ಆ್ಯಪ್ನಗರ

ಪರಿಸರ ರಕ್ಷಣೆಗೆ ಸೈಕಲ್‌ ಏರಿದ ವೈದ್ಯರು

ಸದಾ ರೋಗಿಗಳ ಆರೋಗ್ಯ ರಕ್ಷಿಸುವ ಕೈಗಳು, ವಿಶ್ವ ಭೂದಿನದ ಅಂಗವಾಗಿ ಪರಿಸರ ರಕ್ಷಣೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶ ಸಾರುವ ಮೂಲಕ ಸಾಮಾಜಿಕ ಕಳಕಳಿ ಮೆರೆದವು.

Vijaya Karnataka 26 Apr 2019, 5:00 am
ಹಾಸನ: ಸದಾ ರೋಗಿಗಳ ಆರೋಗ್ಯ ರಕ್ಷಿಸುವ ಕೈಗಳು, ವಿಶ್ವ ಭೂದಿನದ ಅಂಗವಾಗಿ ಪರಿಸರ ರಕ್ಷಣೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶ ಸಾರುವ ಮೂಲಕ ಸಾಮಾಜಿಕ ಕಳಕಳಿ ಮೆರೆದವು.
Vijaya Karnataka Web HSN-HSN25N3


ವಾಹನ ಬಿಟ್ಟು ಬನ್ನಿ ಎಂಬ ಕರೆಗೆ ಸ್ಪಂದನೆಯಾಗಿ ನಗರದ ಜನಪ್ರಿಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಶೀರ್‌ ಮತ್ತು ಅವರ ವೈದ್ಯರ ತಂಡ ತಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಪರಿಸರ ಜಾಗೃತಿಯ ಫಲಕಗಳೊಂದಿಗೆ ಅಲಂಕೃತ ಎತ್ತಿನಗಾಡಿ, ಸೈಕಲ್‌ ಏರಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದರು. ಜಿಲ್ಲಾಡಳಿತ, ಸಂಘ, ಸಂಸ್ಥೆಗಳೊಂದಿಗೆ ಕೈಜೋಡಿಸಿ ನಗರದಲ್ಲಿ ಜಾಥಾ ನಡೆಸಿದರು. ಪರಿಸರ ಸಂರಕ್ಷಣೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಪರಿಸರ ಕಲುಷಿತಗೊಂಡರೆ ಪ್ರಾಣಿ ಸಂಕುಲವಷ್ಟೇ ಅಲ್ಲ, ಮನುಷ್ಯ ಅನಾರೋಗ್ಯಕ್ಕೀಡಾಗುವುದು ನಿಶ್ಚಿತ. ಯೋಚಿಸಿ ಈಗಲಾದರೂ ಮನೆಗೊಂದು ಮರ, ಊರಿಗೊಂದು ವನ, ಕೆರೆ,ಕಟ್ಟೆ ಕಲ್ಯಾಣಿ ರಕ್ಷಿಸಿ ಎಂದು ಡಾ.ಬಶೀರ್‌ ,ಡಾ.ಅನುಪ್‌ ಕರೆನೀಡಿದರು.

ಸಾಮಾಜಿಕ ಕಳಕಳಿ

ಖಾಸಗಿ ಆಸ್ಪತ್ರೆಗಳು ಎಂದರೆ ಜನಸಾಮಾನ್ಯರ ರಕ್ತ ಹೀರುವ ಕೇಂದ್ರಗಳು ಎಂಬುದು ಜನಸಾಮಾನ್ಯರ ಭಾವನೆ. ಈ ಆರೋಪಕ್ಕೆ ವ್ಯತಿರಿಕ್ತವಾಗಿ ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪ ತೊಟ್ಟು ಹಸಿರುಭೂಮಿ ಪ್ರತಿಷ್ಠಾನದೊಂದಿಗೆ ಸೇರಿ, ಕೆರೆ, ಕಲ್ಯಾಣಿಗಳ ಪುನಶ್ಚೇತನಕ್ಕೆ ದೊಡ್ಡಮಟ್ಟದ ಆರ್ಥಿಕ ನೆರವನ್ನು ಜನಪ್ರಿಯ ಆಸ್ಪತ್ರೆ ನೀಡುತ್ತಾ ಬಂದಿದೆ. ಕೆರೆ ಮತ್ತು ಉದ್ಯಾನವನಗಳನ್ನು ದತ್ತುಪಡೆದು ಅದರ ನಿರ್ವಹಣೆ ಮಾಡುವ ಕೈಂಕರ್ಯಕ್ಕೂ ಮುಂದಾಗಿದೆ. ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ, ಬಡವರಿಗೆ ಚಿಕಿತ್ಸೆ, ರಾಜ್ಯೋತ್ಸವದಿಂದ ಹಿಡಿದು ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕವೂ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುತ್ತಿದೆ. ಈ ಕಾರ್ಯ ಜಿಲ್ಲಾಡಳಿತ ಹಾಗೂ ಸಂಘ,ಸಂಸ್ಥೆಗಳ ಪ್ರಶಂಸೆಗೂ ಪಾತ್ರವಾಗಿದೆ ಎಂದರು.

ಪರಿಸರವನ್ನು ಹಾಳು ಮಾಡಿದ್ದು ಮನುಷ್ಯ, ಅದನ್ನು ಸರಿಪಡಿಸಬೇಕಾದವರೂ ನಾವೇ, ಪರಿಸರ ಕಲುಷಿತಗೊಂಡಷ್ಟು ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿರುವುದನ್ನು ಕಂಡಿದ್ದೇವೆ ಇನ್ನೂ ಜಾಗೃತಿಗೊಳ್ಳದಿದ್ದರೆ ಅಪಾಯ ಎಂಬುದನ್ನು ಮನಗಂಡೇ ಬೀದಿಗಿಳಿದು ಜಾಗೃತಿ ಮೂಡಿಸುತ್ತಿದ್ದೇವೆ. ಭಾನುವಾರ ಬಹುತೇಕ ಸಮಯವನ್ನು ಪರಿಸರ ಸಂರಕ್ಷಣೆಗೆ ತೊಡಗಿಸಿಕೊಳ್ಳುತ್ತಿದ್ದೇವೆ. ಇದನ್ನು ಮುಂದುವರೆಸುತ್ತೇವೆ. ಈ ಕೆಲಸ ಮಾಡುವವರೊಂದಿಗೆ ಕೈಜೋಡಿಸಿ ನೆರವು ನೀಡಿದ್ದೇವೆ.
- ಡಾ.ಬಶೀರ್‌, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ