ಆ್ಯಪ್ನಗರ

ವಿದ್ಯುತ್‌, ರಸ್ತೆಸಂಪರ್ಕ ಕಡಿದುಕೊಂಡ ಮಲೆನಾಡು

ಮಲೆನಾಡಿನಲ್ಲಿ ಎಡೆಬಿಡದೆ ಕುಂಬದ್ರೋಣ ಮಳೆ ಸುರಿಯುತ್ತಿದ್ದು, ಈ ಭಾಗದಲ್ಲಿ ಅಕ್ಷ ರಶಃ ಜಲ ಪ್ರಳಯದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಆರ್ಭಟಿಸುತ್ತಿರುವ ವರುಣ, ಮತ್ತಷ್ಟು ರೌದ್ರನರ್ತನ ಮುಂದುವರಿಸಿದ್ದು, ಹೇಮಾವತಿ ನದಿ ಸೇರಿದಂತೆ ಬಹುತೇಕ ಹೊಳೆ, ಹಳ್ಳಕೊಳ್ಳಗಳು ಉಕ್ಕಿಹರಿದಿವೆ.

Vijaya Karnataka 10 Aug 2019, 5:00 am
ಸಕಲೇಶಪುರ : ಮಲೆನಾಡಿನಲ್ಲಿ ಎಡೆಬಿಡದೆ ಕುಂಬದ್ರೋಣ ಮಳೆ ಸುರಿಯುತ್ತಿದ್ದು, ಈ ಭಾಗದಲ್ಲಿ ಅಕ್ಷ ರಶಃ ಜಲ ಪ್ರಳಯದ ಪರಿಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web HSN-HSN9N2


ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಆರ್ಭಟಿಸುತ್ತಿರುವ ವರುಣ, ಮತ್ತಷ್ಟು ರೌದ್ರನರ್ತನ ಮುಂದುವರಿಸಿದ್ದು, ಹೇಮಾವತಿ ನದಿ ಸೇರಿದಂತೆ ಬಹುತೇಕ ಹೊಳೆ, ಹಳ್ಳಕೊಳ್ಳಗಳು ಉಕ್ಕಿಹರಿದಿವೆ. ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಸೇತುವೆ, ರಸ್ತೆಗಳು ಜಲಾವೃತವಾಗಿ ಅನೇಕ ಹಳ್ಳಿಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಕಳೆದ ಕೆಲ ದಿನಗಳಿಂದ ವಿದ್ಯುತ್‌, ದೂರವಾಣಿ, ಮೊಬೈಲ್‌ ಸಂಪರ್ಕವೇ ಇಲ್ಲದೆ ಕತ್ತಲೆಯಲ್ಲಿ ಮುಳುಗಿದ್ದ ಗ್ರಾಮೀಣ ಭಾಗದ ಜನರಿಗೆ, ಇದೀಗ ರಸ್ತೆ ಸಂಪರ್ಕ ಇಲ್ಲದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತಷ್ಟು ಮರಗಳು ಬುಡಮೇಲಾಗಿದ್ದು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಾದ ದೇವಾಲದಕೆರೆ, ಹೊಡಚಹಳ್ಳಿ, ಕೊಮಾರಹಳ್ಳಿ, ಬಣಾಲು, ಅತ್ತೀಬೀಡು, ಅಲುವಳ್ಳಿ, ಕಡಗರಹಳ್ಳಿ, ಕಾಡುಮನೆ, ಹೆಗ್ಗದ್ದೆ, ಮಾರನಹಳ್ಳಿ, ಹೊಂಗಡಹಳ್ಳಿ, ಜಗಾಟ, ದುದ್ದಳ್ಳಿ, ಅತ್ತಿಹಳ್ಳಿ, ವಣಗೂರು, ಹೊಸೂರು, ಉಚ್ಚಂಗಿ, ಗೊದ್ದು, ಚಂಗಡಿಹಳ್ಳಿ, ಯಸಳೂರು ಹಾಗೂ ಸುತ್ತಮುತ್ತ ಕಳೆದ 24 ಗಂಟೆಯಲ್ಲಿಯೇ ಸುಮಾರು 200ರಿಂದ 300 ಮಿ.ಮೀ. ಮಳೆಯಾದ ವರದಿಯಾಗಿದೆ. ಗುಡುಗು, ಸಿಡಿಲಿನ ಭಾರಿ ಸದ್ದು, ಬಿರುಗಾಳಿ ಸಹಿತ ಮಳೆಯ ಅಬ್ಬರದ ನಡುವೆ ಜನರು ನಲುಗಿಹೋಗಿದ್ದಾರೆ. ಯಾರೂ ಕೂಡ ಮನೆಯಿಂದ ಹೊರ ಬಾರದೆ ಇರುವ ಸ್ಥಿತಿ ನಿರ್ಮಾಣವಾಗಿದ್ದು, ತಗ್ಗು ಪ್ರದೇಶದ ಕೃಷಿ ಜಮೀನುಗಳು, ಗದ್ದೆಗಳು ಮತ್ತಷ್ಟು ಜಲಾವೃತವಾಗಿವೆ. ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ ಬೆಳೆ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ಅನೇಕ ಮನೆಗಳ ಹೆಂಚುಗಳು, ಶೀಟು ಸೇರಿದಂತೆ ಚಾವಣಿ ಹಾರಿ ಹೋದ ಬಗ್ಗೆ ವರದಿಯಾಗಿದೆ. ಪ್ರವಾಹಕ್ಕೆ ಸಿಲುಕಿ ನಾಟಿ ಮಾಡಲಾಗಿದ್ದ ಭತ್ತದ ಸಸಿಗಳು ಕೊಚ್ಚಿಹೋಗಿವೆ. ಕಾಫಿ, ಅಡಕೆ, ಮೆಣಸು, ಶುಂಠಿ ಬೆಳೆ ನಷ್ಟವಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆ ಆವರಣ, ತೋಟ, ಗದ್ದೆ ಎಲ್ಲೆಂದರಲ್ಲಿ ಭೂಮಿ ಆಳದಿಂದ ನೀರು ಬುಗ್ಗೆ(ಚಿಲುಮೆ)ಯಾಗಿ ಹೊರಬಂದು ಹೊಳೆಯಾಗಿ ಹರಿಯುತ್ತಿದೆ.

ಗುಡ್ಡ ಕುಸಿತ: ಸಕಲೇಶಪುರ ಪಟ್ಟಣ ಸಮೀಪದ ಆನೆಮಹಾಲ್‌ ಗ್ರಾಮದಲ್ಲಿ ಗುಡ್ಡವೊಂದು ಕುಸಿದ ಪರಿಣಾಮ ಸುಮಾರು 25 ಮನೆಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಗ್ರಾಮದ ಸರಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆದು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ.

ಪಟ್ಟಣದಲ್ಲಿ ಹೇಮಾವತಿ ನದಿ ನಿರಂತರವಾಗಿ ಏರಿಕೆಯಾಗುತ್ತಲೆ ಇದ್ದು, ಈಗಾಗಲೆ ಮುಳುಗಡೆಯಾಗಿರುವ ಆಜಾದ್‌ ರಸ್ತೆಯಲ್ಲಿ ಪ್ರವಾಹ ಮತ್ತಷ್ಟು ಉಲ್ಬಣಿಸಿದೆ. ಟೌನ್‌ಹಾಲ್‌ನಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ನಿರಾಶ್ರಿತರನ್ನು ಇಲ್ಲಿಗೆ ಸ್ಥಳಾಂತರವಾಗುವಂತೆ ಕೋರಲಾಗಿದೆ. ಆದರೆ ನಿರಾಶ್ರಿತರು ತಮ್ಮ ನೆಂಟರಿಷ್ಟರ ಮನೆಗಳಿಗೆ ತೆರಳಿದ್ದು, ಯಾರೂ ಕೂಡ ಈ ಕೇಂದ್ರಕ್ಕೆ ಬಂದಂತೆ ಕಾಣುತ್ತಿಲ್ಲ.

ಶಿರಾಡಿಘಾಟ್‌ ಬಂದ್‌: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನ ದೊಡ್ಡತಪ್ಪಲೆ ಸಮೀಪ ಭಾರಿ ಪ್ರಮಾಣದ ಮಣ್ಣು ಕುಸಿದು ಹೆದ್ದಾರಿ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಣ್ಣು ಕುಸಿದಿದ್ದು, ತೆರವು ಕಾರ್ಯ ಭರದಿಂದ ಸಾಗಿದೆಯಾದರೂ, ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದು ಕಾರ್ಯಾಚರಣೆಗೆ ತೊಡಕು ಉಂಟುಮಾಡಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು ಎನ್ನಲಾಗಿದೆ.

ಹೆದ್ದಾರಿಯ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಇವುಗಳ ತೆರವು ಮಾಡುವುದು ಹರಸಾಹಸದ ಕೆಲಸವಾಗಿದೆ. ಈಗಾಗಲೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಮಣ್ಣು ಹಾಗೂ ಬಂಡೆ ಕುಸಿದು ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ರೈಲು ಸಂಚಾರ ಬಂದ್‌ ಆಗಿದ್ದು, ಕರಾವಳಿ ಭಾಗದ ಜನರಿಗೆ ಈಗ ಶಿರಾಡಿ ರಸ್ತೆ ಬಂದ್‌ ಆಗಿರುವುದು ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇದೇ ಪ್ರದೇಶದಲ್ಲಿ ಮಣ್ಣು ಕುಸಿದು ಟ್ಯಾಂಕರ್‌ ಪ್ರಪಾತಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್‌ ಮೃತಪಟ್ಟಿದ್ದರು. ಈ ರಸ್ತೆ ಎಷ್ಟೇ ದುರಸ್ತಿಗೊಳಿಸಿ ಸಂಚಾರ ಪುನರಾರಂಭಗೊಳಿಸಿದರೂ, ಮಳೆ ನಿಲ್ಲದ ಹೊರತು ಯಾವುದೇ ಸಂದರ್ಭದಲ್ಲಾದರೂ ಅವಘಡ ಸಂಭವಿಸಬಹುದು ಎನ್ನುವಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ