ಆ್ಯಪ್ನಗರ

ಬೆಳೆಗಾರರ ಕೈಹಿಡಿಯದ ಮಾವು: ಬೆಲೆ ಕುಸಿತದಿಂದ ಕಂಗೆಟ್ಟ ಹಾಸನದ ರೈತರು

ಕೊರೊನಾ ಸಂಕಷ್ಟದಲ್ಲಿ ಮಾವು ಕೈ ಹಿಡಿಯುತ್ತದೆ ಎಂದು ಭಾವಿಸಿದ್ದ ರೈತನ ನಂಬಿಕೆ ಹುಸಿಯಾಗಿದೆ. ಮಾವಿನ ಬೆಲೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

Vijaya Karnataka Web 22 May 2020, 7:30 am
ಎಂ. ವರುಣ್‌ಹಾಸನ: ಹಾಸನ ಮೂಲದ ಮಾವಿನಹಣ್ಣಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲೂ ಬೇಡಿಕೆ ಇದೆ. ಆದರೆ ಸಾಗಣೆಗೆ ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರುವುದು ರೈತರ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಗೆ ಕೊರೊನಾ ಕಾಲಿಟ್ಟಿರುವ ಪರಿಣಾಮ ಮಾವು ಪ್ರಿಯರು ಕೂಡ ಹಣ್ಣಿನ ಸವಿ ಸವಿಯಲು ಹಿಂಜರಿಯುತ್ತಿದ್ದಾರೆ. ಯಾವ ಹಣ್ಣು ಬೇಡ, ಜೀವ ಉಳಿದರೆ ಸಾಕು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Vijaya Karnataka Web mango


ರಸಪುರಿ, ಮಲ್‌ಗೋವ, ಗಿಣಿಮೂತಿ, ಕಸಿ ಮಾವು ಸೇರಿದಂತೆ ನಾನಾ ಬಗೆಯ ರುಚಿಕರ ಮಾವಿಗೆ ಉತ್ತಮ ಬೆಲೆ ಇಲ್ಲದ ಪರಿಣಾಮ ಬೆಳೆದ ಅಷ್ಟೂ ಮಾವು ಮಾರಾಟವಾದರೂ ಖರ್ಚು ಮಾಡಿದ ಹಣ ಹಿಂತಿರುಗುವುದಿಲ್ಲ ಎಂದು ರೈತ ಕಣ್ಣೀರಿಡುತ್ತಿದ್ದಾನೆ.

ಮಲೆನಾಡು ಪ್ರದೇಶಕ್ಕಿಂತಲೂ ಹೆಚ್ಚಾಗಿ ಬರಪೀಡಿತ ಪ್ರದೇಶಗಳ ಉತ್ತಮ ಬೆಳೆಯಾಗಿರುವ ಮಾವು ಆ ಭಾಗದ ರೈತರ ಪಾಲಿಗೆ ಅಮೃತ ಎಂಬಂತಿದೆ. ಆದರೆ ಈ ಬಾರಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವವರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮೂಲಕ ಕುಸಿದ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಸಂಕಷ್ಟಕ್ಕೊಳಗಾಗಿರುವ ರೈತನಿಗೆ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ. ಬೆಳೆ ಪರಿಹಾರದ ಜತೆಗೆ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿಪಡಿಸಿದರೆ ಬೀದಿ ಪಾಲಾಗುತ್ತಿರುವ ರೈತರ ಕುಟುಂಬಗಳನ್ನು ರಕ್ಷಿಸಬಹುದು ಎಂದು ಜಿಲ್ಲೆಯ ಕೆಲ ಮಾವು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3000 ಹೆಕ್ಟೇರ್‌ನಲ್ಲಿ ಮಾವು

ಜಿಲ್ಲೆಯಲ್ಲಿ ರಸಪುರಿ, ಬಾದಾಮಿ, ತೋತಾಪುರಿ, ಮಲ್ಲಿಕ ಹಾಗೂ ಸಿಂಧೂರ ಸೇರಿದಂತೆ ಹಲವು ಬಗೆಯ ಮಾವಿನ ಹಣ್ಣು ಬೆಳೆಯಲಾಗುತ್ತದೆ. ಜಿಲ್ಲೆಯ 3000 ಹೆಕ್ಟೆರ್‌ ಪ್ರದೇಶದಲ್ಲಿಮಾವು ಬೆಳೆಯಲಾಗುತ್ತಿದ್ದು, ಮುಂಗಾರು ಮಳೆಯ ಸಂದರ್ಭದಲ್ಲಿ ಫಸಲು ಹೆಚ್ಚು ರೈತರ ಕೈ ಸೇರುತ್ತದೆ. ಆದರೆ ಈ ಬಾರಿ ಸೂಕ್ತ ಬೆಲೆ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ರೈತ ಪರದಾಡುವಂತಾಗಿದೆ. ಕಳೆದ ಬಾರಿ ಕೆ. ಜಿ. ಗೆ 130 ರಿಂದ 150 ರೂ. ವರೆಗೆ ಇದ್ದ ಮಾವಿನ ಬೆಲೆ ಈಗ 30 ರಿಂದ 60 ರೂ.ಗೆ ಸಿಗುತ್ತಿದೆ.

ಅತೀ ಹೆಚ್ಚು ಆದಾಯ ಗಳಿಸಬಹುದಾಗಿದ್ದ ಮಾವಿಗೆ ಈ ಬಾರಿ ಉತ್ತಮ ಬೆಲೆ ಸಿಗದ ಕಾರಣ ತೊಂದರೆಯಾಗಿದೆ. ಖರ್ಚು ಮಾಡಿದ ಹಣ ಕೂಡ ವಾಪಸಾಗುವ ನಂಬಿಕೆಯಿಲ್ಲ.
ರಾಮಯ್ಯ, ಮಾವು ಮಾರಾಟಗಾರರು

ಜಿಲ್ಲೆಯಲ್ಲಿಈ ಭಾರಿ ಮಾವಿನ ಫಸಲು ನಿರೀಕ್ಷೆಯಷ್ಟು ಬಂದಿಲ್ಲ, ಲಾಕ್‌ಡೌನ್‌ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆಯೂ ನಿರೀಕ್ಷಿತ ಮಟ್ಟದಲ್ಲಿಲ್ಲ.
ಮಂಜುನಾಥ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾಸನ

ಜಿಲ್ಲೆಯ 3000 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು , ಈ ಬಾರಿ ಹವಾಮಾನ ವೈಪರೀತ್ಯದಿಂದ ಫಸಲು ಶೇ.70 ರಷ್ಟು ಕ್ಷೀಣಿಸಿದೆ.
ಎಚ್‌.ಪಿ.ಮೋಹನ್‌, ಪ್ರಗತಿಪರ ರೈತರು. ಹಾಸನ

ರೈತರಿಗೆ ಸಿಗುವ ಹಣ

ಕಳೆದ ವರ್ಷ-ಕೆ.ಜಿ.ಗೆ 130 ರಿಂದ 150 ರೂ.
ಈ ವರ್ಷ-ಕೆ.ಜಿ.ಗೆ 30 ರಿಂದ 60 ರೂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ