ಆ್ಯಪ್ನಗರ

ಜಿಂಕೆಗಳ ಜೀವಕ್ಕೆ ಕುತ್ತು ತರುತ್ತಿವೆ ಬೀದಿನಾಯಿಗಳು...!

ಆಹಾರ ಹುಡುಕಿ ನಾಡಂಚಿಗೆ ಬರುತ್ತಿರುವ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

Vijaya Karnataka 1 Aug 2018, 5:00 am
ಹಾಸನ: ಆಹಾರ ಹುಡುಕಿ ನಾಡಂಚಿಗೆ ಬರುತ್ತಿರುವ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
Vijaya Karnataka Web HSN-HSN30N6


ಆಲೂರು ತಾಲೂಕು ಹೆಮ್ಮಿಗೆ ಸಮೀಪದ ಕುಡುಗಳಲೆ, ಹೊಸಹಳ್ಳಿ, ಕರಡಿಬೆಟ್ಟ ಕಾಗನೂರು ವ್ಯಾಪ್ತಿಯ ಕರಡಿಬೆಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಜಿಂಕೆಗಳು ವಾಸಿಸುತ್ತಿವೆ. ಇತ್ತೀಚಿನ ದಿನದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚಳಿ ಹೆಚ್ಚಿದ್ದು, ಬೆಚ್ಚನೆ ವಾತಾವರಣಕ್ಕಾಗಿ ಕೆಲವೊಮ್ಮೆ ರಾತ್ರಿ ವೇಳೇ ರಸ್ತೆ ಮೇಲೆ ಬಂದು ಮಲಗುತ್ತವೆ. ಈ ಸಂಗತಿಯನ್ನು ತಿಳಿದಿರುವ ಬೀದಿನಾಯಿಗಳು ಗುಂಪಾಗಿ ದಾಳಿ ನಡೆಸಿ, ಗಾಯಗೊಳಿಸುತ್ತಿವೆ. ಆಹಾರಕ್ಕಾಗಿಯೂ ಕಾಡಂಚಿನ ಗ್ರಾಮಗಳತ್ತ ಕಾಣಿಸಿಕೊಳ್ಳುತ್ತಿವೆ. 15 ದಿನದಲ್ಲಿ ಮೂರು ಜಿಂಕೆಗಳ ಮೇಲೆ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿವೆ. ಇದು ಬೆಳಕಿಗೆ ಬಂದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತಮಗೇನು ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಪರಿಸರ ಹಾಗೂ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯರ ಮೂಲಕ ವಿಷಯ ತಿಳಿದ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯಾಧಿಕಾರಿಗಳು ಆಗಮಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಜಿಂಕೆಗಳು ಮೃತಪಟ್ಟಿವೆ ಎಂದು ಪರಿಸರವಾದಿ ಹೆಮ್ಮಿಗೆ ಮೋಹನ್‌ ಹಾಗೂ ಹೆಮ್ಮಿಗೆಯ ಜೀವನ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

''ಬೀದಿನಾಯಿಗಳ ಹಾವಳಿ ಗ್ರಾಮಗಳಲ್ಲಿ ಮಿತಿ ಮೀರಿದ್ದು, ಜನರನ್ನಷ್ಟೇ ಅಲ್ಲದೆ ಪ್ರಾಣಿಗಳ ಮೇಲೂ ಈಗ ದಾಳಿ ಮಾಡುತ್ತಿವೆ. ಆ ಸಮಯದಲ್ಲಿ ಜನರೇನಾದರೂ ಕಂಡು ಕಲ್ಲುತೂರಿ, ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರೆ ಜಿಂಕೆಯನ್ನು ಬಿಟ್ಟು ಹೋಗುತ್ತವೆ. ಈ ಕಾರಣದಿಂದಲೇ ಮೂರು ಜಿಂಕೆಗಳು ನಮ್ಮ ಲೆಕ್ಕಕ್ಕೆ ಸಿಕ್ಕಿವೆ, ದಾಳಿಗೆ ತುತ್ತಾದವು ಎಷ್ಟು ಎಂಬುದು ತಿಳಿದಿಲ್ಲ'' ಎನ್ನುತ್ತಾರೆ ಜೀವನ್‌.

''ಕಾಡಂಚಿಗೆ ಬಂದ ಜಿಂಕೆಯ ಮೇಲೆ ದಾಳಿ ಮಾಡಿದ್ದನ್ನು ಕಂಡು ಓಡಿಹೋಗಿ ರಕ್ಷಿಸಿದ್ದೆ. ತೀವ್ರ ಗಾಯಗೊಂಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೂಲಕ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರೂ, ಹದಿನೈದು ದಿನದಲ್ಲಿ ಮೂರು ಜಿಂಕೆಗಳು ಮೃತಪಟ್ಟಿತು. ಈ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ'' ಎನ್ನುತ್ತಾರೆ.


ಕರಡಿಬೆಟ್ಟದ ಕಾಡಂಚಿಗೆ ಬರುವ ಜಿಂಕೆಗಳ ಮೇಲೆ ನಾಯಿಗಳು ದಾಳಿ ಮಾಡಿದ್ದು, 15 ದಿನದಲ್ಲಿ ಮೂರು ಜಿಂಕೆ ಸತ್ತಿವೆ. ತಡೆಗಟ್ಟಲು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಹೀಗಾದರೆ ಜಿಂಕೆಗಳಿಗೆ ಉಳಿಗಾಲವಿಲ್ಲ.

-ಎಚ್‌.ಪಿ.ಮೋಹನ್‌, ಪರಿಸರಪ್ರೇಮಿ, ಹಾಸನ

ನಾಯಿಗಳು ಜಿಂಕೆಗಳ ಮೇಲೆ ದಾಳಿ ನಡೆಸಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಆರ್‌ಎಫ್‌ಒಗೆ ಸೂಚನೆ ನೀಡಿ ಮಾಹಿತಿ ಪಡೆದುಕೊಳ್ಳುತ್ತೇನೆ.

-ಎಂ.ಶಿವರಾಮ್‌ ಬಾಬು ಡಿಎಫ್‌ಒ ಹಾಸನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ