ಆ್ಯಪ್ನಗರ

ಕಾಫಿ ಬೆಳೆಗಾರ ಸಂಕಷ್ಟ ನಿವಾರಣೆಗೆ ಸರಕಾರ ಬದ್ಧ: ಶಾಸಕ

ಕಾಫಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಭರವಸೆ ನೀಡಿದರು.

Vijaya Karnataka 2 Jan 2019, 5:00 am
ಬೇಲೂರು: ಕಾಫಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಭರವಸೆ ನೀಡಿದರು.
Vijaya Karnataka Web coffee growers get support from govt
ಕಾಫಿ ಬೆಳೆಗಾರ ಸಂಕಷ್ಟ ನಿವಾರಣೆಗೆ ಸರಕಾರ ಬದ್ಧ: ಶಾಸಕ


ತಾಲೂಕಿನ ಕೆಸಗೋಡು (ಹೊಸಹಳ್ಳಿ) ಗ್ರಾಮದಲ್ಲಿ ನಡೆದ ಭೂಮಿಪುತ್ರ ಬೆಳೆಗಾರರ ಸಂಘದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಾಫಿ ಬೆಳೆಗಾರರು ಹಲವಾರು ಸಮಸ್ಯೆಗಳ ಎದುರಿಸುತ್ತಿದ್ದು, ಒತ್ತುವರಿ ಮತ್ತು ಬೆಲೆಗಳ ಏರುಪೇರಿನಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಎಚ್‌.ಡಿ.ದೇವೇಗೌಡ, ಸಚಿವ ಎಚ್‌.ಡಿ.ರೇವಣ್ಣ ಅವರೊಂದಿಗೆ ದಿಲ್ಲಿಗೆ ನಿಯೋಗ ತೆರಳಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಚರ್ಚಿಸಲಾಗಿದೆ. ಈ ಸಂಬಂಧ ಹಾಸನ ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಕಾಫಿ ಬೆಳಗಾರರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಇದೇ ವೇಳೆ ಕೇಂದ್ರದ ಮಂತ್ರಿಗಳು ಆಗಮಿಸಿ ಬೆಳೆಗಾರರ ಸಮಸ್ಯೆ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿಗಾಗಿ ಈಗಾಗಲೇ 150 ಕೋಟಿ ರೂ. ಬಿಡುಗಡೆಯಾಗಿದೆ. ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಅಮೃತ ಯೋಜನೆಯಲ್ಲಿ ತಾಲೂಕಿನ ಎಲ್ಲಾ ಬರಪೀಡಿತ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನದಿಮೂಲದಿಂದ ಮಾಡಲಾಗುವುದು. ವಾಟೆಹೊಳೆ ಜಲಾಶಯದಿಂದ ಈ ಭಾಗದ ಕೃಷಿಗೆ ನೀರು ಪಡೆಯಲಾಗುವುದು. ಇದೇ ಮಾದರಿಯಲ್ಲಿ ಕುಡಿಯುವ ನೀರಿಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ತಾಲೂಕು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಮೆಣಸಿಗೆ 500 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಕೇಂದ್ರದ ಸಚಿವರಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಅರೇಹಳ್ಳಿ, ಬಿಕ್ಕೋಡು, ಕಸಬಾ ಹೋಬಳಿಯನ್ನು ಅತಿವೃಷ್ಟಿ ಪರಿಹಾರಕ್ಕೆ ಕೇಂದ್ರ ಸರಕಾರ ಸೇರ್ಪಡೆ ಮಾಡಿದೆ. ಮಳೆಯಿಂದ ಹಾನಿಗೊಳಗಾದವರಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.

ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ಎಚ್‌.ಸಿ.ಸತೀಶ್‌ ಮಾತನಾಡಿ, ಕೃಷಿಭೂಮಿ ಗುಣಮಟ್ಟ ಅಭಿವೃದ್ಧಿಪಡಿಸುವ ಮತ್ತು ಪರಿಸರ ರಕ್ಷ ಣೆ ಮಾಡುವಲ್ಲಿ ಕಾಫಿ ಬೆಳೆಗಾರರು ಕೊಡುಗೆ ನೀಡಿದ್ದಾರೆ. ಭತ್ತ, ಕಾಫಿ, ಮೆಣಸು ಬೆಲೆ ಇಳಿಮುಖವಾಗಿದೆ. ಕಾರ್ಮಿಕರ ವೇತನ ದುಬಾರಿಯಾಗಿದೆ. ಪ್ರಕೃತಿ ಮುನಿಸಿನಿಂದಾಗಿ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಾಗಿಲ್ಲ. ಬೆಂಬಲ ಬೆಲೆ ನೀಡಿದರೆ ಬೆಳೆಗಾರರು ಉಳಿದುಕೊಳ್ಳುವ ಸಾಧ್ಯತೆಯಿದೆ ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲೆಯ ಏಕೈಕ ಮಿಲಿಟರಿ ಸುಬೇದಾರ್‌ ಹುದ್ದೆಯನ್ನು ಹೊಂದಿರುವ ಅನಿಲ್‌ ಕ್ರಾಸ್ಟ್‌ ಹಾಗೂ ಉತ್ತಮ ಕಾಫಿ ಬೆಳೆಗಾರರಾದ 90 ವರ್ಷದ ಅಬ್ದುಲ್‌ಲತೀಫ್‌ ಹಾಗೂ ಎಂ.ಎಸ್‌.ಪರಮಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಂಸ್ಕೃತಿ ಇಲಾಖೆಯಿಂದ ಸುಗಮ ಸಂಗೀತ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಗೋವಿಂದಶೆಟ್ಟಿ, ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತೀರ್ಥಮಲ್ಲೇಶ್‌, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್‌.ಮಹೇಶ್‌, ಬೆಳೆಗಾರರಾದ ನಂದಿನಿವಿಶ್ವನಾಥ್‌, ಬಿ.ಕೆ.ಚಂದ್ರಕಲಾ, ನಟರಾಜ್‌, ಎಪಿಎಂಸಿ ಅಧ್ಯಕ್ಷ ಚೇತನಕುಮಾರ್‌, ಸಂಘದ ಗೌರವಾಧ್ಯಕ್ಷ ಕೆಟಿ.ರೇಣುಕಾನಂದ, ಮಾಜಿ ಅಧ್ಯಕ್ಷ ವೇದರಾಜು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ