ಅರಕಲಗೂಡು: ತಾಲೂಕಿನ ಎಲ್ಲ 36 ಗ್ರಾಮ ಪಂಚಾಯಿತಿಗಳಲ್ಲಿ ಕೂಡಲೇ ಬಾಪೂಜಿ ಕೇಂದ್ರಗಳ ಆರಂಭ ಹಾಗೂ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ರೈತರು ಮೆರವಣಿಗೆ ತೆರಳಿ ಅನಕೃ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ತಾಲೂಕು ಕಚೇರಿ ಎದುರು ಕುಳಿತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಇಡೀ ರಾಜ್ಯದಲ್ಲಿ ಜಾರಿಗೊಂಡಿರುವ ಬಾಪೂಜಿ ಸೇವಾ ಕೇಂದ್ರ ತಾಲೂಕಿನ ಯಾವುದೇ ಗ್ರಾಪಂ ಕಚೇರಿಗಳಲ್ಲಿ ಆರಂಭಗೊಂಡಿಲ್ಲ. ಹತ್ತಾರು ಕಿಮೀ ದೂರದ ತಾಲೂಕು ಕಚೇರಿ ಅಥವಾ ನಾಡ ಕಚೇರಿಗಳಿಗೆ ರೈತರು ತಮ್ಮ ಕೃಷಿ ಜಮೀನಿನ ದಾಖಲಾತಿಗಳನ್ನು ಪಡೆಯಲು ಬರಬೇಕಿದೆ. ಈ ಸಮಸ್ಯೆ ನಿವಾರಣಗೆ ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಆದರೆ, ಈವರೆಗೂ ಒಂದೇ ಒಂದು ಪಂಚಾಯಿತಿಗಳಲ್ಲಿ ಪಹಣಿ, ಇತರೆ ದಾಖಲೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. 20ವರ್ಷಗಳಿಂದ ಬಗರ್ಹುಕುಂ ಸಾಗುವಳಿ ಚೀಟಿ ನೀಡಿಲ್ಲ. ರಾಗಿ ಜೋಳ ಕೊಯ್ಲು ಮುಗಿದು ಮಾರಾಟ ಪ್ರಾರಂಭವಾದರೂ ಖರೀದಿ ಕೇಂದ್ರ ತೆರೆದಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಮಾತನಾಡಿ, ಬೆಳೆ ವಿಮೆಯನ್ನು ಕಟ್ಟಿಸಿಕೊಂಡಿದ್ದಾರೆ. ಬೆಳೆ ಕಳೆದುಕೊಂಡರೂ ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ನಿಖರ ವರದಿ ಸಲ್ಲಿಸಿಲ್ಲ. ಬೆಳೆಯೂ ಇಲ್ಲ, ಕಟ್ಟಿರುವ ವಿಮೆ ಹಣವೂ ಇಲ್ಲವಾಗಿದೆ. ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸದಿರುವುದು ಕೊಳವೆ ಬಾವಿಯನ್ನು ನಂಬಿ ಜೀವನ ಮಾಡುತ್ತಿರುವ ರೈತರಿಗೆ ತುಂಬಾ ಸಮಸ್ಯೆಯಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಸ್ವಾಮೀಗೌಡ, ರುದ್ರೇಶ್ಗೌಡ, ಉಮೇಶ್, ರವಿ ಬಂಡಿಗನಹಳ್ಳಿ, ಜಗದೀಶ್, ಹೊಂಬೇಗೌಡ, ಕೃಷ್ಣೇಗೌಡ ಪಾಲ್ಗೊಂಡಿದ್ದರು.
ನಂತರ ಗ್ರೇಡ್-2 ತಹಸೀಲ್ದಾರ್ ಪಾರ್ಥಸಾರಥಿಗೆ ಮನವಿ ಸಲ್ಲಿಸಿದರು.