ಆ್ಯಪ್ನಗರ

ಲೋಕಸಭೆ ಚುನಾವಣೆ: ನೀತಿಸಂಹಿತೆ ಜಾರಿ, ಜಿಲ್ಲೆಯಲ್ಲಿ 20 ಚೆಕ್‌ಪೋಸ್ಟ್‌

ಕೇಂದ್ರ ಚುನಾವಣಾ ಆಯೋಗದ ಸೂಚನೆ ಅನ್ವಯ ಲೋಕಸಭೆ ಚುನಾವಣೆಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ ನೀತಿಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪ್ರತಿ ವಿಧಾನಸಭೆ ಕ್ಷೇತ್ರಗಳ ಹಂತದಲ್ಲಿ ಮಾದರಿ ನೀತಿ ಸಂಹಿತೆ ತಂಡದ ನೋಡಲ್‌ ಅಧಿಕಾರಿಗಳು, ಫ್ಲೈಯಿಂಗ್‌ ಸ್ವ್ಕಾಡ್‌ ತಂಡಗಳು, ಜಿಲ್ಲೆಯ ಗಡಿಭಾಗದಲ್ಲಿ ಕಣ್ಗಾವಲು ವಿಚಕ್ಷಣದಳ ಹಾಗೂ 20 ಚೆಕ್‌ಪೋಸ್ಟ್‌ ತೆರೆಯಲಾಗುತ್ತದೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

Vijaya Karnataka 12 Mar 2019, 5:00 am
ಹಾಸನ: ಕೇಂದ್ರ ಚುನಾವಣಾ ಆಯೋಗದ ಸೂಚನೆ ಅನ್ವಯ ಲೋಕಸಭೆ ಚುನಾವಣೆಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ ನೀತಿಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪ್ರತಿ ವಿಧಾನಸಭೆ ಕ್ಷೇತ್ರಗಳ ಹಂತದಲ್ಲಿ ಮಾದರಿ ನೀತಿ ಸಂಹಿತೆ ತಂಡದ ನೋಡಲ್‌ ಅಧಿಕಾರಿಗಳು, ಫ್ಲೈಯಿಂಗ್‌ ಸ್ವ್ಕಾಡ್‌ ತಂಡಗಳು, ಜಿಲ್ಲೆಯ ಗಡಿಭಾಗದಲ್ಲಿ ಕಣ್ಗಾವಲು ವಿಚಕ್ಷಣದಳ ಹಾಗೂ 20 ಚೆಕ್‌ಪೋಸ್ಟ್‌ ತೆರೆಯಲಾಗುತ್ತದೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.
Vijaya Karnataka Web election code of conduct came into effect
ಲೋಕಸಭೆ ಚುನಾವಣೆ: ನೀತಿಸಂಹಿತೆ ಜಾರಿ, ಜಿಲ್ಲೆಯಲ್ಲಿ 20 ಚೆಕ್‌ಪೋಸ್ಟ್‌


ಲೋಕಸಭೆ ಚುನಾವಣೆ ಅಧಿಸೂಚನೆಯನ್ನು ಮಾ.19 ರಂದು ಹೊರಡಿಸಲಿದ್ದು, ಮಾದರಿ ನೀತಿ ಸಂಹಿತೆ ಮಾ.10ರಿಂದಲೇ ಜಾರಿಯಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಪ್ರಸ್ತುತ ಪ್ರಗತಿಯಲ್ಲಿ ಇರುವ ಕಾಮಗಾರಿ ಹೊರತುಪಡಿಸಿದರೆ ಮತ್ತಿನ್ಯಾವುದೇ ಹೊಸ ಯೋಜನೆ ಅನುಷ್ಠಾನಗೊಳಿಸುವಂತಿಲ್ಲ. ಹೊಸ ಯೋಜನೆಗೆ ಟೆಂಡರ್‌ ಕರೆಯುವಂತಿಲ್ಲ ಎಂದು ಡಿಸಿ ಹೇಳಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಅಪ್ಲಿಕೇಷನ್‌ ಮೂಲಕವೂ ದೂರುಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜಕೀಯ ಪಕ್ಷಗಳು ಸಭೆ, ಸಮಾರಂಭ ಮಾಡಲು ಆಯಾ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿಯೇ ಏಕಗವಾಕ್ಷಿ ಮಾದರಿಯಲ್ಲಿ ಅನುಮತಿ ಪಡೆದುಕೊಳ್ಳಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕೆ ವಾಹನ ಬಳಕೆ ಹಾಗೂ ಹೆಲಿಕಾಫ್ಟರ್‌ ಲ್ಯಾಂಡಿಂಗ್‌ ಅನುಮತಿಯನ್ನು ಚುನಾವಣಾಧಿಕಾರಿಗಳ ಹಂತದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು.

ಕಡೂರು ಒಳಗೊಂಡಂತೆ ಹಾಸನ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 20.62 ಲಕ್ಷ ಜನಸಂಖ್ಯೆ ಹೊಂದಿದ್ದು, 16.29 ಲಕ್ಷ ಮತದಾರರು ಇದ್ದಾರೆ. 8,22,399 ಪುರುಷರು, 8,07188 ಮಹಿಳಾ ಮತದಾರರು ಇದ್ದು, ಮತದಾರರಪಟ್ಟಿಗೆ ಇನ್ನೂ ಸೇರ್ಪಡೆ ಸಾಧ್ಯತೆ ಇದೆ ಎಂದು ಹೇಳಿದರು.

ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸರಕಾರಿ ವೆಬ್‌ಸೈಟ್‌ನಲ್ಲಿ ಚುನಾಯಿತ ಜನಪ್ರತಿನಿಧಿಗಳ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ. ಸರಕಾರಿ ವಾಹನವನ್ನು ಹಿಂಪಡೆಯಲಾಗಿದೆ ಜತೆಗೆ ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳದ ಜಾಹೀರಾತು ಫಲಕ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದ ದುರುಪಯೋಗ ತಡೆಗೆ ಫ್ರೊಬೆಷನರಿ ಐಎಎಸ್‌ ಅಧಿಕಾರಿ ನಿಗಾವಹಿಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮ ತಡೆಗೆ 16 ನೋಡೆಲ್‌ ಅಧಿಕಾರಿಗಳ ನೇಮಕಗೊಂಡಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ. 261111 ತೆರೆಯಲಾಗಿದ್ದು, ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದರು.

1950 ಮಾಹಿತಿ ಕೇಂದ್ರ

ಆಯೋಗದ ನಿರ್ದೇಶನದಂತೆ ಜಿಲ್ಲಾ ಮಾಹಿತಿ ಕೇಂದ್ರ ಎಂಬ ಮತದಾರರ ಸಹಾಯವಾಣಿ 1950 ಕೇಂದ್ರ ಸ್ಥಾಪಿಸಲಾಗಿದ್ದು, ಮತದಾರರು, ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದೆ. ಮತದಾರರಪಟ್ಟಿಗೆ ಸಂಬಂಧಿಸಿದಂತೆ ಹಾಗೂ ಇತರ ಚುನಾವಣಾ ಸಂಬಂಧ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌,ಬಂಟಿಂಗ್ಸ್‌, ಚುನಾವಣಾ ಪ್ರಚಾರ ಸಾಮಗ್ರಿಗಳು ಇದ್ದಲ್ಲಿ ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

1732 ರೌಡಿಶೀಟರ್ಸ್‌

ಜಿಲ್ಲೆಯಲ್ಲಿ 1732 ಜನ ರೌಡಿಶೀಟರ್ಸ್‌ಗಳಿದ್ದು, ಚುನಾವಣೆ ವೇಳೆ ಅಹಿತಕರ ಘಟನೆಗಳಲ್ಲಿ ಪಾಲ್ಗೊಳ್ಳದಂತೆ ಆಯಾ ತಾಲೂಕು ದಂಡಾಧಿಕಾರಿ, ಎಸಿ ಎದುರು ಹಾಜರಾಗಿ ಮುಚ್ಚಳಿಕೆ ಬರೆದುಕೊಡಬೇಕಾಗಿದೆ. ಅಗತ್ಯ ಎನಿಸಿದರೆ ಆರೋಪಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಸಾಧ್ಯತೆಯೂ ಇರುತ್ತದೆ ಎಂದು ಎಸ್‌ಪಿ ಡಾ.ಪ್ರಕಾಶ್‌ಗೌಡ ಎಚ್ಚರಿಸಿದರು.

680 ತುಕಡಿ

ಶಾಂತಿಯುತ ಚುನಾವಣೆಗೆ ಕೇಂದ್ರದಿಂದ 680 ಸೇನಾ ತುಕಡಿಗಳು, ಹೊರ ಜಿಲ್ಲೆಯಿಂದಲೂ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಲೈಸೆನ್ಸ್‌ ಪಡೆದು ಬಂದೂಕು ಹೊಂದಿದವರು ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ತಂದು ಇರಿಸಬೇಕು ಎಂದರು. ಸಕಲೇಶಪುರ ಭಾಗದಲ್ಲಿ ಈ ಹಿಂದೆ ನಕ್ಸಲ್‌ ಚಲನ-ವಲನದ ಮಾಹಿತಿ ಹಿನ್ನೆಲೆಯಲ್ಲಿ 13 ನಕ್ಸಲ್‌ ಚಟುವಟಿಕೆ ಎಂದು ಗುರುತಿಸಿದ್ದು, ಬಿಗಿ ಭದ್ರತೆ ಒದಗಿಸಲಾಗುವುದು ಎಂದರು.

ನಾಮಪತ್ರ ಸಲ್ಲಿಕೆಗೆ ಮಾ.26 ರಂದು ಕೊನೆ ದಿನ

ನಾಮಪತ್ರ ಸಲ್ಲಿಕೆಗೆ ಮಾ.26 ರಂದು ಕೊನೆಯ ದಿನವಾಗಿದ್ದು, 27 ರಂದು ಪರಿಶೀಲನೆ ನಡೆಯಲಿದೆ. ಮಾ.29 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಏ.18ರಂದು ಮತದಾನ ನಡೆಯಲಿದೆ. ಮೇ 23 ರಂದು ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ