ಆ್ಯಪ್ನಗರ

ಮಳೆ: ಕೆರೆ ಕಟ್ಟೆಗಳಿಗೆ ಬಂತು ನೀರು

ದಶಕಗಳ ನಂತರ ಕಳೆದ ಎರಡು ದಿನಗಳಿಂದ ನಗರ ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬರಿದಾಗಿದ್ದ ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ.

Vijaya Karnataka Web 11 Sep 2017, 5:14 am

ಅರಸೀಕೆರೆ: ದಶಕಗಳ ನಂತರ ಕಳೆದ ಎರಡು ದಿನಗಳಿಂದ ನಗರ ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬರಿದಾಗಿದ್ದ ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ.

ನಿರಂತರವಾಗಿ ವರುಣನ ಅವಕೃಪೆಗೆ ಒಳಗಾಗಿದ್ದ ತಾಲೂಕು ಬರದ ಕೆನ್ನಾಲಿಗೆಗೆ ಸಿಲುಕಿ ನಲುಗಿ ಹೋಗಿತ್ತು. ಕೆರೆ ಕಟ್ಟೆಗಳು ಬತ್ತಿ ಹೋಗಿದ್ದವು. ಅಂತರ್ಜಲ ಮಟ್ಟ ಪಾತಾಳ ಸೇರಿತ್ತು. ಕಳೆದ ಎರಡು ಮೂರು ದಿನಗಳಿಂದ ನಗರ ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಸಣ್ಣಪುಟ್ಟ ಹಳ್ಳ ಕೊಳ್ಳಗಳು ತುಂಬಿದರೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ.

ರಾಗಿ, ಉಚ್ಚೆಳ್ಳು, ಹುರುಳಿ, ಸಾವೆ, ಹೆಸರುಕಾಳು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳಿಗೆ ಮಳೆಯಾಗಿದದ್ದು ಬಾಡುತ್ತಿದ್ದ ಬೆಳೆಗೆ ಹದವಾಗಿದೆ. ವರುಣನ ದಯೆ ಇದೇ ರೀತಿ ಒಂದೆರೆಡು ವಾರ ಮುಂದುವರೆದರೆ ಕೆಲ ತಿಂಗಳು ನೀರು, ಮೇವಿಗೆ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗಿಗೆ ನೀರಿಲ್ಲದೆ ಮರಗಳು ಒಣಗುತ್ತಿದ್ದವು. ಈಗ ಮಳೆಯಾಗುತ್ತಿರುವುದು ಮರಗಳಿಗೆ ಸಂಜೀವಿನಿಯಾಗಿದೆ ಎಂಬುದು ರೈತರ ನಿಟ್ಟುಸಿರು.

ನಗರ ಪ್ರದೇಶದಲ್ಲಿ ಹಳೆಯ ಕಟ್ಟಡಗಳು ಕುಸಿದರೆ, ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ಥವಾಗಿದೆ. ಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಮಳೆಯ ರಭಸಕ್ಕೆ ಕೊಚ್ಚಿಕೊಂಡು ರಸ್ತೆಯ ಮೇಲೆ ಹರಿಯುತ್ತಿದೆ. ನಗರದ ಜನತೆ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿಹೋಗಿರುವುದರಿಂದ ರಸ್ತೆಯ ಮೇಲೆ ಒಳಚರಂಡಿ ನೀರು ಹರಿಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಇದು ನಗರಸಭೆಗೆ ಇದು ತಲೆನೋವಾಗಿ ಪರಿಣಮಿಸಿದೆ.

ನಗರದ ಗಾಣಿಗರ ಬೀದಿಯಲ್ಲಿರುವ ನಿವೇದಿತ ಆಂಗ್ಲಶಾಲೆಯ ಹಳೆಯ ಕಟ್ಟದ ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ