ಆ್ಯಪ್ನಗರ

ರಾಜಕೀಯ ದ್ವೇಷಕ್ಕೆ ಎತ್ತಿನಹೊಳೆ ಯೋಜನೆ ವಿಳಂಬ

ದ್ವೇಷದ ರಾಜಕಾರಣದಿಂದ ಎತ್ತಿನಹೊಳೆ ಯೋಜನೆಗೆ ಸ್ವಾಧೀನವಾದ ಭೂಮಿಗೆ ಪರಿಹಾರ ದೊರೆಯದೆ ರೈತರು ಪರಿತಪಿಸುತ್ತಿದ್ದರೆ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಆರೋಪಿಸಿದರು.

Vijaya Karnataka 1 Sep 2019, 5:00 am
ಸ್ವಾಧೀನಪಡಿಸಿಕೊಂಡ ಭೂಮಿಗೆ ನಯಾಪೈಸೆ ಪರಿಹಾರವಿಲ್ಲ: ಟೀಕೆ
Vijaya Karnataka Web delay in ethinahole projecting for political hatred
ರಾಜಕೀಯ ದ್ವೇಷಕ್ಕೆ ಎತ್ತಿನಹೊಳೆ ಯೋಜನೆ ವಿಳಂಬ


ಹಾಸನ:
ದ್ವೇಷದ ರಾಜಕಾರಣದಿಂದ ಎತ್ತಿನಹೊಳೆ ಯೋಜನೆಗೆ ಸ್ವಾಧೀನವಾದ ಭೂಮಿಗೆ ಪರಿಹಾರ ದೊರೆಯದೆ ರೈತರು ಪರಿತಪಿಸುತ್ತಿದ್ದರೆ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಆರೋಪಿಸಿದರು.

''ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿ 2014ರಲ್ಲಿ ಮಂಜೂರಾದ ಎತ್ತಿನಹೊಳೆ ಯೋಜನೆ ಎಂಬ ಕಾರಣಕ್ಕೆ ಕಾಮಗಾರಿ ಕುಂಟುತ್ತಿದೆ. ಸಕಲೇಶಪುರ ತಾಲೂಕು ಹರುವನಹಳ್ಳಿವರೆಗೆ ಒಂದಿಷ್ಟು ಕೆಲಸ ಆಗಿರುವುದನ್ನು ಹೊರತುಪಡಿಸಿದರೆ ರೈತರಿಗೆ ಭರವಸೆ ನೀಡಿ ಸ್ವಾಧೀನಪಡಿಸಿಕೊಂಡ ಭೂಮಿಗೆ ನಯಾಪೈಸೆ ಪರಿಹಾರ ನೀಡಿಲ್ಲ,'' ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

''ಈ ಯೋಜನೆ ಬೇಲೂರು, ಅರಸೀಕೆರೆ ಮಾರ್ಗವಾಗಿ ಹೋಗದೆ ಹೊಳೆನರಸೀಪುರ ಮಾರ್ಗವಾಗಿ ಹೋಗಿದ್ದರೆ ಇಷ್ಟರಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ ರಾಜಕೀಯ ಕಾರಣದಿಂದ ಯೋಜನೆ ವೇಗ ಪಡೆದುಕೊಂಡಿಲ್ಲ,'' ಎಂದು ದೂರಿದರು.

''ಎತ್ತಿನಹೊಳೆ ಕಾಮಗಾರಿ ಮಂಜೂರಾತಿ ವೇಳೆ 13 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈಗಾಗಲೇ 3 ಸಾವಿರ ಕೋಟಿ ಹಣ ಯೋಜನೆ ಅನುಷ್ಠಾನಕ್ಕೆ ಖರ್ಚು ಮಾಡಲಾಗಿದೆ. ಅದರೂ ಕಾಮಗಾರಿ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲಾ,'' ಎಂದರು.

''ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತ ಕೂಡ ಆಸಕ್ತಿ ತೋರಿಲ್ಲ. ನೂತನ ಜಿಲ್ಲಾಧಿಕಾರಿಗಳಾದರೂ ಇತ್ತ ಗಮನ ನೀಡಿ ಸರಕಾರಿ ಮತ್ತು ಖಾಸಗಿ ಭೂಮಿಯ ಸರ್ವೆ ಮಾಡಿಸಿ ರೈತರಿಗೆ ನ್ಯಾಯ ಒದಗಿಸಬೇಕು,'' ಎಂದು ಒತ್ತಾಯಿಸಿದರು.

''ಕಾಮಗಾರಿ ಯೋಜನಾ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ಜಿಲ್ಲಾಡಳಿತವೂ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲಾ,'' ಎಂದು ಆರೋಪಿಸಿದರು.

''ಎತ್ತಿನ ಹೊಳೆ ಕಾಮಗಾರಿ ಕೇವಲ ಕಮೀಷನ್‌ಗೆ ಯೋಜನೆ ಜಾರಿ ಮಾಡಲಾಗಿದೆ ಎಂದು ಆರೋಪಿಸಿ ಹಿಂದಿನ ಸರಕಾರ ಈ ಯೋಜನೆ ಕುಂಠಿತಕ್ಕೆ ಕಾರಣವಾಯಿತು. ಅಭಿವೃದ್ಧಿ ಹರಿಕಾರರಿಗೆ ಕೇವಲ ರಸ್ತೆ, ಕಟ್ಟಡ ಬೇಕೆ ಹೊರತು ಕುಡಿಯುವ ನೀರಿನ ಯೋಜನೆ ಬೇಕಿಲ್ಲ,'' ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣನ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಿಸಿದರು.

''ಹಾಸನದ ರಸ್ತೆಗಳನ್ನು ಎರಡು ದಿನದಲ್ಲಿ ಅಗಲೀಕರಣ ಮಾಡಲು ಇರುವ ಮನಸ್ಸು ಎತ್ತಿನಹೊಳೆ ಯೋಜನೆ ಜಾರಿಗೆ ಇರಲಿಲ್ಲ. ಮೈತ್ರಿ ಆಡಳಿತಾವಧಿಯಲ್ಲೇ ಎತ್ತಿನಹೊಳೆ ಯೋಜನೆ ನನೆಗುದಿಗೆ ಬಿದ್ದಿದೆ. ನೀರಾವರಿ ಸಚಿವರು ನಮ್ಮವರೇ ಇದ್ದರೂ ಅವರ ಬಲಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಇದ್ದುದರಿಂದ ಜಿಲ್ಲೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ,'' ಎಂದು ದೂರಿದರು.

''ಚುನಾವಣಾ ಮೈತ್ರಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್‌ ಹಳ್ಳ ಹಿಡಿಯಲು ಕಾರಣವಾಯಿತು. ಈ ಸಂಗತಿ ಮನಗಂಡೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದೆವು ಹೊರತು ನಾನ್ಯಾವತ್ತು ಒಪ್ಪಿರಲಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಒಲ್ಲದ ಮನಸ್ಸಿನಿಂದಲೇ ಸಮ್ಮಿತಿಸಿದ್ದೆವು,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿ ಇಡಿ ವಿಚಾರಣೆಗೆ ಒಳಪಡಿಸಿರುವುದು ರಾಜಕೀಯ ಷಡ್ಯಂತ್ರವಾಗಿದೆ,'' ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ