ಆ್ಯಪ್ನಗರ

ಪ್ರಾದೇಶಿಕ ಪಕ್ಷ ಸಂಘಟಿಸಿದರೆ ಸೋನಿಯಾಗೆ ಸಾಥ್

ಮುಂದಿನ ಚುನಾವಣೆ ವೇಳೆಗೆ ಪಕ್ಷ ಬಲಗೊಳಿಸಲು ಶತಾಯಗತಾಯ ಪ್ರಯತ್ನಿಸುವೆ. ಸೋನಿಯಾಗಾಂಧಿ ಪ್ರಾದೇಶಿಕ ಪಕ್ಷ ಗಳ ಉಳಿವಿನ ಭರವಸೆ ನೀಡಿದ್ದಾರೆ. ಅದರಂತೆ ರಾಷ್ಟ್ರದ ಎಲ್ಲಾ ಜಾತ್ಯತೀತ ಶಕ್ತಿಗಳು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಅವರು ಪ್ರಯತ್ನಿಸಿದರೆ ನಾವು ಕೂಡ ಸಾಥ್‌ ನೀಡಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Vijaya Karnataka 25 Aug 2019, 5:00 am
ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸಿದರೆ ಸೋನಿಯಾಗೆ ಬೆಂಬಲ
Vijaya Karnataka Web friendship to sonia if the regional party is organised
ಪ್ರಾದೇಶಿಕ ಪಕ್ಷ ಸಂಘಟಿಸಿದರೆ ಸೋನಿಯಾಗೆ ಸಾಥ್


ಹೊಳೆನರಸೀಪುರ:
ಮುಂದಿನ ಚುನಾವಣೆ ವೇಳೆಗೆ ಪಕ್ಷ ಬಲಗೊಳಿಸಲು ಶತಾಯಗತಾಯ ಪ್ರಯತ್ನಿಸುವೆ. ಸೋನಿಯಾಗಾಂಧಿ ಪ್ರಾದೇಶಿಕ ಪಕ್ಷ ಗಳ ಉಳಿವಿನ ಭರವಸೆ ನೀಡಿದ್ದಾರೆ. ಅದರಂತೆ ರಾಷ್ಟ್ರದ ಎಲ್ಲಾ ಜಾತ್ಯತೀತ ಶಕ್ತಿಗಳು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಅವರು ಪ್ರಯತ್ನಿಸಿದರೆ ನಾವು ಕೂಡ ಸಾಥ್‌ ನೀಡಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದ ರೇವಣ್ಣ ಅವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಹಿಂದೆ ಲಕ್ಷಾಂತರ ಕಾರ‍್ಯಕರ್ತರಿದ್ದಾರೆ. ರಾಷ್ಟ್ರ ರಾಜಕಾರಣ ಮಾಡಲು ಬೇರೆ ನಾಯಕರು ದಿಲ್ಲಿಗೆ ಕರೆದರೂ ಹೋಗಿಲ್ಲ. ಕಾಶ್ಮೀರಕ್ಕೆ ರಾಹುಲ್‌ಗಾಂಧಿ ಕರೆದಿದ್ದರು. ಆದರೆ ಹೋಗಲಾಗಿಲ್ಲ. 15 ದಿನಗಳಿಂದ ಪಕ್ಷ ದ ಕಚೇರಿಯಲ್ಲಿ ಇದ್ದೇನೆ. ಪ್ರತಿ ಜಿಲ್ಲೆಯ ಕಾರ‍್ಯಕರ್ತರು ಬೇರುಮಟ್ಟದಲ್ಲಿ ಪಕ್ಷ ದ ಬಲವರ್ಧನೆಗೆ ಶ್ರಮಿಸಿದ್ದಾರೆ. ಇದನ್ನು ಗುರುತಿಸಿದ್ದೇನೆ. ಜೆಡಿಎಸ್‌ ಅಧ್ಯಕ್ಷ ರಾಗಿದ್ದ ವಿಶ್ವನಾಥ್‌ ಬಿಟ್ಟುಹೋದ ಮೇಲೆ 6 ಬಾರಿ ಶಾಸಕರಾಗಿರುವ ಎಚ್‌.ಕೆ.ಕುಮಾರಸ್ವಾಮಿ ಅವರನ್ನ್ನು ರಾಜ್ಯಾಧ್ಯಕ್ಷ ರಾಗಿ ಮಾಡಲಾಗಿದ್ದು, ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ನನ್ನ ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ದ ಉಳಿವಿಗೆ ಪ್ರಯತ್ನಿಸುವೆ. ನನಗೆ ದೈವಾನುಗ್ರಹವಿದೆ. ಇದರಿಂದಾಗಿಯೇ ನನ್ನ ಪ್ರಯತ್ನ ನಾನು ನಡೆಸಿದ್ದೇನೆ,'' ಎಂದರು.

ಅಭಿವೃದ್ಧಿ ಕೆಲಸ ಮಾಡಲಿ: ''ಸರಕಾರ 3 ವರ್ಷ 8 ತಿಂಗಳು ಪೂರೈಸಬಹುದು. ನಮ್ಮ ತಕರಾರು ಇಲ್ಲ. ಒಳ್ಳೆಯ ಕೆಲಸ ಮಾಡಿದ್ರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗೆ ಹೋರಾಡುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿಯದ್ದೇ ಸರಕಾರ ಇರುವ ಕಾರಣ ಸಾಕಷ್ಟು ಅಭಿವೃದ್ಧಿ ಮಾಡಲಿ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನುವ ಭರವಸೆ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ನಾನು ಬರ ಪರಿಹಾರಕ್ಕಾಗಿ ಅವರ ಬಳಿ ರೈತರ ನಿಯೋಗವನ್ನು ಕರೆದುಕೊಂಡು ಹೋಗಿದ್ದೆ. ವಿಧಾನಸಭೆ, ಲೋಕಸಭೆಯಲ್ಲಿ ಅಧಿಕಾರವಿದ್ದರೂ, ಇಲ್ಲದಿದ್ದರೂ ನಾನು ನನ್ನ ರಾಜಕಾರಣ ನಡೆಸುತ್ತಿದ್ದೇನೆ. ಪ್ರಧಾನಿಯಾಗಿದ್ದಾಗ, ಸಿಎಂ ಆಗಿದ್ದಾಗ ನಾನೇನು ಜನಪರ ಕಾರ್ಯ ಮಾಡಿದ್ದೇನೆ ಎಂಬ ಅರಿವು ಜನರಲ್ಲಿದೆ,'' ಎಂದು ಹೇಳಿದರು.

ಸೋಲಿಗೆ ಧೃತಿಗೆಟ್ಟಿಲ್ಲ: ''ಹಾಸನದಲ್ಲಿ 5 ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದೇನೆ. ನೀವು ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು. ಆದರೆ ಕೆಲವೊಮ್ಮೆ ವಿಧಿ ನಮ್ಮ ಕೈಯಲ್ಲಿ ಇರೋದಿಲ್ಲ. ಮಹಾಭಾರತದಲ್ಲಿ ಧರ್ಮರಾಯ ಮೋಸ ಆಗುವುದೆಂದು ಗೊತ್ತಿದ್ದೂ ಜೂಜಿನಲ್ಲಿ ಸೋತ,'' ಎಂದು ತುಮಕೂರಿನಲ್ಲಿ ಆದ ಸೋಲಿನ ಬಗ್ಗೆ ವಿಶ್ಲೇಷಿಸಿದರು.

''ನಾನು ಪತ್ರಿಕೆಯೊಂದರಲ್ಲಿ ಕೊಟ್ಟ ಹೇಳಿಕೆ ಕುರಿತು ಈಗ ನಾನು ಮಾತನಾಡುವುದಿಲ್ಲ. ಜನರ ಬಳಿಗೆ ಹೋಗೋಣ. ಅವರೇ ಎಲ್ಲವನ್ನೂ ತೀರ್ಮಾನ ಮಾಡ್ತಾರೆ,'' ಎಂದು ವಿಚಾರ ತಳ್ಳಿಹಾಕಿದರು. ನಂತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ''ನಾನು ಯಾರನ್ನೂ ನಿಂದನೆ ಮಾಡಲ್ಲ. ನನಗೆ ಪಕ್ಷ ಕಟ್ಟುವುದು ದೊಡ್ಡ ವಿಚಾರ,'' ಎಂದರು.

''ನನ್ನ ಪಕ್ಷ ದ ಕಾರ‍್ಯಕರ್ತರ ಬಗ್ಗೆ ಭರವಸೆ ಇದೆ. ರೇವಣ್ಣ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ನಿಖಿಲ್‌ ಸಹ ನೆರೆ ಸಂತ್ರಸ್ತರ ನೆರವಿಗೆ ಕೆಲಸ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನನ್ನ ಕುಟುಂಬ ಜನಪರ ಕೆಲಸ ಮಾಡಲು ಸಿದ್ಧವಿರುತ್ತದೆ,'' ಎಂದು ಹೇಳಿದರು.

ಜೆಟ್ಲಿ ನಿಧನಕ್ಕೆ ಸಂತಾಪ: ''ರಾಷ್ಟ್ರ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ. ಅವರು ಯಾವುದೇ ಪಕ್ಷ ವಾಗಿರಲಿ. ಗುಣಕ್ಕೆ ಮತ್ಸರವಿಲ್ಲ. ಅರುಣ್‌ ಜೇಟ್ಲಿ ಅವರು ಮಂತ್ರಿಯಾಗಿ, ಹಲವಾರು ಇಲಾಖೆಗಳಲ್ಲಿ ಜವಾಬ್ದಾರಿ ವಹಿಸಿ ಕೆಲಸ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬವರ್ಗಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ,'' ಎಂದರು.

-------------

370 ವಿಧಿ ರದ್ದು: ಜನರ
ವಿಶ್ವಾಸ ಪಡೆಯಬೇಕಿತ್ತು


''ಶಾಸಕರನ್ನು ಅನರ್ಹ ಮಾಡಿದ್ಯಾರು? ಸುಪ್ರೀಂ ಕೋರ್ಟ್‌ ತೀರ್ಪು ನೀಡುತ್ತದೆ. ಕೇಂದ್ರ ಸರಕಾರ ಕೊಡಿಸುತ್ತದೆ,'' ಎಂದು ದೇವೇಗೌಡ ಆರೋಪಿಸಿದರು.

''ಮುಂದಿನ ಚುನಾವಣೆ ಬಗ್ಗೆ ನನ್ನ ಗಮನವಷ್ಟೇ. ಕಳೆದ ಚುನಾವಣೆಯಲ್ಲಿ ಆರ್ಥಿಕ ಪೆಟ್ಟು ಬಿದ್ದಿದೆ. ಜನಗಳ ಸಹಕಾರದಿಂದ ಮತ್ತೆ ಚುನಾವಣೆ ಎದುರಿಸುತ್ತೇನೆ. ಕಾಶ್ಮೀರ ಸಮಸ್ಯೆ ಪರಿಹರಿಸಲು ಜನರ ವಿಶ್ವಾಸ ಗಳಿಸಿಯೇ 370ರ ವಿಧಿ ರದ್ದುಗೊಳಿಸಬಹುದಿತ್ತು. ಆಗ ಇಷ್ಟು ಟೆನ್ಷನ್‌ ಎದುರಿಸಬೇಕಾಗಿರಲಿಲ್ಲ. ಬಹುತೇಕ ರಾಷ್ಟ್ರಗಳು ಮೋದಿ ನಡೆಯನ್ನು ಒಪ್ಪಿವೆ. ಆದರೆ ಕಾಶ್ಮೀರದಲ್ಲಿ ಈಗಲೂ ಜನಜೀವನ ಸುಗಮವಾಗಿಲ್ಲ. ನಾನು ಪಿಎಂ ಆಗಿದ್ದಾಗ ಹಿಂದಿನ ಹತ್ತು ವರ್ಷಗಳ ಕಾಲ ಯಾರೂ ಹೋಗಿರಲಿಲ್ಲದಾಗ ನಾನು ಹೋಗಿದ್ದೆ. ಇದರಿಂದ ಅಲ್ಲಿಯ ಜನರ ವಿಶ್ವಾಸ ಪಡೆದೇ ನಿರ್ಣಯ ತೆಗೆದುಕೊಳ್ಳಬಹುದಿತ್ತು ಎನ್ನುವುದು ನನ್ನ ಅಭಿಪ್ರಾಯ,'' ಎಂದರು.

ಶ್ರೀರಂಗನಾಥಸ್ವಾಮಿಗೆ ವಿಶೇಷ ಪೂಜೆ

ತಾಲೂಕಿನ ಮಾವಿನಕೆರೆ ಗ್ರಾಮದ ಬೆಟ್ಟದ ಮೇಲಿನ ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ಶ್ರಾವಣ ಮಾಸದ ಕಡೇ ಶನಿವಾರ ಶಾಸಕ, ಪುತ್ರ ಎಚ್‌.ಡಿ.ರೇವಣ್ಣ, ಮೊಮ್ಮಗ ಡಾ.ಸೂರಜ್‌ ಅವರೊಂದಿಗೆ ಆಗಮಿಸಿ ಅಭಿಷೇಕ, ಪೂಜೆ ನಂತರ ದೇವರ ದರ್ಶನ ಪಡೆದರು. ಬಳಿಕ ಪಟ್ಟಣದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ