೆಹಾಲುಣಿಸುವ ಸರಿಯಾದ ಕ್ರಮ ಎಂಬ ಅತ್ಯುಪಯುಕ್ತ ವಿಷಯಗಳ ಕುರಿತು ತಾಯಂದಿರಿಗೆ ಮಾರ್ಗದರ್ಶನ ನೀಡಿದರು.

ಡಾ.ಮಂಗಳಾ ಜ್ಯೋತ್ಸ್ಯ, ಡಾ.ನಯನ್‌ ಕುಮಾರ್‌, ಡಾ.ಮಾನಸಾ.ಎಚ್‌, ಡಾ.ಪ್ರತಿಮಾಜೈನ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ