ಚನ್ನರಾಯಪಟ್ಟಣ: ಬಾಲ್ಯದಲ್ಲಿಯೇ ಮಕ್ಕಳು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಂಸ್ಕಾರವಂತರಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಪೀಠಾಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ಮುಕ್ತಾಯಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಇದಕ್ಕೆ ಮಕ್ಕಳ ಸಾಹಿತ್ಯ ಪರಿಷತ್ ಉತ್ತಮ ವೇದಿಕೆಯಾಗಿದ್ದು ಆಸಕ್ತರಿಗೆ ಪ್ರೇರಣೆ ನೀಡುತ್ತಿದೆ. ಯುವ ಪೀಳಿಗೆ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನೆಗೊಂದು ಪುಟ್ಟ ಗ್ರಂಥಾಲಯ ಇಟ್ಟುಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸಿ ಇಟ್ಟುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶುದ್ಧ ಕನ್ನಡದಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಾರಂಭದಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಾಗಲಿದ್ದು ಅನೇಕ ಯುವಪ್ರತಿಭೆಗಳು ಬೆಳಕಿಗೆ ಬರಲಿವೆ. ಇಂಗ್ಲಿಷ್ ಉದ್ಯೋಗದ ಭಾಷೆಯಾಗಿದ್ದು ಎಲ್ಲರೂ ಅದರತ್ತ ಮುಖ ಮಾಡುವಂತಾಗಿದೆ. ಆದರೆ, ಕನ್ನಡ ಭಾಷೆಯೂ ಅಷ್ಟೇ ಪ್ರಭಾವಿಯುತವಾಗಿದ್ದು ಭಾಷೆಯ ಉಳಿವಿಗೆ ಮಕ್ಕಳೇ ಪ್ರತಿಜ್ಞೆ ಮಾಡಬೇಕು. ಮಾತೃಭಾಷೆ ನಮ್ಮ ಜೀವನ ಎಂಬುದನ್ನು ಮರೆಯಬಾರದು. ಇಲ್ಲಿ ಭಾಗವಹಿಸಿರುವ ಮಕ್ಕಳೆಲ್ಲರೂ ಭಾಗ್ಯವಂತರು ಎಂದರು.
ಆದಿಚುಂಚನಗಿರಿ ಹಾಸನ ಶಾಖಾಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ, ನಾಡಿನಲ್ಲಿ ಎಲ್ಲ ಭಾಷೆಗಳಿಗೂ ಮೂಲವಾಗಿ ಕನ್ನಡ ಭಾಷೆಯನ್ನು ಕಲಿಯಬೇಕು. ಸಂಸ್ಕಾರವಂತರಾಗಿ ಪರಿಶುದ್ಧವಾದ ಭಾವನೆಗಳು ನಮ್ಮಲ್ಲಿ ಮೂಡಿದಾಗ ಸಾಹಿತ್ಯದ ರಚನೆ ಸುಲಲಿತವಾಗುತ್ತದೆ. ಆಸಕ್ತ ಮಕ್ಕಳಿಗಾಗಿ ಕುವೆಂಪು ಅವರ ಹುಟ್ಟೂರಿನಲ್ಲಿ ಪರಿಷತ್ತಿನ ವತಿಯಿಂದ ಕನ್ನಡದ ಕಮ್ಮಟ ನಡೆಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದೆ. ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುವ ವೇದಿಕೆ ನಿರ್ಮಾಣ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಭವಿಷ್ಯ ಭಾರತದ ನಿರ್ಮಾತೃಗಳಾದ ಯುವಪೀಳಿಗೆ ರಾಷ್ಟ್ರಭಕ್ತಿ ಹಾಗೂ ಸ್ವಾಭಿಮಾನವನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆಗಳಾದ ಭೂಮಿಕಾ ಎಸ್.ತಗಡೂರು, ಸಿ.ಎಚ್.ಭೂಮಿಕಾ, ಎಂ.ಹಿತೇಶ್, ಶೃಜನ್ ಪಿ., ಬಿ.ಯು.ಭವ್ಯ, ರುಜುಲಾ, ಅಜಿತ್, ಟಿ.ಎಲ್.ಸ್ಪಂದನಾ ಮತ್ತು ಎಂ.ಧನುಶ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಅಂಕಣಕಾರ ರವೀಂದ್ರ ಎಸ್.ದೇಶಮುಖ್ ಅವರ ಜೂರೂರ್ ಮಾತು ಪುಸ್ತಕವನ್ನು ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಬಿಡುಗಡೆ ಮಾಡಿದರು.
ಪರಿಷತ್ತಿನ ಧ್ಯೇಯೋದ್ದೇಶಗಳನ್ನು ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಪ್ರಸ್ತಾಪಿಸಿದದರು. ಸಮ್ಮೇಳನದ ಸರ್ವಾಧ್ಯಕ್ಷೆ ಎಚ್.ವಿ.ಚಂದನ, ಸಹ ಅಧ್ಯಕ್ಷ ರಾದ ಜಿ.ಜೆ.ಯಶವಂತ್, ಬಿ.ಜಿ.ಸುಹಾಸ್, ಸಿ.ಎಚ್.ಕಾವ್ಯಶ್ರೀ, ಡಿ.ಎಸ್.ನಿಸರ್ಗ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಮದನಗೌಡ, ಶಿವಾನಂದ ತಗಡೂರು, ನಾಯಕರಹಳ್ಳಿ ಮಂಜೇಗೌಡ, ಕಲ್ಪನಾ ಸುರೇಶ್, ಎಚ್.ಎನ್.ನವೀನ್, ಎಚ್.ಎನ್.ಲೋಕೇಶ್, ಎನ್.ಕೃಷ್ಣೇಗೌಡ, ನೀಲಾಸ್ವಾಮಿ, ಲತಾ ಪುಟ್ಟೇಗೌಡ, ಪಟೇಲ್ ಮಂಜುನಾಥ್ ಇದ್ದರು.