ಆ್ಯಪ್ನಗರ

ಸಾಲಮನ್ನಾ ಅವ್ಯವಹಾರ: ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ

ಜಿಲ್ಲೆಯಲ್ಲಿ ರೈತರ ಸಾಲಮನ್ನಾ ಕುರಿತಂತೆ ನಡೆದಿರುವ ಅವ್ಯವಹಾರಗಳ ಬಗ್ಗೆ ಸಹಕಾರ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಸೂಚಿಸಿದ್ದಾರೆ.

Vijaya Karnataka 21 Jul 2019, 5:00 am
ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ರೈತರ ಸಾಲಮನ್ನಾ ಕುರಿತಂತೆ ನಡೆದಿರುವ ಅವ್ಯವಹಾರಗಳ ಬಗ್ಗೆ ಸಹಕಾರ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಸೂಚಿಸಿದ್ದಾರೆ.
Vijaya Karnataka Web HSN-HSN20CRP2


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಕಾರ ಇಲಾಖೆಯ ಪ್ರಗತಿಯ ವರದಿ ಮಂಡನೆ ವೇಳೆ ಇತ್ತೀಚೆಗೆ ನಡೆದ ವಿದ್ಯಮಾನಗಳ ಬಗ್ಗೆ ಪ್ರಸ್ತಾಪ ಮಾಡಿ ಸಹಕಾರ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದರು.

ಈ ಬಗ್ಗೆ ತಾಲೂಕಿನಲ್ಲಿ ಕಳೆದೊಂದು ವಾರದಿಂದ ತೀವ್ರ ಜಟಾಪಟಿ ನಡೆಯುತ್ತಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಎಲ್ಲ ಪ್ರಾಥಮಿಕ ಸಹಕಾರ ಸಂಘಗಳಲ್ಲಿನ ವ್ಯವಹಾರಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೆ ತನಿಖೆಯ ವರದಿಯನ್ನು ತಮಗೆ ನೀಡಬೇಕೆಂದರು.

ಇದಕ್ಕೆ ದನಿಗೂಡಿಸಿದ ದಂಡಿಗನಹಳ್ಳಿ ಹೋಬಳಿ ಜಿಲ್ಲಾಪಂಚಾಯಿತಿ ಸದಸ್ಯ ಶ್ರೇಯಸ್‌ಪಟೇಲ್‌, ತಮ್ಮ ವ್ಯಾಪ್ತಿಯ ಆನೆಕೆರೆ, ಕುಂದೂರು ಸೊಸೈಟಿಗಳಲ್ಲಿ ಕಾರ‍್ಯದರ್ಶಿಗಳದ್ದೇ ಕಾರುಬಾರು ಆಗಿದೆ. ಅಲ್ಲಿನ ಅಕ್ರಮಗಳನ್ನೂ ತಪಾಸಣೆ ನಡೆಸಿ ವಾಸ್ತವಾಂಶವನ್ನು ಬೆಳಕಿಗೆ ತರಬೇಕು. ಜನಪ್ರತಿನಿಧಿಗಳೊಂದಿಗೆ ಹೇಗೆ ವರ್ತನೆ ಮಾಡಬೇಕೆಂಬುದೇ ಕಾರ‍್ಯದರ್ಶಿಗಳಿಗೆ ತಿಳಿದಿಲ್ಲ. ಕಾಂಗ್ರೆಸ್‌ ಪಕ್ಷ ದ ಕಾರ‍್ಯಕರ್ತರು ಎನ್ನುವ ಕಾರಣಕ್ಕೆ ಎಲ್ಲ ದಾಖಲಾತಿಗಳೂ ಸಮರ್ಪಕವಾಗಿದ್ದರೂ ಸಾಲ ನೀಡಲು ತಿರಸ್ಕರಿಸಿದ ಪ್ರಕರಣಗಳು ಇವೆ. ಆಡಳಿತಮಂಡಳಿ ಅನುಮೋದನೆ ನೀಡಿದೆ ಎಂದ ಮಾತ್ರಕ್ಕೆ ಯಾವ ಅರ್ಜಿಗಳು ತಿರಸ್ಕೃತಗೊಂಡಿವೆ. ಏತಕ್ಕೆ ತಿರಸ್ಕೃತಗೊಂಡಿವೆ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.

ಈ ಮಾತುಗಳಿಗೆ ಪುಷ್ಟಿ ನೀಡುವಂತೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಯರಾಂ ಮಾತನಾಡಿ, ನುಗ್ಗೇಹಳ್ಳಿ ಹೋಬಳಿಯಲ್ಲೂ ಕಾಂಗ್ರೆಸ್‌ ಕಾರ‍್ಯಕರ್ತರ ಅರ್ಜಿಗಳನ್ನು ತಡೆಹಿಡಿಯಲಾಗಿದೆ. ಎಟಿಎಂ ಕಾರ್ಡ್‌ಗಳ ನೀಡಿಕೆಯಲ್ಲೂ ಅವ್ಯವಹಾರ ನಡೆದಿದೆ. ಅಗ್ರಹಾರ ಬೆಳಗುಲಿಯಲ್ಲಿ ಅರ್ಹ ಫಲಾನುಭವಿಗೆ 90 ಸಾವಿರ ರೂ. ಸಾಲ ಮಂಜೂರಾಗಿದ್ದರೂ ಹಣ ನೀಡದೆ ಆತ ಮನೆಕಟ್ಟಲು ತನ್ನ ಜಮೀನು ಮಾರುವಂತಹ ಸನ್ನಿವೇಶ ಸೃಷ್ಟಿಮಾಡಿದ್ದಾರೆಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ 34 ಸಾವಿರ ಜನರಿಗೆ 131 ಕೋಟಿ ರೂ. ಸಾಲಮನ್ನಾ ಆಗಿತ್ತು. ಈಗ 28,648 ಫಲಾನುಭವಿಗಳಿಗೆ 171 ಕೋಟಿ ರೂ. ಮಂಜೂರಾಗಿದೆ. ತಂತ್ರಾಂಶದ ದೋಷದಿಂದ ಇನ್ನೂ 9,800 ಮಂದಿಗೆ ಬಾಕಿ ಇದೆ ಎಂದು ತಿಳಿಸಿದ ಅಧಿಕಾರಿಗಳು ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಲಾಗುವುದೆಂದರು.

ಯಾವುದೇ ತಾರತಮ್ಯವಿಲ್ಲದೆ ಸಾಲ ನೀಡಲಾಗಿದ್ದು ಕೆಲವು ಕಡೆಗಳಲ್ಲಿ ವ್ಯತ್ಯಾಸ ಆಗಿರಬಹುದು ಎಂದ ಜಿಲ್ಲಾಪಂಚಾಯಿತಿ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ ಎಲ್ಲರೂ ರೈತರೇ ಆಗಿರುವುದರಿಂದ ಅರ್ಹರಿಗೆ ಸಾಲ ನೀಡಬೇಕು. ನಿರ್ದಿಷ್ಟವಾದ ದೂರುಗಳು ಬಂದ ಕಡೆ ತಪ್ಪದೆ ತಪಾಸಣೆ ನಡೆಸಿ ಕ್ರಮಕೈಗೊಳ್ಳಬೇಕು ಎಂದರು.

ಸಿಬ್ಬಂದಿಗಳೇ ಇಲ್ಲದ ಸಿಡಿಪಿಒ ಕಚೇರಿ

ಅರಸೀಕೆರೆಯಿಂದ ನಿಯೋಜನೆಗೊಂಡಿರುವ ಸಿಡಿಪಿಒ ಶಂಕರಮೂರ್ತಿ ಇಲಾಖೆಗೆ ಪ್ರಗತಿಯ ಬಗ್ಗೆ ತಿಳಿಸುತ್ತಾ ಈ ಕಚೇರಿಗೆ ಬರಲು ಯಾರೂ ಒಪ್ಪುತ್ತಿಲ್ಲ. ಸಿಬ್ಬಂದಿ ಕೂಡ ಬರುವುದಿಲ್ಲವೆನ್ನುತ್ತಿದ್ದಾರೆ. ಕಚೇರಿಯ ತಮ್ಮ ಟೇಬಲ್‌ ಮೇಲೆ ಇದ್ದ ಕಡತಗಳೇ ಮಾಯವಾಗುತ್ತಿದ್ದು ಪೊಲೀಸರಿಗೆ ದೂರು ನೀಡುವ ಹಂತಕ್ಕೂ ಹೋಗಲಾಗಿದೆ. ಆಂತರಿಕ ದೋಷಗಳು ಬಹಳ ಇವೆ. ಸದ್ಯದಲ್ಲಿಯೇ ಹೊಸ ಅಧಿಕಾರಿಗಳು ಬಂದ ನಂತರ ಸರಿಹೋಗಬಹುದೆಂದರು.

ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳು ಕಡ್ಡಾಯವಾಗಿರಬೇಕು ಎಂದ ಅಧ್ಯಕ್ಷ ರು 500 ಕ್ಕಿಂತ ಹೆಚ್ಚಿನ ಕಾರ್ಡ್‌ಗಳು ಇರುವ ನ್ಯಾಯಬೆಲೆ ಅಂಗಡಿಗಳಿಂದ ಅವುಗಳನ್ನು ಬೇರ್ಪಡಿಸಿ ಮತ್ತೊಂದು ಅಂಗಡಿಯನ್ನು ತೆರೆಯಬೇಕು. ಕಡಿಮೆ ತೂಕ ನೀಡುತ್ತಿರುವ ಎಲ್ಲ ಕಡೆಗಳಲ್ಲೂ ಕ್ರಮವಹಿಸಬೇಕು ಎಂದರು.

ಅಂಗನವಾಡಿಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ಕರೆಮಾಡಿದರೂ ಅಧಿಕಾರಿಗಳು ಲಭ್ಯವಿರುವುದಿಲ್ಲ. ದಡಿಘಟ್ಟದಲ್ಲಿ ಅಂಗನವಾಡಿ ಶಿಕ್ಷ ಕಿ ಹಾಗೂ ಕಾರ‍್ಯಕರ್ತರ ನಡುವಿನ ಗೊಂದಲದಿಂದ ಬಾಗಿಲುಹಾಕು ತಿಂಗಳಗಳೇ ಕಳೆದಿದ್ದು ಯಾರೂ ಕ್ರಮಕೈಗೊಂಡಿಲ್ಲ. ಇದಕ್ಕೆಲ್ಲಾ ಪರಿಹಾರ ಏನೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ರಂಜಿತಾನಿಂಗೇಗೌಡ ದೂರಿದರು.

ಆರೋಗ್ಯ ಇಲಾಖೆಯ ಬಗ್ಗೆ ಚರ್ಚೆ ನಡೆಯುವ ವೇಳೆ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಯಬೇಕೆಂದು ಅಧ್ಯಕ್ಷ ರು ಸೂಚಿಸಿದ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಕಿಶೋರ್‌ಕುಮಾರ್‌ ಈ ಬಗ್ಗೆ ಬಿಗಿನಿಲುವು ತೆಗೆದುಕೊಳ್ಳಲಾಗುತ್ತಿದೆ. ಅನಧಿಕೃತ ಪ್ರಯೋಗಶಾಲೆಗಳನ್ನು ಪಟ್ಟಣದಲ್ಲಿ ಮುಚ್ಚಿಸಲಾಗಿದೆ. ಜನೌಷಧ ಮಳಿಗೆಗಳಿಂದ ಔಷಧಿಗಳನ್ನು ಖರೀದಿಸುವಂತೆ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಆಸ್ಪತ್ರೆಗಳಲ್ಲಿ ವೈದ್ಯರಿಂದ ಮೊದಲುಗೊಂಡ ಡಿ ಗ್ರೂಪ್‌ ನೌಕರರ ತನಕ ಎಲ್ಲರೂ ರೋಗಿಗಳು ಮತ್ತು ಅವರೊಂದಿಗೆ ಬರುವವರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ವೇದಿಕೆಯಲ್ಲಿದ್ದವರು ಎಚ್ಚರಿಸಿದರು.

ತೋಟಗಾರಿಕೆ ಇಲಾಖೆಯಲ್ಲಿ ಮೊದಲು ಪಾಲಿಹೌಸ್‌ಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿಮೆ ಮಾಡಿರುವುದರಿಂದ ಬೇಡಿಕೆ ಬರುತ್ತಿಲ್ಲವೆಂದು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಸತೀಶ್‌ ತಾಲೂಕಿನಲ್ಲಿ ಆಲೂಗೆಡ್ಡೆ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 6200 ರೂ. ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ 300 ಜನರಿಗೆ ಈ ಹಣ ಪಾವತಿ ಮಾಡಲಾಗಿದೆ. ಶುಂಠಿಯನ್ನು ರೈತರು ಬೆಳೆಯುವುದರಿಂದ ಪರಿಸರಕ್ಕೂ ಹಾನಿಯಾಗಲಿದ್ದು ಆರೋಗ್ಯದ ಮೇಲೂ ಪರಿಣಾಮ ಬೀರುವುದರಿಂದ ಅದಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿಲ್ಲವೆಂದರು. ಜಿಲ್ಲಾಪಂಚಾಯಿತಿ ಸದಸ್ಯೆ ದೇವಮ್ಮ, ಮಂಜುಳ ಎಂ.ಶಂಕರ್‌, ರಾಮಕೃಷ್ಣ, ತಾಪಂ ಕಾರ‍್ಯನಿರ್ವಹಣಾಧಿಕಾರಿ ಎಚ್‌.ಎಸ್‌.ವೆಂಕಟೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ