ಕೊಣನೂರು: ಭಾಸ್ಕರ ಕ್ಷೇತ್ರ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ರಾಮನಾಥಪುರವನ್ನು ಪ್ರಮುಖ ಯಾತ್ರಾಸ್ಥಳವನ್ನಾಗಿಸಲು ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.
ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿಯ ಕಾವೇರಿ ನದಿಯಲ್ಲಿ 12 ದಿನಗಳ ಪುಷ್ಕರ ಸ್ನಾನದ ಮೊದಲ ದಿನವಾದ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನಾಥಪುರ ಕ್ಷೇತ್ರವು ದೇಶದ ಪ್ರಮುಖ ಯಾತ್ರಾ ಸ್ಥಳವನ್ನಾಗಿಸಲು ಮೊದಲು ಸ್ಥಳೀಯರು ನಿಮ್ಮ ಭಾಗಗಳ ವಿಶೇಷತೆಗಳ ಬಗ್ಗೆ ಗೌರವಿಸಬೇಕು. ಇಂದು ಪುಷ್ಕರ ಸ್ನಾನದ ಮೂಲಕ ರಾಮನಾಥಪುರ ಇತಿಹಾಸ ಪುಟಕ್ಕೆ ಸೇರಿದಂತಾಗಿದೆ. ಹಿಂದಿನಿಂದ ನಾವು ನಂಬಿಕೊಂಡು ಬಂದಿರುವ ಪುರಾಣಗಳು, ಸಂಪ್ರದಾಯಗಳಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ನೆಮ್ಮದಿ ಹಾಗೂ ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು. ಇದರಿಂದ ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ಎಲ್ಲರೂ ಸಮೃದ್ಧರಾಗಿರುತ್ತಾರೆ ಎಂದು ಹೇಳಿದರು.
ಕಾವೇರಿ ನದಿಗೆ ಕರ್ನಾಟಕದಲ್ಲಿ ಪುಷ್ಕರಣಿ ಇರುವುದು ರಾಮನಾಥಪುರದಲ್ಲಿ ಮಾತ್ರ. ಹೀಗಾಗಿ ಈ ಪುಷ್ಕರ ಸ್ನಾನದ ಬಗ್ಗೆ ಸಾರ್ವಜನಿಕರು ನಿಮ್ಮ ನಿಮ್ಮ ನೆಂಟರಿಷ್ಟರಿಗೆ ತಿಳಿಸುವ ಮೂಲಕ ಇನ್ನೂ ಹೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈ ಒಂದು ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಿ ಪಾಪಗಳನ್ನು ಕಳೆದುಕೊಳ್ಳೋಣ ಎಂದರು.
ರಾಮನಾಥಪುರದಲ್ಲಿ ಈ ಒಂದು ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯುತ್ತಿರುವುದಕ್ಕೆ ಗ್ರಾಮದ ಮುಖಂಡರು, ಸಂಘ ಸಂಸ್ಥೆ, ಗ್ರಾಪಂ, ತಾಲೂಕು ಆಡಳಿತದ ಅಧಿಕಾರಿಗಳಿಗೆ ಅಭಾರಿಯಾಗಿದ್ದೇನೆ. ಪುಷ್ಕರ ಸ್ನಾನ ನಡೆಯುವ ಜಾಗದಲ್ಲಿ ಹಾಗೂ ಗ್ರಾಮದಲ್ಲಿ ಎಲ್ಲ ಸೌಲಭ್ಯಗಳನ್ನೂ ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅರಕಲಗೂಡು ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ನಮಗೆಲ್ಲಾ ಹೊಸತು, ನಾವು ಉತ್ತರ ಭಾರತದಲ್ಲಿ ನಡೆಯುವ ಕುಂಭಮೇಳಗಳನ್ನು ಮಾತ್ರ ನೋಡುತ್ತಿದ್ದೆವು. ಈ ಪುಷ್ಕರ ಸ್ನಾನಾಚರಣೆ ಗಂಗಾ, ಯಮುನಾ, ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ ನಡೆಯುತ್ತಿತ್ತು. ದಕ್ಷಿಣ ಭಾರತದಲ್ಲಿ ಇರಲಿಲ್ಲ ಎಂದರು.
ಪ್ರಥಮವಾಗಿ ಇಲ್ಲಿ ಆರಂಭವಾಗಿರುವ ಕಾವೇರಿ ಪುಷ್ಕರ ಸ್ನಾನಾಚರಣೆ ಕಾರ್ಯಕ್ರಮವು ಇಷ್ಟು ವ್ಯವಸ್ಥಿತವಾಗಿ ಆಯೋಜಿಸಿ ನಡೆಯುತ್ತಿರುವುದನ್ನು ನೋಡಿದರೆ ಉತ್ತರ ಭಾರತದಲ್ಲಾಗುವ ಕುಂಭಮೇಳಗಳಿಗಿಂತ ಕಡಿಮೆಯಿಲ್ಲ ಎಂಬ ಭಾಸವಾಗುತ್ತಿದೆ. ಇಷ್ಟು ವ್ಯವಸ್ಥಿತವಾಗಿ ಆಯೋಜಿಸಿರುವ ಸಚಿವರಿಗೆ ಒಳಿತಾಗಲಿ ಎಂದರು.
ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಾರ್ವಜನಿಕರು ನಿಮ್ಮ ಬಂಧು-ಬಳಗ, ಕುಟುಂಬ, ಗ್ರಾಮದವರನ್ನು ಕರೆದುಕೊಂಡು ಬರುವ ಮೂಲಕ ಪುಣ್ಯಕ್ಕೆ ಭಾಜನರಾಗಬೇಕು. ಕಾವೇರಿ ಮಾತೆಗೆ ಈ ಕಾಲದಲ್ಲಿ ವಿಶೇಷ ಶಕ್ತಿಯಿರುತ್ತದೆ. ಹೀಗಾಗಿ 12 ಅವತಾರ ಹೊತ್ತಂತಹ ಆರತಿಗಳನ್ನು ಬೆಳಗಲಾಗುತ್ತದೆ ಎಂದರು.
ಧಾರ್ಮಿಕ ಕಾರ್ಯಕ್ರಮದ ನಂತರ ಕಾವೇರಿ ಮಾತೆಗೆ 12 ವಿಧದ ಆರತಿಗಳಾದ ಓಂ ಆರತಿ, ಹಂಸಾರತಿ, ಗರುಡಾರತಿ, ಬ್ರಹ್ಮಾರತಿ, ಸಿಂಹಾರತಿ, ಸೂರಾರಯರತಿ, ಕುಂಭಾರತಿ, ನವಗ್ರಹ ಆರತಿ, ಪಂಚಾರತಿ, ನಾಗಾರತಿ, ಚಂದ್ರಾರತಿ, ನಂದಿ ಆರತಿಗಳನ್ನು ನೆರವೇರಿಸಿ ಕೊನೆಯದಾಗಿ ನಕ್ಷ ತ್ರಾರತಿಯನ್ನು ನೆರವೇರಿಸಲಾಯಿತು.
ಗುರುಪ್ರಕಾಶ್ ಗುರೂಜಿ, ಎಪಿಎಂಸಿ ಅಧ್ಯಕ್ಷ ಕಂಬೇಗೌಡ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ನಿರ್ದೇಶಕ ಕಬ್ಬಳಿಗೆರೆ ಬೈರೇಗೌಡ, ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ ಚೌಡೇಗೌಡ, ಗ್ರಾಪಂ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷೆ ವಸಂತಕುಮಾರಿ, ಪಿಡಿಒ ವಿಜಯ್ ಕುಮಾರ್, ತಹಸೀಲ್ದಾರ್ ಪ್ರಸನ್ನಮೂರ್ತಿ, ಸಾರ್ವಜನಿಕರು ಉಪಸ್ಥಿತರಿದ್ದರು.