ಆ್ಯಪ್ನಗರ

ಇಬ್ಬರನ್ನು ಬಲಿ ಪಡೆದ ಪುಂಡಾನೆ ಸೆರೆ

ಕಳೆದ ಎರಡು ವಾರಗಳಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹಾಗೂ ಕೆಲತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಅರಣ್ಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸಾಲಗಾಮೆ ಹೋಬಳಿ ಆಲದಹಳ್ಳಿ ಸಮೀಪದ ಅರಣ್ಯದಲ್ಲಿ ಭಾನುವಾರ ಸೆರೆಹಿಡಿದಿದ್ದಾರೆ.

Vijaya Karnataka 29 Jul 2019, 5:00 am
ಹಾಸನ: ಕಳೆದ ಎರಡು ವಾರಗಳಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹಾಗೂ ಕೆಲತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಅರಣ್ಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸಾಲಗಾಮೆ ಹೋಬಳಿ ಆಲದಹಳ್ಳಿ ಸಮೀಪದ ಅರಣ್ಯದಲ್ಲಿ ಭಾನುವಾರ ಸೆರೆಹಿಡಿದಿದ್ದಾರೆ.
Vijaya Karnataka Web HSN-HSN28N25


ಬೇಲೂರು ತಾಲೂಕು ಅಡಗೂರು ಆಲದಹಳ್ಳಿಯಲ್ಲಿ ಜೂ.19 ರಂದು ಜಮೀನು ಬಳಿಗೆ ತೆರಳುತ್ತಿದ್ದ ಮಹಿಳೆ ಹಾಗೂ ಜು.23 ರಂದು ಅರಣ್ಯ ಇಲಾಖೆ ವಾಚರ್‌ ಅಣ್ಣೇಗೌಡ(50)ಅವರನ್ನು ಈ ಆನೆ ಕೊಂದು ಹಾಕಿ ಆತಂಕ ಸೃಷ್ಟಿಸಿತ್ತು.

ನಗರ ಪ್ರವೇಶ: ಒಂಟಿಸಲಗ ತನ್ನ ಪುಂಡಾಟ ನಿಲ್ಲಿಸುವುದಿಲ್ಲ ಎಂಬಂತೆ ಜು.6 ರಂದು ಮುಂಜಾನೆಯೇ ನಗರದ ಹುಣಸಿನಕೆರೆಯಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಬಳಿಕ ನಿರಂತರ ಕಾರ್ಯಾಚರಣೆ ಮೂಲಕ ತಾಲೂಕಿನ ಸೀಗೆಗುಡ್ಡದ ಕಡೆಗೆ ಓಡಿಸಲಾಗಿತ್ತು.

ಮತ್ತೆ ಪ್ರತ್ಯಕ್ಷ: ಅರಣ್ಯ ಸೇರಿಕೊಂಡಿತು ಆನೆ ಎಂದುಕೊಳ್ಳುವಷ್ಟರಲ್ಲಿ ಜು.23 ರಂದು ಅಡ್ಲಿಮನೆ ರಸ್ತೆಯಲ್ಲಿ ಮುಂಜಾನೆ ಕಾಣಿಸಿಕೊಂಡು ಮತ್ತಷ್ಟು ಭಯದ ವಾತಾವರಣ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆಗೆ ಇಳಿದು ಧ್ವನಿವರ್ಧಕ, ಪಟಾಕಿಸಿಡಿಸಿ ಸೀಗೆಗುಡ್ಡದ ಕಡೆಗೆ ಓಡಿಸಿದ್ದರು. ಅಂದೇ ಸಂಜೆ ಅರಣ್ಯ ಇಲಾಖೆ ವಾಚರ್‌ ಅಣ್ಣೇಗೌಡ ಅವರನ್ನು ಈ ಆನೆ ತುಳಿದು ಸಾಯಿಸಿತ್ತು.

ಈ ಪುಂಡಾನೆಯನ್ನು ಭಾನುವಾರ ಪಳಗಿನ ಆನೆಗಳಾದ ಮತ್ತಿಗೋಡಿನಿಂದ ಆಗಮಿಸಿದ್ದ ಅಭಿಮನ್ಯು, ಕೃಷ್ಣ, ದುಬಾರೆಯಿಂದ ಆಗಮಿಸಿದ್ದ ವಿಕ್ರಂ, ಹರ್ಷ, ಅಜಯ್‌ ಆನೆಗಳ ನೆರವಿನಿಂದ ಯಶಸ್ವಿಯಾಗಿ ಸೆರೆಹಿಡಿಯಲಾಯಿತು.

ಸ್ಥಳಾಂತರ: ಸೆರೆಸಿಕ್ಕ ಆನೆಯನ್ನು ಕೊಡಗು ಜಿಲ್ಲೆ ದುಬಾರೆ ಆನೆ ತರಬೇತಿ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಡಿಎಫ್‌ಒ ಶಿವರಾಂಬಾಬು ತಿಳಿಸಿದ್ದಾರೆ.

ಸರಕಾರದಿಂದ ಅನುಮತಿ ಸಿಕ್ಕಕೂಡಲೇ ಅಭಿಮನ್ಯು ಸೇರಿ 5 ಪಳಗಿದ ಆನೆಗಳನ್ನು ಕರೆಸಿಕೊಂಡಿದ್ದ ಅರಣ್ಯ ಇಲಾಖೆ ಭಾನುವಾರ ಬೆಳಗ್ಗೆ 11ಕ್ಕೆ ಆಪರೇಷನ್‌ ಆರಂಭಿಸಿತ್ತು. ಬೇಲೂರು ತಾಲೂಕು ಆಲದಹಳ್ಳಿ ಬಳಿ ಆನೆ ಹೆಜ್ಜೆ ಗುರುತು ಹಿಡಿದು ಹಿಂಬಾಲಿಸಿ ಹೊರಟ ತಂಡ, ಬಲಿಷ್ಠ ಒಂಟಿ ಸಲಗದ ಪುಂಡಾಟಿಕೆಗೆ ಬ್ರೇಕ್‌ ಹಾಕಿತು.

ಮಹಿಳೆ ಹಾಗೂ ಅರಣ್ಯ ಇಲಾಖೆ ವಾಚರ್‌ ಸೇರಿ ಇಬ್ಬರನ್ನು ಬಲಿ ಪಡೆದಿದ್ದ ಆನೆಯನ್ನು ಈಗ ಸೆರೆ ಹಿಡಿಯಲಾಗಿದೆ. ಇದೇ ರೀತಿ ಜಿಲ್ಲೆಯ ಆಲೂರು ಮೊದಲಾದ ಕಡೆಗಳಲ್ಲಿ ಪುಂಡಾಟ ಮಾಡುತ್ತಿರುವ ಆನೆ ಸೆರೆಗೂ ಅನುಮತಿ ಕೇಳಲಾಗಿದ್ದು, ಆದೇಶ ಬಂದ ನಂತರ ಸೆರೆ ಹಿಡಿಯಲಾಗುವುದು.
- ಸಿವರಾಂ ಬಾಬು, ಡಿಎಫ್‌ಒ.

ವಲಸೆ ಬಂದಿದ್ದ ಆನೆ
ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯ ಭಾಗದಿಂದ ಬಂದು ಹಾಸನ ಹಾಗೂ ಬೇಲೂರು ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ. ಆ ಮೂಲಕ ಹಗಲು-ರಾತ್ರಿ ಇದರ ಆತಂಕದಲ್ಲೇ ದಿನ ದೂಡುತ್ತಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಟೈಮ್‌ ಲೈನ್‌
*ಬೆಳಗ್ಗೆ 11ಕ್ಕೆ ಕಾರ್ಯಾಚರಣೆ
*11.45ಕ್ಕೆ ಅರವಳಿಕೆ ಚುಚ್ಚುಮದ್ದು
*12.50ಕ್ಕೆ ಪ್ರಜ್ಞೆ ಮರುಕಳಿಸಲು ಚುಚ್ಚುಮದ್ದು ಹಾಗೂ ತಣ್ಣೀರನ್ನು ದೇಹದ ಮೇಲೆ ಸುರಿದು ತಾಪಮಾನ ತಂಪುಗೊಳಿಸಿದ್ದು.
*ಮಧ್ಯಾಹ್ನ 2.30ಕ್ಕೆ ನಾಡಿನ ಕಡೆಗೆ ಕಾಡಾನೆ ಪಯಣ
*ಪುಂಡಾಟದ ನಡುವೆ 4.15ರಿಂದ 4.30ರ ವೇಳೆಗೆ ಲಾರಿ ಏರಿದ ಆನೆ.
*ಗ್ರಾಮಸ್ಥರು, ಅಧಿಕಾರಿಗಳ ನಿಟ್ಟುಸಿರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ