ಹಾಸನ; ಅರಕಲಗೂಡು ಪಟ್ಟಣದ ಚಿನ್ನಾಭರಣ ಅಂಗಡಿಯೊಂದರಲ್ಲಿ ಕಳವಾಗಿದ್ದ 3,511 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹೇಳಿದರು.
ಅರಕಲಗೂಡು ಪಟ್ಟಣದ ಮಾರುತಿ ಕಾಂಪ್ಲೆಕ್ಸ್ ನಲ್ಲಿರುವ ಮದನ್ ಲಾಲ್ ಎಂಬುವವರ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯೂವೆಲ್ಲರ್ಸ್ನಲ್ಲಿ ಇತ್ತೀಚೆಗೆ 3 ಕೆಜಿ 511 ಗ್ರಾಂ ಚಿನ್ನಾಭರಣ ಹಾಗೂ 6.03 ಲಕ್ಷ ರೂ. ನಗದು ಕಳವವಾಗಿತ್ತು. ಈ ಸಂಬಂಧ ರಾಜಸ್ಥಾನ ರಾಜ್ಯದ ಪಾಲಿ ಎಂಬ ಜಿಲ್ಲೆಯ ಜೈತಾರನ್ ತಾಲೂಕಿನ ರಾಜಾದಂಡ್ ಗ್ರಾಮದ ಓಂ ಪ್ರಕಾಶ್ (23) ಮತ್ತು ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಬರಗೂರು ಗ್ರಾಮದ ಆಟೋ ಚಾಲಕ ರಘು (27) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮದನ್ ಲಾಲ್ ಕಳೆದ ಆ.19ರಂದು ವ್ಯಾಪಾರ ಮಾಡಿ ಎಂದಿನಂತೆ ರಾತ್ರಿ 7.30ಕ್ಕೆ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಹೋಗಿದ್ದಾರೆ. 20ರಂದು ಭಾನುವಾರ ಅಂಗಡಿ ರಜೆ ಮಾಡಿ ಮೈಸೂರಿಗೆ ತೆರಳಿ ರಾತ್ರಿ 8ಕ್ಕೆ ಮನೆಗೆ ಬಂದಿದ್ದಾರೆ. 21ರಂದು ಬೆಳಗ್ಗೆ ಎಂದಿನಂತೆ ಅಂಗಡಿಯನ್ನು ತೆರೆಯಲು ಕೀ ಇದ್ದ ಬ್ಯಾಗ್ ತೆಗೆದು ನೋಡಿದಾಗ ಬ್ಯಾಗ್ನಲ್ಲಿ ಕೀ ನಾಪತ್ತೆಯಾಗಿದೆ. ನಂತರ ಮತ್ತೊಂದು ಕೀ ಬಳಿಸಿ ಅಂಗಡಿಯನ್ನು ತೆರೆದಿದ್ದಾರೆ. ಒಳ ಹೋಗಿ ಲಾಕರ್ಗಳನ್ನು ಪರಿಶೀಲಿಸಿದಾಗ ಗಿರವಿ ಇಟ್ಟ ಹಾಗೂ ಮಾರಾಟಕ್ಕೆ ಇದ್ದ 3 ಕೆಜಿ 511 ಗ್ರಾಂ ಚಿನ್ನಾಭರಣಗಳು ಮತ್ತು 6.03 ಲಕ್ಷ ರು. ನಗದು ಕಳುವಾಗಿತ್ತು. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿಸಿದರು.
ಈ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ವೈಜನಾಥ್ ಹಾಗೂ ಡಿವೈಎಸ್ಪಿ ಎಂ.ಎನ್. ಶಶಿಧರ್ ಅವರ ಮಾರ್ಗದರ್ಶನದಲ್ಲಿ ಹೊಳೆನರಸೀಪುರ ಉಪ-ವಿಭಾಗದ ಇನ್ಸ್ಪೆಕ್ಟರ್ ಶಿವರಾಜ್ ಆರ್.ಮುಧೋಳ್, ಅರಕಲಗೂಡು ಪಿಎಸ್ಐ ರವಿಕಿರಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಓಂ ಪ್ರಕಾಶ್ ಮತ್ತು ರಘುನನ್ನು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿ ಓಂ ಪ್ರಕಾಶ್, ಈ ಹಿಂದೆ ಇದೇ ಚಿನ್ನಾಭರಣದ ಅಂಗಡಿಯ ಮಾಲೀಕ ಮದನ್ ಲಾಲ್ ಅವರ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯೂವೆಲ್ಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ, ಇತ್ತೀಚೆಗೆ ಆತ ವಾಟರ್ ಸಪ್ಲೆ ಕೆಲಸವನ್ನು ಪ್ರಾರಂಭಿಸಿದ್ದರಿಂದ ಮದನ್ ಲಾಲ್ ಹತ್ತಿರ ಕೆಲಸವನ್ನು ಬಿಟ್ಟಿದ್ದ. ಈತ ರಾಜಸ್ಥಾನದವನೇ ಆಗಿದ್ದರಿಂದ ಮದನ್ ಲಾಲ್ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ.
ಆ.20ರಂದು ಮದನ್ ಲಾಲ್ ಮನೆಗೆ ಬಂದು ಅಂಗಡಿಯ ಕೀ ಇದ್ದ ಬ್ಯಾಗ್ನಲ್ಲಿ ಕಲ್ಲನ್ನು ಇಟ್ಟು ಕೀ ಅನ್ನು ತೆಗೆದುಕೊಂಡು ಹೋಗಿದ್ದಾನೆ. ನಂತರ ಅಂಗಡಿಯ ಕೀ ಅನ್ನು ತೆಗೆದು ಅಂಗಡಿಯಲ್ಲಿ ಇದ್ದ 3 ಕೆಜಿ 511 ಗ್ರಾಂ ಚಿನ್ನಾಭರಣ ಹಾಗೂ 6.03 ಲಕ್ಷ ರೂ. ನಗದು ಕಳವು ಮಾಡಿ ಅದನ್ನು ರಘು ಹತ್ತಿರ ನೀಡಿದ್ದ. ಈ ಸಂಬಂಧ ಆರೋಪಿ ಓಂ ಪ್ರಕಾಶ್ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ವೈಜನಾಥ್, ಡಿವೈಎಸ್ಪಿ ಎಂ.ಎನ್. ಶಶಿಧರ್, ಇನ್ಸ್ಪೆಕ್ಟರ್ ಶಿವರಾಜ್ ಆರ್.ಮುಧೋಳ್, ಪಿಎಸ್ಐ ರವಿಕಿರಣ್ ಹಾಜರಿದ್ದರು.
-----------
ಸಿಸಿಟಿವಿ ಅಳವಡಿಕೆಯಿಂದ ಕಳ್ಳತನ ಪತ್ತೆ ಹಚ್ಚಳು ಸಹಕಾರಿ
ಇತ್ತೀಚೆಗೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಳು ಸಿಸಿ ಟಿವಿ ಸಹಕಾರಿಯಾಗುತ್ತಿದ್ದು ಅಂಗಡಿ ವ್ಯಾಪಾರಿಗಳು ಸಿಸಿ ಟಿವಿ ಅಳವಡಿಕೆ ಮಾಡಿಕೊಳ್ಳುವುದರಿಂದ ಪ್ರಕರಣವನ್ನು ವೇಗವಾಗಿ ಪತ್ತೆ ಹಚ್ಚ ಬಹುದು. ಅಲ್ಲದೆ ಮನೆಗಳ್ಳತನ ಪ್ರಕರಣದಲ್ಲೂ ಸಿಸಿಟಿವಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
---------
ತಾಲೂಕು ಕೇಂದ್ರಗಳಿಗೆ ಮತ್ತಷ್ಟು ಸಿಸಿ ಟಿವಿ
ಮಹಾಸ್ತಕಾಭಿಷೇಕಕ್ಕೆ 100ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಅಳವಡಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಹಾಮಸ್ತಕಾಭಿಷೇಕದ ಬಳಿಕ ಈ ಎಲ್ಲ ಸಿಸಿ ಕ್ಯಾಮೆರಾಗಳನ್ನು ಜಿಲ್ಲೆಯ ಎಲ್ಲ ತಾಲೂಕುಗಳ ಮುಖ್ಯ ಕೇಂದ್ರಗಳಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಸಹಕಾರಿಯಾಲಿದೆ .
----------
ಚಿತ್ರ ಇದೆ