ಹಾಸನ:ಕೇಂದ್ರ ಸರಕಾರದ ತಾತ್ವಿಕ ಒಪ್ಪಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ವಿಮಾನ ನಿಲ್ದಾಣದ ಕನಸು ಮಗದೊಮ್ಮೆ ಗರಿಗೆದರಿದೆ.
ಯೋಜನೆಗೆ ಶಂಕುಸ್ಥಾಪನೆ ನೆರವೇರಿ ಹತ್ತುವರ್ಷ ಕಳೆದರೂ ಕಾಮಗಾರಿ ಪ್ರಾರಂಭಗೊಳ್ಳದೆ ಯೋಜನೆ ಮೂಲೆ ಗುಂಪಾಗಿತ್ತು. ಜಿಲ್ಲೆಯ ಜನರು ಬಾನಂಗಳದಲ್ಲಿ ಲೋಹದ ಹಕ್ಕಿ ಹಾರಾಡುವ ಕನಸು ಕಾಣುವುದನ್ನು ಕೈಬಿಟ್ಟಿದ್ದರು. ಇದೀಗ ಕೇಂದ್ರ ಸರಕಾರ ಹಾಸನ ಸೇರಿದಂತೆ ದೇಶದ 19 ಸ್ಥಳದಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ನೀಡುವ ಮೂಲಕ ಯೋಜನೆಗೆ ಮುಂದಾಗಿರುವುದು ಮರುಜೀವ ನೀಡಿದಂತಾಗಿದೆ.
ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಹುದ್ದೆ ಅಲಂಕರಿಸಿದಾಗ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಅವರ ಕನಸು ಈಡೇರುವ ಹೊತ್ತಿಗೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಹಾಗಾಗಿ ವಿಮಾನ ನಿಲ್ದಾಣದ ಕನಸು ಗರಿಗೆದರುವ ಮುನ್ನವೇ ಮುದುರಿತ್ತು.
ಇಷ್ಟಾದರೂ ದೇವೇಗೌಡರು ಛಲ ಬಿಡದಂತೆ ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದರು. ಈ ಕುರಿತು ಗಂಭೀರ ಚರ್ಚೆಗಳು ನಡೆಯದೆ ರಾಜ್ಯ ಹಾಗೂ ಕೇಂದ್ರದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಯೋಜನೆ ಪುನರಾರಂಭಗೊಳ್ಳುವುದು ಅನುಮಾನವಾಗಿ ಉಳಿದಿತ್ತು.
ಹಿನ್ನೆಲೆ: 1200 ಕೋಟಿ ವೆಚ್ಚದ ಯೋಜನೆಗೆ ಸಂಸದ ಹಾಗೂ ಜ್ಯುಪಿಟರ್ ಏವಿಯೇಷನ್ ಮಾಲೀಕ ರಾಜೀವ್ಚಂದ್ರಶೇಖರ್ ಅವರನ್ನು 2007ರ ಆ.26ರಂದು ನಗರಕ್ಕೆ ಕರೆಸಿ ಬೂವನಹಳ್ಳಿ ಬಳಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜತೆಗೆ ವಿಮಾನ ದುರಸ್ತಿ ಹಾಗೂ ತರಬೇತಿ ಕೇಂದ್ರ, ಗಾಲ್ಫ್ ಮೈದಾನ ಕೇವಲ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು.
ಶಂಕುಸ್ಥಾಪನೆಗೊಂಡ ಸ್ಥಳದ ಸುತ್ತ ಫೆನ್ಸಿಂಗ್ ಹಾಕಿದ್ದು ಬಿಟ್ಟರೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಲಿಲ್ಲ. ನಿಲ್ದಾಣದ ಕಾಮಗಾರಿ ಇರಲಿ, ವಿದ್ಯುತ್ ಕಂಬ ಸ್ಥಳಾಂತರಿಸುವ ಗುತ್ತಿಗೆ ಪಡೆದ ಟ್ರಾನ್ಸ್ಗ್ಲೋಬಲ್ ಫೆರೆಕ್ಸ್ ಇಂಡಿಯಾ ಲಿ. 2008ರ ಮಾರ್ಚ್ಗೆ ಪೂರ್ಣಗೊಳಿಸುವ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಆಗಸ್ಟ್ಗೆ ಪೂರ್ಣಗೊಳಿಸುವುದಾಗಿ ತಿಳಿಸಿ ಈವರೆಗೆ ಪೂರ್ಣಗೊಳಿಸಿಲ್ಲ.
ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ವಹಿಸಲು ಯಡಿಯೂರಪ್ಪ ನೇತೃತ್ವದ ಸರಕಾರ ತೀರ್ಮಾನ ಕೈಗೊಂಡು ವರ್ಷವಾದರೂ, ಇತ್ತ ಯಾರೊಬ್ಬರೂ ಸುಳಿದಿಲ್ಲ. ಅಭಿವೃದ್ಧಿಗೆ ಚಾಲನೆ ದೊರೆತಿಲ್ಲ.
ನೂರೆಂಟು ವಿಘ್ನ:
ವಿಘ್ನೇಶ್ವರನ ಮದುವೆಗೆ ನೂರೆಂಟು ವಿಘ್ನ ಎಂಬಂತೆ ಯೋಜನೆಗೆ ಒಟ್ಟು 982 ಎಕರೆ ಜಮೀನು ಅಗತ್ಯವಿದೆ. 536 ಎಕರೆ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿಗೆ ಹಣ ಪಾವತಿಸಲಾಗಿದೆ.
ಸ್ವಾಧೀನಪಡಿಸಿಕೊಂಡ 536.24 ಎಕರೆ ಜಮೀನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸಂಪರ್ಕ ರಸ್ತೆ ಮತ್ತಿತರ ಉದ್ದೇಶಕ್ಕೆ 144.28 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಗುತ್ತಿಗೆ ಕಂಪನಿಗೆ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಎಲ್ಲ ಪ್ರಕ್ರಿಯೆ ಪ್ರಸ್ತುತ ನನೆಗುದಿಗೆ ಬಿದ್ದಿತ್ತು. ಇದೀಗ ಮಗದೊಮ್ಮೆ ಆಸೆ ಟಿಸಿಲೊಡೆದಿದೆ.
-----------
(ಫೋಟೋ ಇದೆ)
*ವಿಮಾನನಿಲ್ದಾಣ ಸ್ಥಾಪನೆ ಆದರೆ ವಿಶೇಷ ಆರ್ಥಿಕವಲಯಕ್ಕೆ ನವಚೈತನ್ಯ ಬಂದಂತಾಗುತ್ತದೆ.
*ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಿ ಹೋಗುತ್ತದೆ.
*ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒತ್ತಡವನ್ನು ಒಂದಷ್ಟು ಕಡಿಮೆ ಮಾಡಲು ಸಾಧ್ಯ.
*ಕೃಷಿ ಪದಾರ್ಥಗಳನ್ನು ಇಲ್ಲಿಂದ ನೇರವಾಗಿ ವಿದೇಶಕ್ಕೆ ರಫ್ತುಮಾಡಲು ಸಹಾಯವಾಗುತ್ತೆ.
*ಸಾವಿರಾರು ನಿರುದ್ಯೋಗಿಗಳಿಗೆ ಒಂದಿಷ್ಟು ಉದ್ಯೋಗವಕಾಶ ಲಭ್ಯವಾಗುತ್ತದೆ.