ಆ್ಯಪ್ನಗರ

ಕಾಫಿ ಬೆಳೆಗಾರರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನೀಡಿ

ಅರಕಲಗೂಡು: ರಾಜ್ಯ ಸರಕಾರ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು ಎಂದು ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್‌ ಆಗ್ರಹಿಸಿದರು.

Vijaya Karnataka 15 Mar 2019, 5:00 am
ಅರಕಲಗೂಡು: ರಾಜ್ಯ ಸರಕಾರ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು ಎಂದು ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್‌ ಆಗ್ರಹಿಸಿದರು.
Vijaya Karnataka Web demand give free power suplly to coffice cropers
ಕಾಫಿ ಬೆಳೆಗಾರರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನೀಡಿ


ಗುರುವಾರ ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮಾಗೋಡು ಗ್ರಾಮದಲ್ಲಿ ತಾಲೂಕು ಕಾಫಿಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1.50 ಲಕ್ಷ ಮಂದಿ ನೋಂದಾಯಿತ ಕಾಫಿ ಬೆಳೆಗಾರರು ಕಾಫಿ ಕೃಷಿಯನ್ನು ಪ್ರಮುಖವಾಗಿ ಕೈಗೊಂಡಿದ್ದಾರೆ. ಇದರೊಂದಿಗೆ ಇನ್ನಷ್ಟು ಮಂದಿ ಬೆಳೆಗಾರರು ಇದ್ದಾರೆ. ಇತ್ತೀಚಿನ ಬೆಳೆ, ಬೆಲೆ ವೈಫಲ್ಯದಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ಇತರೆ ಕೃಷಿಕರ ನೆರವಿಗೆ ಬರುವ ರೀತಿಯಲ್ಲಿ ಬೆಳೆಗಾರರ ಹಲವು ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಹೆಚ್ಚುಮಂದಿ ಕಾಫಿಬೆಳೆಗಾರರು ಇದ್ದಾರೆ. ಅರ್ಧ ಎಕರೆಯಿಂದ ನೂರಾರು ಎಕರೆಯಲ್ಲಿ ಕಾಫಿ, ಕಾಳು ಮೆಣಸು, ಏಲಕ್ಕಿ, ಅಡಿಕೆ ಬೆಳೆಯನ್ನು ಕೈಗೊಂಡಿದ್ದಾರೆ. 22ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕಾಫಿಯನ್ನು ಹೊರತುಪಡಿಸಿ ಉಳಿದೆಲ್ಲ ರೈತರಿಗೆ ಉಚಿತವಾಗಿ ವಿದ್ಯುತ್‌ ಸೌಲಭ್ಯವನ್ನು ಸರಕಾರಿ ಕಲ್ಪಿಸುತ್ತಿದೆ. ಆದರೆ, ಅರ್ಧ ಎಕರೆ ಕಾಫಿಯನ್ನು ಹೊಂದಿರುವ ಬೆಳೆಗಾರರ ವಿದ್ಯುತ್‌ ಶುಲ್ಕ ಪಾವತಿಸಬೇಕಿದೆ. ಇತ್ತೀಚಿನ ಬೆಲೆ ಇಳಿಕೆ, ಆನೆಗಳ ಹಾವಳಿ, ಕಾರ್ಮಿಕರ ಸಮಸ್ಯೆ, ಅತಿವೃಷ್ಟಿ, ಅನಾವೃಷ್ಟಿಗೆ ಬೆಳೆಗಾರರು ಒಳಗಾಗುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಣ್ಣ, ಅತೀ ಸಣ್ಣ ಕಾಫಿ ಬೆಳೆಗಾರರಿಗೆ ಕೂಡಲೇ ಉಚಿತ ವಿದ್ಯುತ್‌ ಹಾಗೂ ದೊಡ್ಡಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಕಲ್ಪಿಸುವಂತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದರು.

ಪ್ರಪಂಚದಲ್ಲಿಯೇ ಭಾರತ ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ಇದಕ್ಕೆ ರಾಜ್ಯದ ಕೊಡುಗೆ ಅಧಿಕವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಫಿಗೆ ಬೆಲೆ ಸಿಗುತ್ತಿಲ್ಲ. ಮಿಶ್ರ ಬೇಸಾಯದಿಂದ ಬೆಳೆಗಾರರು ಉಸಿರಾಡುತ್ತಿದ್ದಾರೆ. ಪ್ರಮುಖವಾಗಿ ಕಾಳುಮೆಣಸು ಬೆಳೆಗಾರನಿಗೆ ಸಂಜೀವಿನಿಯಾಗಿತ್ತು. ಇತ್ತೀಚೆಗೆ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ದೇಶೀಯ ಮೆಣಸಿಗೆ ಬೆಲೆ ಇಳಿಕೆಯಾಗಿದೆ. ಕೂಡಲೇ ಬೆಂಬಲ ಬೆಲೆ ನೀಡುವ ಜತೆಗೆ ಆಮದು ನಿಯಮಗಳನ್ನು ಮಾರ್ಪಾಡು ಮಾಡಬೇಕು. ಸರಕಾರದ ನಿಯಮದಂತೆ ಒತ್ತುವರಿ ಲೀಸ್‌ ಪದ್ಧತಿ ಬೆಳೆಗಾರರಿಗೆ ಅನಾನೂಕೂಲವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮಾರ್ಪಾಡು ಮಾಡಬೇಕೆಂದು ಅವರು ಆಗ್ರಹಿಸಿದರು.

ಪ್ರಗತಿಪರ ಕೃಷಿಕ ಹಾಗೂ ಬೆಳೆಗಾರರ ಒಕ್ಕೂಟದ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ರೈತರು, ಬೆಳೆಗಾರರು ಸೀಮಿತ ಕೃಷಿಗೆ ಅಂಟಿಕೊಳ್ಳದೆ ಮಿಶ್ರ ಬೇಸಾಯದ ಕಡೆ ಆಸಕ್ತಿ ಹೊಂದಬೇಕಿದೆ. ಇತ್ತೀಚೆಗೆ ಪರಿಸರದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಹೊಂದಿಕೊಳ್ಳುವಂತಹ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯೊಂದಿಗೆ ಆದಾಯ ತರುವಂತಹ ಬೆಳೆಗಳ ಕಡೆ ಗಮನಹರಿಸಬೇಕಿದೆ ಎಂದರು ಹೇಳಿದರು.

ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ಮಹೇಶ್‌, ಕಾರ್ಯದರ್ಶಿ ಮುರಳೀಧರ್‌, ನಟೇಶ್‌ಕುಮಾರ್‌ ಮಾತನಾಡಿದರು. ಕಾಫಿ ಮಂಡಳಿ ಅಧಿಕಾರಿ ಡಾ.ತಂಗರಾಜು ಬೆಳೆ ಬಗ್ಗೆ ಮಾಹಿತಿ ನೀಡಿದರು. ಕಾಫಿ ಬೆಳೆಗಾರರಾದ ಮಾಗೋಡು ಬಸವರಾಜು, ವೆಂಕಟೇಶ್‌, ಅಪ್ಪಸ್ವಾಮಿ, ಕೃಷ್ಣರಾಜ್‌, ದೇವರಾಜ್‌, ವರುಣ್‌ಕುಮಾರ್‌, ದಿಲೀಪ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ