ಹಾಸನ: ರಣಘಟ್ಟ ಒಡ್ಡು, ಹಳೇಬೀಡು ಹಾಗೂ ಜಾವ್ಗಲ್ ಹೋಬಳಿಯ ಕೆರೆ ಕಟ್ಟೆಗೆ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆ ಪ್ರಸ್ತಾವವನ್ನು ಸರಕಾರಕ್ಕೆ ಕಳುಹಿಸದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಪುಷ್ಪಗಿರಿ ಸ್ವಾಮೀಜಿ ಹಾಗೂ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ವಾರದೊಳಗೆ ಸರಕಾರ ಮಂಜೂರಾತಿ ನೀಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆಯನ್ನು ನೀಡಿದರು.
ಹಳೇಬೀಡು, ಮಾದೀಹಳ್ಳಿ ಹೋಬಳಿಗಳಿಗ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಿಕೊಡಲು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ, ಜನಪ್ರತಿನಿಧಿಗಳು, ಸರಕಾರ, ಅಧಿಕಾರಿಗಳು ಸ್ಪಂದಿಸದ ಕಾರಣ ಬೇಲೂರಿನಲ್ಲಿ ಸೆ.4 ರಂದು ಹೋರಾಟ ಮಾಡಿದ್ದೆವು. ಕಡತ ಎಲ್ಲಿದೆ ಎಂಬುದನ್ನು ತಿಳಿಯಲು ಮಿನಿವಿಧಾನಸೌಧದ ಜಿಲ್ಲಾ ಕೇಂದ್ರದ ಕಚೇರಿಗೆ ಬಂದು ಮಾಹಿತಿ ಪಡೆದಾಗ ಕಡತ ಇಲ್ಲೇ ಇರುವುದು ತಿಳಿಯಿತು ಎಂದು ಪುಷ್ಪಗಿರಿ ಮಹಾ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಹಳೇಬೀಡು ಮಾದೀಹಳ್ಳಿ ಹೋಬಳಿಯ ಪ್ರದೇಶಗಳು ಬಹು ವರ್ಷಗಳಿಂದಲೂ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಡಿದ ಮನವಿಗೆ ಭರವಸೆ ಹೊರತಾಗಿ ಬೇಡಿಕೆ ಈಡೇರಿಲ್ಲ ಎಂದು ದೂರಿದರು.
ಎರಡು ವರ್ಷದ ಹೋರಾಟದ ಬಳಿಕ ಪ್ರಸ್ತಾವಕ್ಕೆ ಕಡತ ಸಿದ್ಧವಾದರೂ, ಸರಕಾರಕ್ಕೆ ಕಳುಹಿಸಲು ಅಧಿಕಾರಿಗಳ ಉದಾಸೀನವೇಕೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ಅಂದಾಜು ಯೋಜನೆ ಅನ್ವಯ 130ರಿಂದ 150 ಕೋಟಿ ವೆಚ್ಚದ ಯೋಜನೆ ಇದಾಗಿದೆ. 12 ಕಿಮೀ ಕಾಲುವೆ ನಿರ್ಮಿಸಬೇಕಿದೆ ಅಂತಹ ದೊಡ್ಡ ಯೋಜನೆಯೂ ಅಲ್ಲ ಎಂದರು.
ಸರಕಾರ ಈ ಪ್ರದೇಶಕ್ಕೆ ಶಾಶ್ವತ ನೀರು ಒದಗಿಸಲು ಮುಂದಾಗಲಿ. ಇಲ್ಲವೇ ಈ ಪ್ರದೇಶದ ಜನರಿಗೆ ಪರ್ಯಾಯ ವ್ಯವಸ್ತೆಯನ್ನು ಕಲ್ಪಿಸಿಕೊಡಲಿ. ಅಲ್ಲಿಯವರೆವಿಗೂ ಈ ಹೋರಾಟ ನಿರಂತರ ಎಂದರು.
ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ರಣಘಟ್ಟವನ್ನು ಪುನರುಜ್ಜೀವನಗೊಳಿಸಿ, ಹಳೇಯ ಕಾಲುವೆಯನ್ನು ದುರಸ್ತಿಪಡಿಸಿ ನೀರು ಹರಿಸಬಹುದಾಗಿದೆ. ಇದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿಲ್ಲ.
ಕ್ಷೇತ್ರದ ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿಲ್ಲ. ರೈತರ ಹಿತದೃಷ್ಟಿಯಿಂದ ಹೋರಾಟ ಅನಿವಾರ್ಯ ಎಂಬುದನ್ನು ಮನಗಂಡು ಸೆ.4 ರಂದು ಬೇಲೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇಷ್ಟಾದರೂ, ಸರಕಾರ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ ಎಂದರು.
ವಾಗ್ದಾನ ಏನಾಯಿತು?
ಶಾಸಕರ ಸಹೋದರ ವೈ.ಎನ್.ಕೃಷ್ಣೇಗೌಡ ಬೇಲೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಸಹೋದರರೊಂದಿಗೆ ಸರಕಾರ ಮಟ್ಟದಲ್ಲಿ ವ್ಯವಹರಿಸಿ, ಒಂದು ವಾರದಲ್ಲಿ ರಣಘಟ್ಟ ಯೋಜನೆಗ ಮಂಜೂರಾತಿ ಮತ್ತು ಹಣ ಬಿಡುಗಡೆ ಮಾಡಿಸಿಕೊಡುವ ಭರವಸೆಯನ್ನು ನೀಡಿದ್ದರು ತಪ್ಪಿದಲ್ಲಿ ತಮ್ಮ ಸಹೋದರರಿಂದ ರಾಜೀನಾಮೆಯನ್ನು ಕೊಡಿಸುವುದಾಗಿಯೂ ವಾಗ್ದಾನ ಮಾಡಿದರು. ಆದರೆ ಒಂದುವಾರವಾದರೂ ಬೇಡಿಕೆ ಈಡೇರಿಲ್ಲ, ರಾಜೀನಾಮೆಯನ್ನು ನೀಡಿಲ್ಲ ಎಂದು ಸ್ವಾಮೀಜಿ ಹಾಗೂ ರೈತರು ಪ್ರಶ್ನಿಸಿದರು. ರೈತಸಂಘದ ಮುಖಂಡರಾದ ಕೆ.ಪಿ.ಕುಮಾರ್, ಶಿವಪ್ಪ, ಮುನ್ನಸಾಬ್, ಗಡಿ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.
-----------------
ನಿರಶನ ಬೆದರಿಕೆ
ಇನ್ನು ಕೈಕಟ್ಟಿ ಕೂರುವುದಿಲ್ಲ. ಸರಕಾರ ಮುಂದಿನ ಒಂದುವಾರದಲ್ಲಿ ಯೋಜನೆಗೆ ಮಂಜೂರಾತಿ ನೀಡದೆ ಹೋದಲ್ಲಿ ಈ ಭಾಗದ ಕೋಳಗುಂದ ಮಠದ ಸ್ವಾಮಿಜಿ ಸೇರಿದಂತೆ ಆರುಜನ ಸ್ವಾಮೀಜಿಗಳು , ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ಬೃಹತ್ ಸಂಖ್ಯೆಯ ರೈತರು ನಮ್ಮ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.
- ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಮಹಾ ಮಠ ಹಳೇಬೀಡು
----------------
ನೀರಿನಲಭ್ಯತೆ ಬಗ್ಗೆ ವರದಿ ನೀಡುವಂತೆ ಉಪವಿಭಾಗದ ಅಧಿಕಾರಿಗಳಿಗೆ ಈ ಹಿಂದೆಯೇ ಕೋರಿದ್ದೆವು. ಅವರು ನೀಡಿರಲಿಲ್ಲ. ಒಂದುವಾರದಲ್ಲಿ ಕೊಡುವಂತೆ ಸೂಚಿಸಿದ್ದೇನೆ. ಗುರುವಾರ ಅಥವಾ ಶುಕ್ರವಾರ ವರದಿ ಕೈಸೇರಲಿದ್ದು, ಬಳಿಕ ಶೀಘ್ರವಾಗಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ.
- ವಿ.ವಿ.ನಾರಾಯನ್ ಎಕ್ಸಿಕ್ಯೂಟೀವ್ ಎಂಜಿನಿಯರ್ ನೀರಾವರಿ ಇಲಾಖೆ ಹಾಸನ