ಆ್ಯಪ್ನಗರ

ಪಿಡಿಒ ವರದಿ ಸತ್ಯಾಸತ್ಯತೆಗೆ ನೋಡೆಲ್‌ ಅಧಿಕಾರಿಗಳ ತಂಡ

ಪಿಡಿಒ ವರದಿ ಸತ್ಯಾಸತ್ಯತೆಗೆ ನೋಡೆಲ್‌ ಅಧಿಕಾರಿಗಳ ತಂಡ * ಅರಸೀಕೆರೆ ತಾಲೂಕಿನಲ್ಲಿ ಏಳು ಸಾವಿರ ವಸತಿ ರಹಿತರು * ಅನುಮಾನ ಸೃಷ್ಟಿಸಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ...

Vijaya Karnataka 31 Jul 2018, 5:00 am
ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ 7 ಸಾವಿರ ಕುಟುಂಬಗಳಿಗೆ ವಸತಿ ಇಲ್ಲ...!
Vijaya Karnataka Web hassan arasikere 12 thousand families not have house pdo report
ಪಿಡಿಒ ವರದಿ ಸತ್ಯಾಸತ್ಯತೆಗೆ ನೋಡೆಲ್‌ ಅಧಿಕಾರಿಗಳ ತಂಡ


ಹೌದು, ಇಂತಹದ್ದೊಂದು ವರದಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡಿದ್ದು ಕ್ಷೇತ್ರದ ಶಾಸಕರು, ಅಧಿಕಾರಿಗಳನ್ನು ದಂಗುಬಡಿಸಿದೆ. ವರದಿಯಿಂದ ಕಂಗಾಲಾದ ಜಿಲ್ಲಾಡಳಿತ ಪಿಡಿಒಗಳು ನೀಡಿರುವ ವರದಿ ಅಸಲಿಯೇ ಎಂಬುದನ್ನು ಪರಿಶೀಲಿಸಲು ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ವಸತಿ ನಿಗಮದ ಆಯುಕ್ತರು ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅರಸೀಕೆರೆ ತಾಲೂಕಿನಲ್ಲಿ 7 ಸಾವಿರ ವಸತಿ ರಹಿತ ಕುಟುಂಬಗಳಿವೆ ಎಂಬ ವರದಿಯನ್ನು ನೀಡಲಾಗಿತ್ತು. ಈ ವರದಿ ಜಿಲ್ಲಾಡಳಿತಕ್ಕೆ ಅನುಮಾನ ಮೂಡಿಸಿದ್ದು ಸದ್ಯ ಅಸಲಿ ಸತ್ಯ ಅರಿಯಲು ಮುಂದಾಗಿದೆ.

ಇತ್ತೀಚೆಗೆ ಗ್ರಾಪಂ ಪಿಡಿಒಗಳು ನಿರಂತರವಾಗಿ ಗ್ರಾಮಗಳಲ್ಲಿ ಸರ್ವೆ ನಡೆಸಿ 15 ದಿನದ ಹಿಂದೆ ಸಲ್ಲಿಸಿದ ವರದಿಯಲ್ಲಿ ವಸತಿ ರಹಿತರು ಇನ್ನೂ ಏಳು ಸಾವಿರ ಇದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಷ್ಟೇ ಪ್ರಮಾಣದಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಮಾಹಿತಿ ವರದಿ ಜಿಪಂ ಸಿಇಒ ಮತ್ತಿತರ ಅಧಿಕಾರಿಗಳ ಕೈಸೇರಿದ್ದು, ಎಲ್ಲೋ ಒಂದು ಕಡೆ ಅನುಮಾನ ಹುಟ್ಟುಹಾಕಿದೆ. ಯಾವುದೋ ಒತ್ತಡಕ್ಕೋ, ಮತ್ಯಾವುದೋ ಮುಲಾಜಿಗೂ ಒಳಗಾಗಿ ಸಿದ್ಧವಾದ ವರದಿಯೇ? ಅಥವಾ ನೈಜವಾಗಿ ಏಳು ಸಾವಿರ ವಸತಿ ರಹಿತರು ಇದ್ದಾರೆಯೇ? ಇದ್ದರೆ ಇದುವರೆಗೆ ಅವರಿಗೆ ಏಕೆ ವಸತಿ ಸಿಕ್ಕಿಲ್ಲ. ಅರ್ಹರು ಎಂದು ಪರಿಗಣಿಸಿದರೆ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ಚಿಂತನೆ ನಡೆಸಿದ ಅಧಿಕಾರಿಗಳು ಇದಕ್ಕೂ ಮೊದಲು 7 ಸಾವಿರ ವಸತಿ ರಹಿತರು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ.

ನೋಡೆಲ್‌ ಅಧಿಕಾರಿಗಳ ನೇಮಕ: ಪಿಡಿಒಗಳು ನೀಡಿದ ವರದಿ ಬೆನ್ನಲ್ಲೇ ತಾಲೂಕು ಮಟ್ಟದ ಅಧಿಕಾರಿಗಳನ್ನು ಪ್ರತಿ ಗ್ರಾಪಂಗೆ ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ಅವರಿಂದ ನೈಜತೆಯನ್ನು ಕಂಡುಕೊಳ್ಳಲು ನಿರ್ಧರಿಸಿ ಜಿಲ್ಲಾ ಪಂಚಾಯಿತಿ ತಾಪಂ ಇಒಗಳಿಗೆ ಆದೇಶ ನೀಡಿದೆ. ಈ ಆದೇಶದಂತೆ ತಾಪಂ ಇಒಗಳು ಕ್ರಮ ಕೈಗೊಂಡು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಅವರು ನೀಡುವ ವರದಿ ಬಳಿಕ ಸತ್ಯಾಸತ್ಯತೆ ತಿಳಿಯಬೇಕಿದೆ.

ಅರಸೀಕೆರೆ ತಾಲೂಕಿನಲ್ಲಿ 2011ರ ಜನಗಣತಿ ಅನ್ವಯ 3.15 ಲಕ್ಷ ಜನಸಂಖ್ಯೆ ಹೊಂದಿದ್ದು, ಪುರುಷರು 1.59 ಲಕ್ಷ ಹಾಗೂ ಮಹಿಳೆಯರು 1.57 ಲಕ್ಷ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಸತಿ ರಹಿತರು ಇದ್ದಾರೆಯೇ ಎಂಬುದು ಅಚ್ಚರಿ ಸಂಗತಿಯಾಗಿದೆ.
---------------
ಶಾಸಕ ಕೆ.ಎಂ.ಶಿವಲಿಂಗೇಗೌಡರು ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ. ಸಾವಿರಾರು ಸಂಖ್ಯೆಯ ವಸತಿ ರಹಿತರು ಶಾಸಕರ ಕಣ್ಣಿಗೆ ಬೀಳದಿರುವುದು ಹೇಗೆ ಎಂಬುದು ಯಕ್ಷ ಪ್ರಶ್ನೆ. ತಾಲೂಕಿನಲ್ಲಿ ಏಳು ಸಾವಿರ ಕುಟುಂಬ ವಸತಿರಹಿತರು ಇರುವುದು ಪಿಡಿಒಗಳ ಸರ್ವೆಯಿಂದ ತಿಳಿದು ಬಂದಿದೆ. ನೋಡೆಲ್‌ ಅಧಿಕಾರಿಗಳ ಮೂಲಕ ಮತ್ತೊಂದು ಸರ್ವೆ ನಡೆಸಿ ವರದಿ ನೀಡಲು ಜಿಪಂ ಸೂಚಿಸಿದೆ. ಅದರಂತೆ ಕ್ರಮ ಕೈಗೊಂಡಿದ್ದೇವೆ.
-ಕೃಷ್ಣಮೂರ್ತಿ, ತಾಪಂ ಇಒ ಅರಸೀಕೆರೆ
--------------
ರಾಜ್ಯ ವಸತಿ ನಿಗಮದ ಆಯುಕ್ತರಾದ ಅನ್ಬುಕುಮಾರ್‌ ಶನಿವಾರ ವಿಡಿಯೋಕಾನ್ಫರೆನ್ಸ್‌ ನಡೆಸಿ ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಅರಸೀಕೆರೆಯಲ್ಲಿ ಏಳು ಸಾವಿರ ಕುಟುಂಬಗಳು ವಸತಿ ರಹಿತವಾಗಿವೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಇದು ಸತ್ಯವಿದ್ದರೆ ಸರಕಾರ ಅವರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುತ್ತದೆ. ವರದಿ ತಪ್ಪು ಎಂದಾದರೆ ಅದನ್ನು ನೀಡಿದ ಅಧಿಕಾರಿಗಳು ಹೊಣೆಯಾಗುತ್ತಾರೆ.
-ಹೆಸರೇಳಲಿಚ್ಛಿಸದ ಜಿಪಂ ಅಧಿಕಾರಿ ಹಾಸನ
--------------
ಮೂರು ಬಾರಿ ಶಾಸಕನಾಗಿ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಾನಾ ಯೋಜನೆಯಲ್ಲಿ ಕಟ್ಟಿಸಿಕೊಟ್ಟಿದ್ದೇನೆ. ಅರಸೀಕೆರೆ ಪಟ್ಟಣದಲ್ಲಿ 1,300 ಮನೆಗಳನ್ನು ಕಟ್ಟಿಸಲಾಗುತ್ತಿದೆ. ಏನೇ ಹುಡುಕಿದರೂ 500 ಗುಡಿಸಲು ವಾಸಿಗಳು ಸಿಗಬಹುದು. 7 ಸಾವಿರ ಕುಟುಂಬ ಎಂದರೆ ಕುಟುಂಬದಿಂದ ಬೇರ್ಪಡೆಯಾಗಿ ಬಂದವರು, ಪುಟ್ಟಮನೆಯಲ್ಲಿ ನಾಲ್ಕಾರು ಮಕ್ಕಳು, ಪೋಷಕರು ವಾಸಿಸಲು ಆಗಲ್ಲ ಎಂದು ಬೇರೆಯಾದವರು ಇರಬೇಕು. ಸರ್ವೆಗೆ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿದ್ದು ಒಳ್ಳೆಯದೇ ಆಯಿತು. ಅರ್ಹರಿದ್ದರೆ ಅವರಿಗೆ ಮನೆ ಕೊಡೋಣ. 7 ಸಾವಿರ ಎಂದರೆ ನನಗೂ ಆಶ್ಚರ್ಯ ಆಗುತ್ತಿದೆ. ಸಾವಿರ, ಒಂದೂವರೆ ಸಾವಿರ ಅಂದರೆ ಒಪ್ಪಿಕೊಳ್ಳಬಹುದಿತ್ತು.
-ಕೆ.ಎಂ.ಶಿವಲಿಂಗೇಗೌಡ ಶಾಸಕ ಅರಸೀಕೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ